Hassan News: ಬೇಲೂರಿನ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಮೊಕ್ಕಾಂ: ಅರಣ್ಯ ಇಲಾಖೆ ಮಹತ್ವದ ಸೂಚನೆ
ಹಾಸನ, ಸೆಪ್ಟಂಬರ್ 16: ಕಾಡಂಚಿನ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಇದು ಮನುಷ್ಯ ಮತ್ತು ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಇಂತಹ ಘಟನೆಗಳು ಹಾಸನ ಜಿಲ್ಲೆಯಲ್ಲಿ ಆಗಾಗ ಮರುಕಳಿಸುತ್ತಲೇ ಇವೆ. ಒಂದು ಕಡೆ ಒಂಟಿ ಸಲಗ ಹಾವಳಿ ಇಟ್ಟರೆ, ಮತ್ತೊಂದೆಡೆ ಕಾಡಾನೆಗಳ ಬೃಹತ್ ಹಿಂಡು ಗ್ರಾಮಸ್ಥರ ನಿದ್ದೆಗಡಿಸಿವೆ. ಗ್ರಾಮಸ್ಥರು ಆತಂಕದಲ್ಲಿ ದಿನ ದೂಡುವಂತಾಗಿದೆ.
ಹೌದು, ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಕಾಡಾಣೆಗಳು ಕಾಣಿಸಿಕೊಳ್ಳುತ್ತಿವೆ. ಭಾನುವಾರ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ಒಂದು ಕಡೆ ದೈತ್ಯಾಕಾರದ ಒಂಟಿ ಸಲಗ ಕಾಣಿಸಿಕೊಂಡರೆ, ಮತ್ತೊಂದೆಡೆ ಗ್ರಾಮಗಳ ಒಳಗೇ ಆನೆಗಳ ಹಿಂಡು ಓಡಾಡಿವೆ. ಮಹಿಳೆ, ಮಕ್ಕಳಿಗೆ ಜೀವ ಭಯ ಶುರುವಾಗಿದೆ. ಇತ್ತ ರೈತರಿಗೆ ಬೆಳೆ ಬೆಳೆಯನ್ನು ಆನೆಗಳು ನಾಶ ಮಾಡಿಬಿಟ್ಟರೆ ಹೇಗೆ ಎಂಬ ಚಿಂತೆ ಕಾಡುತ್ತಿದೆ.

ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬೆಳಗ್ಗೆ ಮತ್ತು ಸಂಜೆ ದಿನಪೂರ್ತಿ ಗ್ರಾಮಗಳ ಸುತ್ತಮುತ್ತಲೂ ತಿರುಗಾಡುತ್ತಿವೆ. ಇದರಿಂದ ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಗಜಪಡೆ ಕಂಡು ಗ್ರಾಮಸ್ಥರು ಹೆದರಿದ್ದು, ಅರಣ್ಯಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಡಾನೆಗಳನ್ನು ಓಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ 20ಕ್ಕೂ ಹೆಚ್ಚು ಆನೆಗಳ ಹಿಂಡು ಮೊಕ್ಕಾಂ
ಅಂದಾಜು 20ಕ್ಕೂ ಹೆಚ್ಚು ಹೆಚ್ಚಿರುವ ಕಾಡಾನೆಗಳ ಹಿಂಡು ಗ್ರಾಮದ ಸುತ್ತಮುತ್ತ ಮೊಕ್ಕಾಂ ಹೂಡಿವೆ. ಬೆಳೆಗಳನ್ನು ತಿಂದು ತೇಗುತ್ತಿರುವ ಜೊತೆಗೆ ಜನರಲ್ಲಿ ಭಯ ಸೃಷ್ಟಿಸಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿರುವ ರಾಜ್ಯ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಮೈಕ್ ಹಿಡಿದು ಅನೌನ್ಸ್ ಮಾಡುತ್ತಿದ್ದಾರೆ.
ಕಾಡಾನೆಗಳ ಹಿಂಡು ಓಡಾಡುತ್ತಿರುವ ಕಾರಣ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ಮನೆಯಿಂದ ಹೊರ ಬರುವಾಗ ಜಾಗ್ರತೆ ವಹಿಸಿ, ಜಮೀನುಗಳತ್ತ ತೆರಳಬೇಡಿ ಎಂದು ಸೂಚನೆ ನೀಡುತ್ತಿದ್ದಾರೆ.

ಭತ್ತ, ಅಡಿಕೆ, ಬಾಳೆ, ಕಾಫಿ ಬೆಳೆ ನಾಶ
ಇದೇ ಗಜಪಡೆ ಬೇಲೂರು ತಾಲ್ಲೂಕಿನಲ್ಲಿ ಮಿತಿ ಮೀರಿ ಹಾವಳಿ ಇಟ್ಟಿವೆ. ಭತ್ತ, ಅಡಿಕೆ, ಬಾಳೆ, ಕಾಫಿ ಬೆಳೆಗಳನ್ನು ಸಂಪೂರ್ಣ ನಾಶಪಡಿಸಿವೆ ಎಂದು ವರದಿ ಆಗಿದೆ. ಕಾಡಾನೆಗಳ ಕಾಟದಿಂದ ಕಂಗಾಲಾದ ರೈತರು ಹಾಗೂ ಗ್ರಾಮಸ್ಥರು ಆರ್ಥಿಕ ನಷ್ಟವೇನ್ನು ಅನುಭವಿಸುತ್ತಿದ್ದಾರೆ. ಜಮೀನು, ಕಾಫಿ ತೋಟಕ್ಕೆ ತೆರಳಲು ಆಗುತ್ತಿಲ್ಲ. ಹೀಗಾಗಿ ಕೃಷಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಕಳೆದ ವಾರ ಚಿಕ್ಕಮಗಳೂರಿನಲ್ಲಿ ಕರಡಿ ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಸ್ಥಿತಿ ಚಿಂತಾಜನಕವಾಗಿತ್ತು. ಮನ ಬಂದಂತೆ ವ್ಯಕ್ತಿ ಮೇಲೆ ಎಗರಿದ್ದ ಕರಡಿ ತಲೆ, ಬೆನ್ನು, ಮುಖ ಪರಿಚಿ ಗಾಯಮಾಡಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ವೇಳೆ ಈ ಜಿಲ್ಲೆಯಲ್ಲಿ ಸಹ ಕಾಡಾನೆ ಕಾಣಿಸಿಕೊಂಡಿತ್ತು.












Click it and Unblock the Notifications