2023ರ ಚುನಾವಣೆಯಲ್ಲೂ ಪ್ರೀತಂ ಗೌಡ ಗೆಲ್ತಾರೆ, ಹಾಸನದಲ್ಲಿ ಹೆಚ್ಚು ಸ್ಥಾನ ಬರುತ್ತೆ : ಬಿಎಸ್ವೈ
ಹಾಸನ, ಸೆಪ್ಟೆಂಬರ್ 19: ''2023ರ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಶಾಸಕ ಪ್ರೀತಂ ಜೆ. ಗೌಡರೆ ಗೆಲುವು ಪಡೆಯಲಿದ್ದಾರೆ. ಜೊತೆಗೆ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ'' ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನದ ವಿದ್ಯಾನಗರದಲ್ಲಿರುವ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರೀತಂ ಜೆ. ಗೌಡ ಒಬ್ಬ ಶಾಸಕರಾಗಿ ಈ ಭಾಗದಲ್ಲಿ ಮಾಡಿರುವ ಕೆಲಸ ಉಳಿದ ಶಾಸಕರಿಗೆ ಮಾದರಿಯಾಗಿ ಅವರು ಕೂಡ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಸನ ಕ್ಷೇತ್ರದ ಅಭಿವೃದ್ಧಿಗೆ ಬಹಳ ಆಡಚಣೆ ಇದ್ದರೂ ರಸ್ತೆ ಬದಿ ವ್ಯಾಪಾರಿಗಳಿಗೆ ಉತ್ತಮ ಪುಡ್ ಕೋರ್ಟ್ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ. ಮುಂದೆ ಶಿವಮೊಗ್ಗದಲ್ಲಿ ನಾನು ಇದೆ ರೀತಿ ಅಭಿವೃದ್ದಿ ಮಾಡುತ್ತೇವೆ. ಪ್ರೀತಂಗೆ ಉತ್ತಮ ಭವಿಷ್ಯವಿದ್ದು, ಶೇಕಡಾ 100 ರಷ್ಟು ಮುಂದಿನ ಚುನಾವಣೆಯಲ್ಲಿ ಜಯಗಳಿಸುತ್ತಾರೆ ಎಂದು ಭವಿಷ್ಯ ನುಡಿದರು.
ಸಚಿವ ಎಸ್.ಟಿ.ಸೋಮಶೇಖರ್ ರಾಜೀನಾಮೆ ನೀಡುವುದು ಒಳ್ಳೆಯದು: ಕುಮಾರಸ್ವಾಮಿ
ಹಾಸನ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಪ್ರಬಲವಾಗಿ ಸಂಘಟನೆ ಮಾಡಲಾಗುವುದು. ಅಧಿವೇಶನ ಮುಗಿದ ಮೇಲೆ ಎರಡು ತಂಡ ಮಾಡಿಕೊಂಡು ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರವಾಸ ಮಾಡಲಾಗುವುದು. ಮುಂದಿನ ಚುನಾವಣೆಯಲ್ಲಿ ಮೋದಿಯವರ ನೇತೃತ್ವದಲ್ಲಿ 140 ಸೀಟುಗಳಲ್ಲಿ ಜಯಗಳಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಗದ್ದುಗೆ ಏರಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಆಧಾರರಹಿತ ಆರೋಪ ಯಾರೂ ಬೇಕಾದರೂ ಮಾಡಬಹುದು
ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಶೇಕಡಾ 40 ಭ್ರಷ್ಟಾಚಾರ ಆರೋಪ ಆಧಾರ ರಹಿತವಾದದ್ದು, ಆಧಾರ ರಹಿತ ಆರೋಪಗಳನ್ನು ಯಾರು ಬೇಕಾದರೂ ಮಾಡಬಹುದು. ಸಿದ್ದರಾಮಯ್ಯ , ಡಿಕೆ ಶಿವಕುಮಾರ್ ತಮ್ಮ ಸರಕಾರದ ಅವಧಿಯಲ್ಲಿ ಮಾಡಿರುವ ಆರೋಪಗಳನ್ನು ಈಗ ನಮ್ಮ ಮೇಲೆ ಹೇಳುತ್ತಿರಬಹುದು. ವಿರೋಧ ಪಕ್ಷದವರು ದಾಖಲೆ ಇದ್ದರೆ ಸದನದಲ್ಲಿ ದಾಖಲಾತಿ ನೀಡಲಿ ಎಂದರು.
