ಹಾಸನ: ಮಹಾಮಸ್ತಕಾಭಿಷೇಕ ಪ್ರಯುಕ್ತ ಮೈಸ್ಟಾಂಪ್ ಬಿಡುಗಡೆ
ಹಾಸನ, ಡಿಸೆಂಬರ್ 7: ಮಹಾಮಸ್ತಕಾಭಿಷೇಕ ಮಹೋತ್ಸವ ನಿಮಿತ್ತ ಶ್ರವಣಬೆಳಗೊಳದ ಶ್ರೀ ಕಾನಜಿ ಯಾತ್ರಿಕಾಶ್ರಮದಲ್ಲಿ ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ಮೈಸ್ಟಾಂಪ್, ವಿಶೇಷ ಅಂಚೆ ಲಕೋಟೆ ಹಾಗೂ ವಿಶೇಷ ದಿನಾಂಕ ಮುದ್ರೆಗಳನ್ನು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಬಿಡುಗಡೆ ಮಾಡಿದರು.
ಈ ಸ್ಟಾಂಪ್ ನ ವಿಶೇಷ ಏನೆಂದರೆ, ಇದರಲ್ಲ್ಲಿ ಸ್ಮೃತಿಚಿಹ್ನೆ, ರೈಲ್ವೆ ಇಂಜಿನ್ ಮತ್ತು ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ಲಾಂಛನ ಚಿಹ್ನೆಯಿದ್ದು ಸಾವಿರಾರು ವರ್ಷದ ಇತಿಹಾಸವನ್ನು ನೆನಪಿಸುತ್ತಿದೆ.

ಈ ವೇಳೆ ಮಾತನಾಡಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಯಾತ್ರಾತ್ರಿಗಳಿಗೆ ಹಾಗೂ ಪ್ರವಾಸಿಗರಿಗೆ ಅಂಚೆ ಚೀಟಿಗಳು ಸುಲಭ ರೀತಿಯಲ್ಲಿ ದೊರೆಯುವಂತೆ ವಿಂದ್ಯಗಿರಿಬೆಟ್ಟದ ಕೆಳ ಭಾಗದಲ್ಲೇ ಮಾರಾಟದ ವ್ಯವಸ್ಥೆ ಮಾಡಬೇಕು ಎಂದರು.
ಇದೇ ವೇಳೆ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ರವರಿಗೆ ಪತ್ರ ಬರೆಯುವ ಮೂಲಕ ವಿಶೇಷವಾಗಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಆಹ್ವಾನಿಸಲಾಯಿತು.

ದಕ್ಷಿಣ ಕರ್ನಾಟಕ ಪ್ರಾಂತ್ಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ಮಾತನಾಡಿ, ಮೈಸ್ಟಾಂಪ್ ಇತ್ತೀಚಿಗೆ ಆರಂಭಗೊಂಡ ಯೋಜನೆ. ಈ ವಿಶೇಷ ಸಂದರ್ಭದಲ್ಲಿ ಸಂಸ್ಥೆಯ ಲಾಂಛನ ಬಿಡುಗಡೆ ಮಾಡಲಾಗುತ್ತದೆ. ಇದರ ಮುಖ್ಯ ಉದ್ದೇಶ ಸಂತೋಷದ ಸಮಯವನ್ನು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುವುದು ಎಂದು ಹೇಳಿದರು.
ಮಹಾಮಸ್ತಕಾಭಿಷೇಕ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಉಪ ಸಮಿತಿ ಅಧ್ಯಕ್ಷ ಎಸ್.ಎನ್.ಅಶೋಕ್ ಕುಮಾರ್ ಮಾತನಾಡಿ, 1981 ರ ಮಹಾಮಸ್ತಕಾಭಿಷೇಕ ಸಮಯದಲ್ಲಿ 1 ರೂ. ಬೆಲೆಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು. ಈಗ 36 ವರ್ಷಗಳ ನಂತರ ಮತ್ತೆ ಬಿಡುಗಡೆ ಮಾಡುತ್ತಿರುವುದು ವಿಶೇಷವಾಗಿದೆ. 1910 ರ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆ ಅಷ್ಟು ಪ್ರಬಲವಾಗಿರಲಿಲ್ಲ. ಅಂದು ನಡೆದ ಮಹಾಮಸ್ತಕಾಭಿಷೇಕ ವರದಿಯನ್ನು ಮದ್ರಾಸ್ ಮೇಲ್ ಪತ್ರಿಕೆಗೆ ಪಾರಿವಾಳ ಬಳಸಿ ಸಮಾಚಾರವನ್ನು ಮದ್ರಾಸಿಗೆ ಕಳಿಸಿಕೊಟ್ಟದ್ದರು. ಅದು ಅಂದಿನ ಸಂಜೆ ಪತಿಕೆಯಲ್ಲಿ ಪ್ರಕಟವಾಗಿತ್ತು ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಖ್ಯಾತ ಅಂಚೆ ಚೀಟಿ ಸಂಗ್ರಹಕಾರ ಮಹಾವೀರ ಕುಂದೂರು, ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಕಾರ್ಯಾಧ್ಯಕ್ಷ ಎಸ್.ಜಿತೇಂದ್ರಕುಮಾರ್, ಹಾಸನದ ಸೂಪರಿಟೆಂಡೆಂಟ್ ಪೋಸ್ಟ್ ಆಫೀಸರ್ ಎಸ್.ಸದಾನಂದ, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅಂಚೆ ಪಾಲಕರು ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.












Click it and Unblock the Notifications