ಶಾಸ್ತ್ರ ಕೇಳಿದ್ದೇವೆ, ಕನ್ನಡಿಗರೇ ಮತ್ತೆ ಪ್ರಧಾನಿ ಅನ್ಬೇಡಿ; ಎ ಮಂಜು ಭರ್ಜರಿ ಟಾಂಗ್
ದೇವೇಗೌಡ ಕುಟುಂಬವನ್ನು ಟೀಕಿಸುತ್ತಲೇ ಬರುತ್ತಿರುವ ಕಾಂಗ್ರೆಸ್ ಮುಖಂಡ ಎ ಮಂಜು, ದೇವೇಗೌಡರು ಹಾಸನದಲ್ಲಿ ನಿಂತರೆ ಮಾತ್ರ ನಮ್ಮ ಬೆಂಬಲ, ಅವರ ಜಾಗಕ್ಕೆ ಬೇರೆಯವರನ್ನು ನಿಲ್ಲಿಸಿದರೆ, ನಾವು ಜೆಡಿಎಸ್ ಪರ ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ.
ಹಾಸನ, ಮಾರ್ಚ್ 9: ದೇವೇಗೌಡರ ಕುಟುಂಬವನ್ನು ಟೀಕಿಸುತ್ತಲೇ ಬರುತ್ತಿರುವ ಕಾಂಗ್ರೆಸ್ ಮುಖಂಡ ಎ ಮಂಜು, ದೇವೇಗೌಡರು ಹಾಸನದಲ್ಲಿ ನಿಂತರೆ ಮಾತ್ರ ನಮ್ಮ ಬೆಂಬಲ, ಅವರ ಜಾಗಕ್ಕೆ ಬೇರೆಯವರನ್ನು ನಿಲ್ಲಿಸಿದರೆ, ನಾವು ಜೆಡಿಎಸ್ ಪರ ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ.
ನಮ್ಮ ಪಕ್ಷದವರು ಮೊದಲು ಎಚ್ಚೆತ್ತುಕೊಳ್ಳಬೇಕು, ಎಲ್ಲೋ ಶಾಸ್ತ್ರ ನೋಡಿದ್ದೇವೆ, ಅದರಲ್ಲಿ ಕನ್ನಡಿಗರೇ ಮತ್ತೆ ಪ್ರಧಾನಿಯಾಗುವ ಅವಕಾಶವಿದೆ ಎಂದು ಹೇಳಿದರೆ ಕಷ್ಟ. ಅದಕ್ಕೆ ಕಾಂಗ್ರೆಸ್, ಈಗಲೇ ರಾಹುಲ್ ಗಾಂಧಿ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಎ ಮಂಜು, ಗೌಡ್ರಿಗೆ ಟಾಂಗ್ ನೀಡಿದ್ದಾರೆ.
ಸುಮಲತಾ ಬೆನ್ನಿಗೆ ಕಾಂಗ್ರೆಸ್ ಮುಖಂಡರು
ನಮ್ಮನ್ನು ಅಗಲಿರುವ ಅಂಬರೀಶ್ ಅವರಿಂದ ಹೆಚ್ಚಿನ ಲಾಭ ಪಡೆದುಕೊಂಡವರು ಜೆಡಿಎಸ್ ನವರು. ಈಗ ಅವರೇ, ಅಂಬಿ ಕುಟುಂಬದ ವಿರುದ್ದ ಮಾತನಾಡುತ್ತಿದ್ದಾರೆ. ಸಮಯಸಾಧಕ ರಾಜಕಾರಣ ಎಂದರೆ ಇದೇನೇ ಎಂದು ಮಂಜು ವಾಗ್ದಾಳಿ ನಡೆಸಿದ್ದಾರೆ.
ಹೆಣ್ಣಿನ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು, ಅದು ನಮ್ಮ ಸಂಸ್ಕೃತಿಗೆ ತೋರುವ ಅಗೌರವ. ನಮ್ಮ ಮಾನ್ಯ ಲೋಕೋಪಯೋಗಿ ಸಚಿವರು, ಮೊದಲು ಏಳನೇ ಕ್ಲಾಸ್ ಬುದ್ದಿಯನ್ನು ಬಿಡಬೇಕು ಎಂದು ಮಂಜು, ಕಿವಿಮಾತನ್ನು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಪ್ರಬುದ್ದತೆ ಅನ್ನೋದು ಇದೆಯಾ, ತಮ್ಮ ಕುಟುಂಬದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟು, ಕಾರ್ಯಕರ್ತರಿಗೆ ಸಿನಿಮಾ ಟಿಕೆಟ್ ನೀಡುತ್ತಾರೆಂದು ಮಂಜು ವ್ಯಂಗ್ಯವಾಡಿದ್ದಾರೆ.
ತಮ್ಮ ಉದ್ದಾರಕ್ಕಾಗಿಯೇ ಗೌಡ್ರು ಸಮ್ಮಿಶ್ರ ಸರಕಾರಕ್ಕೆ ಓಕೆ ಅಂದಿದ್ದು. ಪಕ್ಷವಿದ್ದರೆ ಸರಕಾರ ಅನ್ನೋದನ್ನು ನಮ್ಮದೇ ಸಂಸದ ಡಿ ಕೆ ಸುರೇಶ್ ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಮಂಜು ಹೇಳಿದ್ದಾರೆ.