ಪಿಎಸ್ಐ ಹಗರಣದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ
ಇನ್ನು ಪಿಎಸ್ಐ ಹಗರಣ ಸೇರಿದಂತೆ ಎಲ್ಲಾ ಹಗರಣಗಳ ಬಗ್ಗೆ ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದಕ್ಕೆ ನಮ್ಮ ಸರಕಾರ ಬದ್ಧವಾಗಿದೆ, ಈಗಾಗಲೇ ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಾರೆ ಎಂದರು.
ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿರುವ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, "ಅದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ಅಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ'' ಎಂದು ತಿಳಿಸಿದರು.
ಸಿದ್ದರಾಮಯ್ಯ ಮೊದಲು ಕ್ಷೇತ್ರ ಹುಡುಕಿಕೊಳ್ಳಲಿ
ರಾಜ್ಯ ಸರ್ಕಾರದ ಹಗರಣದಲ್ಲಿ ಕೇಂದ್ರ ಸರ್ಕಾರಕ್ಕೆ ಪಾಲು ಇದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ ಬಿಎಸ್ವೈ, ಸಿದ್ದರಾಮಯ್ಯ ಹುಚ್ಚುಚ್ಚಾಗಿ ಮಾತನಾಡುವುದನ್ನು ನಿಲ್ಲಿಸಬೇಕು, ಅದು ಅವರಿಗೆ ಶೋಭೆ ತರುವುದಿಲ್ಲ. ಹೀಗೆ ಮಾಡಿಯೇ ಮೈಸೂರಿನಲ್ಲಿ ಸೋಲುಕಂಡಿದ್ದಾರೆ. ಬಾದಾಮಿಯಲ್ಲಿ ನಾನು ಒಂದು ದಿನ ಮುಂಚೆ ಹೋಗಿದ್ದರೆ ಅವರು ಅಲ್ಲಿಯೂ ಸೋಲು ಅನುಭವಿಸುತ್ತಿದ್ದರು. ಮೊದಲು ಅವರ ಕ್ಷೇತ್ರ ಯಾವುದು ಎಂದು ಹುಡುಕಿಕೊಳ್ಳಲಿ ಎಂದ ಅವರು, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಪರಿಣಾಮ ಬೀರುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ ಎಂದು ಲೇವಡಿ ಮಾಡಿದರು.
ರೇವಣ್ಣಗೆ ಹಾಸನ ಅಭಿವೃದ್ಧಿ ಮಾಡುವ ಮನಸಿಲ್ಲ
ಏರ್ಪೋರ್ಟ್ ಸೇರಿದಂತೆ ಶಿವಮೊಗ್ಗದಲ್ಲಿ ದೊಡ್ಡ ಪ್ರಾಜೆಕ್ಟ್ ಮಾಡುತ್ತಿದ್ದಾರೆ ಹಾಸನದಲ್ಲಿ ಬೇಡ ಎನ್ನುತ್ತಿದ್ದಾರೆ ಎಂಬ ರೇವಣ್ಣ ಆರೋಪ್ಪಕ್ಕೆ ಪ್ರತಿಕ್ರಿಯಿಸಿ, ರೇವಣ್ಣ ತಂದೆ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದು, ಅವರ ತಮ್ಮ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆಗ ವಿಮಾನ ನಿಲ್ದಾಣ ನಿರ್ಮಾಣದ ಪ್ರಯತ್ನ ಏಕೆ ಮಾಡಲಿಲ್ಲ. ಅವರದ್ದೇ ಅಧಿಕಾರವಿದ್ದರೂ ಆಗ ಯಾವುದೇ ಪ್ರಯತ್ನ ಮಾಡಲಿಲ್ಲ, ಅದಕ್ಕೆ ಆಸಕ್ತಿ ಇರಲಿಲ್ಲ ಎಂದು ಅರ್ಥವಲ್ಲವೇ? ಶಿವಮೊಗ್ಗ ಏರ್ಪೋರ್ಟ್ ಸುತ್ತಮುತ್ತಲಿನ ನಾಲ್ಕು ಐದಾರು ಜಿಲ್ಲೆಗೆ ಅನುಕೂಲವಾಗಲಿದೆ ಅದಕ್ಕಾಗಿ ದೊಡ್ಡದಾಗಿ ಮಾಡಲಾಗುತ್ತಿದೆ. ಹಾಸನ ಜಿಲ್ಲೆಗೆ ಬೇಕಾದರೆ ರೇವಣ್ಣನವರು ಪ್ರಯತ್ನ ಮಾಡಲಿ ಎಂದು ತಿರುಗೇಟು ನೀಡಿದರು.