ನಮ್ಮ ಕಾಂಗ್ರೆಸ್ಸಿನಿಂದ 40 ಕ್ಷೇತ್ರಗಳಲ್ಲಿ ಸ್ಪರ್ಧೆ : ವರ್ತೂರು ಪ್ರಕಾಶ್
ಹಾಸನ, ಡಿಸೆಂಬರ್ 06: ಕುರುಬ ಜನಾಂಗದ ಪ್ರಮುಖ ನಾಯಕ,ಶಾಸಕ ವರ್ತೂರು ಪ್ರಕಾಶ್ ಅವರು 'ನಮ್ಮ ಕಾಂಗ್ರೆಸ್' ಎಂಬ ಹೆಸರಿನ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿರುವ ವಿಷಯ ತಿಳಿದಿರಬಹುದು. ಪಕ್ಷದ ಉದ್ಘಾಟನೆಗೂ ಮುನ್ನ ಜನ ಸಂಘಟನೆಯಲ್ಲಿ ಪ್ರಕಾಶ್ ಅವರು ತೊಡಗಿದ್ದಾರೆ.
ಹಾಸನಕ್ಕೆ ಬಂದಿದ್ದ ಕೋಲಾರದ ಶಾಸಕ(ಪಕ್ಷೇತರ) ವರ್ತೂರು ಪ್ರಕಾಶ್ ಅವರು "ನಮ್ಮ ಕಾಂಗ್ರೆಸ್' ಎಂಬ ಪಕ್ಷವನ್ನು ಸ್ಥಾಪಿಸುತ್ತಿದ್ದು, ಡಿಸೆಂಬರ್ 19ರಂದು ಕೂಡಲಸಂಗಮದಲ್ಲಿ ನೂತನ ಪಕ್ಷ ಉದಯವಾಗಲಿದೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 5 ಲಕ್ಷಕ್ಕೂ ಅಧಿಕ ಜನ ಅಂದು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಾಮರಾಜನಗರದಿಂದ ಬೀದರ್ ವರೆಗೆ ರಾಜ್ಯದ ಎಲ್ಲ ಕಡೆ ಪ್ರವಾಸ ಮಾಡಿ, ರಾಷ್ಟ್ರೀಯ ಪಕ್ಷಗಳ ಹುಳುಕುಗಳನ್ನು ಜನರ ಮುಂದಿಡುತ್ತೇನೆ, ಜನರಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆಯ ಮನವರಿಕೆ ಮಾಡಿಕೊಡುತ್ತೇನೆ' ಎಂದರು.
ಎಲ್ಲೆಲ್ಲಿ ಸ್ಪರ್ಧೆ?: ಸದ್ಯಕ್ಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 40 ಅಭ್ಯರ್ಥಿಗಳನ್ನು ನಿಲ್ಲಿಸಿ ಕನಿಷ್ಠ 15 ಸ್ಥಾನವನ್ನು ಗೆಲ್ಲುವುದು ಮೊದಲ ಗುರಿಯಾಗಿದೆ. ಹೊಸ ಪಕ್ಷ ಸಂಪೂರ್ಣವಾಗಿ ಅಸ್ತಿತ್ವ ಪಡೆದ ಬಳಿಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಛಾಪು ಮೂಡಲಿದೆ ಎಂದರು.

'ನಮ್ಮ ಕಾಂಗ್ರೆಸ್' ಚಿನ್ಹೆ
ಕುರುಬ ಜನಾಂಗದ ಪ್ರಮುಖ ನಾಯಕ ವರ್ತೂರು ಪ್ರಕಾಶ್ ಅವರು 'ನಮ್ಮ ಕಾಂಗ್ರೆಸ್' ಎಂಬ ಹೆಸರಿನ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿರುವ ವಿಷಯ ತಿಳಿದಿರಬಹುದು. ಪಕ್ಷದ ಉದ್ಘಾಟನೆಗೂ ಮುನ್ನ ಕೋಲಾರದಲ್ಲಿ ಪಕ್ಷದ ಚಿನ್ಹೆ(ತಾತ್ಕಾಲಿಕ)ಯನ್ನು ಬುಧವಾರದಂದು ಕೋಲಾರದಲ್ಲಿ ಬಿಡುಗಡೆ ಮಾಡಿದರು.

ಯಾವ ಪಕ್ಷ ಕೂಡಾ 100ರ ಗಡಿ ದಾಟುವುದಿಲ್ಲ
ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷ ಕೂಡಾ 100ರ ಗಡಿ ದಾಟುವುದಿಲ್ಲ. ಸರ್ಕಾರ ರಚನೆಯಾಗುವ ತನಕ ಅಹಿಂದ ಹೆಸರು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದುವರೆವಿಗೂ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ವರ್ತೂರು ಪ್ರಕಾಶ್ ಅವರು ಕಿಡಿಕಾರಿದರು.

ಪ್ರಾದೇಶಿಕ ಪಕ್ಷಗಳ ನೆರವು ಪಡೆಯಲೇಬೇಕು
ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳಿಗೆ ಹತ್ತಿರವಾಗಿ ಈಗ ದೂರವುಳಿದಿರುವ ವರ್ತೂರ್ ಪ್ರಕಾಶ್ ಅವರ ನಡೆಯನ್ನು ಅವರ ಅಭಿಮಾನಿಗಳು ಸ್ವಾಗತಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳು ಅಧಿಕಾರ ಸ್ಥಾಪಿಸಲು ಇನ್ಮುಂದೆ ಪ್ರಾದೇಶಿಕ ಪಕ್ಷಗಳ ನೆರವು ಪಡೆಯಲೇಬೇಕು ಎಂದು ಹೇಳಿದರು.

ಡಿಸೆಂಬರ್ 19ರಂದು ಪಕ್ಷಕ್ಕೆ ಅಧಿಕೃತ ಚಾಲನೆ
ಬೆಗ್ಗಿಹೊಸಹಳ್ಳಿ ಸಮೀಪದ ತೋಟದ ಮನೆಯಲ್ಲಿ ನೂರಾರು ಕಾರುಗಳನ್ನು ಪ್ರಚಾರಕ್ಕೆ ಚಾಲನೆ ನೀಡಲಾಯಿತು. ರಾಜ್ಯದೆಲ್ಲೆಡೆ ಪ್ರವಾಸ ಮಾಡಲಿರುವ ಕಾರ್ಯಕರ್ತರು ಡಿಸೆಂಬರ್ 19ರಂದು ಪಕ್ಷಕ್ಕೆ ಅಧಿಕೃತ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೂಡಲಸಂಗಮದಲ್ಲಿ ಲಕ್ಷಾಂತರ ಮಂದಿ ಸಮ್ಮುಖದಲ್ಲಿ 'ನಮ್ಮ ಕಾಂಗ್ರೆಸ್' ಎಂಬ ಹೊಸ ಪಕ್ಷಕ್ಕೆ ಕೋಲಾರದ (ಪಕ್ಷೇತರ) ಶಾಸಕ ವರ್ತೂರು ಪ್ರಕಾಶ್ ಅವರು ಚಾಲನೆ ನೀಡಲಿದ್ದಾರೆ












Click it and Unblock the Notifications