ಮಿಕ್ಸಿ ಬ್ಲಾಸ್ಟ್ ಪ್ರಕರಣ: ವಿಚ್ಛೇದಿತ ಮಹಿಳೆ ಮದುವೆ ನಿರಾಕರಿಸಿದಕ್ಕೆ ಮಾಸ್ಟರ್ ಪ್ಲಾನ್ ಮಾಡಿದ ಪ್ರಿಯತಮ
ಹಾಸನ, ಡಿಸೆಂಬರ್ 28: ಹಾಸನ ನಗರದಲ್ಲಿ ಸೋಮವಾರ ಸಂಜೆ ಕೊರಿಯರ್ ಅಂಗಡಿಯಲ್ಲಿ ನಡೆದಿದ್ದ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬ್ಲಾಸ್ಟ್ ಹಿಂದೆ ವಿಚ್ಛೇದಿತ ಮಹಿಳೆ ಮದುವೆ ನಿರಾಕರಿಸಿದ್ದೇ ಪ್ರಮುಖ ಕಾರಣ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ಮಿಕ್ಸಿಯನ್ನು ಪಕ್ಕಕ್ಕೆ ಎತ್ತಿ ಇಡಲು ಹೋದ ವೇಳೆ ಕೈಜಾರಿ ಮಿಕ್ಸಿ ಕೆಳಗೆ ಬಿದ್ದು ಬ್ಲಾಸ್ಟ್ ಆಗಿದ್ದು ತನ್ನದಲ್ಲದ ತಪ್ಪಿಗೆ ಕೊರಿಯರ್ ಅಂಗಡಿ ಮಾಲೀಕ ಶಶಿಕುಮಾರ್ ಬಲಗೈನ ಎರಡು ಬೆರಳು ಕಳೆದುಕೊಳ್ಳುವುದರ ಜೊತೆಗೆ ಗಾಯಗೊಂಡು ನೋವಿನಿಂದ ನರಳುವಂತಾಗಿದೆ.
ಯಾರೋ ಮಾಡಿದ ತಪ್ಪಿಗೆ ನಾನು ನೋವು ಅನುಭವಿಸುವಂತಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಿನ ಪೀಣ್ಯ ಶಾಖೆ, ನಾಗಸಂದ್ರದಿಂದ ಸಂಖ್ಯೆ AA-26753848 ರಲ್ಲಿ RASOIYA CLASSIC ಮಿಕ್ಸರ್ ಗ್ರೈಂಡರ್ ಹೆಸರಿನ ನಾಲ್ಕು ಕೆ.ಜಿ ತೂಕದ ಪಾರ್ಸೆಲ್ ಬಂದಿತ್ತು ಎಂದು ತನಿಖೆ ವೇಳೆ ಗೊತ್ತಾಗಿದೆ. ಇನ್ನು ಗಾಯಾಳು ಶಶಿಕುಮಾರ್ ಘಟನೆ ಬಗ್ಗೆ ವಿವರಿಸಿದ್ದಾರೆ.
41 ವರ್ಷದ ಮಹಿಳೆಯ ಪ್ರೀತಿಗೆ ಬಿದ್ದ ಸೈನಿಕನ ಮಗ
ಪ್ರಕರಣದ ಪ್ರಮುಖ ವ್ಯಕ್ತಿಯಾಗಿರುವ ಹಾಸನದ 41 ವರ್ಷದ ಮಹಿಳೆ ಈ ಹಿಂದೆ ಮದುವೆಯಾಗಿ ಕೆಲವು ವರ್ಷಗಳ ಹಿಂದೆಯೇ ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದರು. ನಂತರ ವರ ಬೇಕು ಎಂದು ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೋ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಮೂಲತಃ ಮಂಡ್ಯ ಜಿಲ್ಲೆಯ, ಹಾಲಿ ಬೆಂಗಳೂರಿನಲ್ಲಿ ವಾಸವಾಗಿರುವ ಸೈನಿಕರೊಬ್ಬರ ಮಗ ಅನೂಪ್ಕುಮಾರ್ ಈ ಮಹಿಳೆಯನ್ನು ಮೆಚ್ಚಿಕೊಂಡು ಮದುವೆ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ.
ಇದಕ್ಕೆ ಓಕೆ ಎಂದ ಮಹಿಳೆ ಮತ್ತು ಅನೂಪ್ಕುಮಾರ್ ಬಹುಬೇಗ ಹತ್ತಿರವಾಗಿದ್ದಾರೆ. ಅನೇಕ ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಓಡಾಡಿದ್ದರು. ಈ ನಡುವೆ ಮಹಿಳೆ ಅನೂಪ್ ಕುಮಾರ್ನಿಂದ ಅನೇಕ ಕಾರಣ ನೀಡಿ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಳು. ನಂತರ ಉಲ್ಟಾ ಹೊಡೆದು ಮದುವೆಗೆ ನಿರಾಕರಿಸಿ ಬಿಟ್ಟಳು ಎನ್ನಲಾಗಿದೆ.
ಪೊಲೀಸರಿಗೆ ದೂರು ನೀಡಿದ್ದ ಮಹಿಳೆ
ಇದರಿಂದ ತೀವ್ರ ನಿರಾಸೆಗೆ ಒಳಗಾದ ಅನೂಪ್, ತಾನು ನೀಡಿರುವ ಹಣವನ್ನು ವಾಪಸ್ ಕೇಳಿದಾಗ ಮಹಿಳೆ ಅದಕ್ಕೂ ಸ್ಪಂದಿಸಿರಲಿಲ್ಲ. ಈ ನಡುವೆ ಒಂದೆರಡು ಬಾರಿ ಹಾಸನಕ್ಕೂ ಬಂದಿದ್ದ ಅನೂಪ್, ಮಹಿಳೆ ಮನೆ ಎದುರು ಗಲಾಟೆ ಮಾಡಿದ್ದ. ಇದರ ವಿರುದ್ಧ ಪೊಲೀಸರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಮಹಿಳೆ ದೂರು ನೀಡಿದ್ದಳು. ಇದು ಅನೂಪ್ನಲ್ಲಿ ಅಕ್ಷರಶಃ ಕೆರಳಿಸಿತ್ತು. ಯಾವಾಗ ಅನೂಪ್ ಕಾಟ ಹೆಚ್ಚಾಯಿತೋ ಆಗ ಆತನ ನಂಬರ್ಗಳನ್ನು ಮಹಿಳೆ ಬ್ಲಾಕ್ ಮಾಡಿದ್ದಳು. ಆದರೂ ನನಗೆ ಮೋಸ ಮಾಡಿದವಳಿಗೆ ಒಂದು ಗತಿ ಕಾಣಿಸಲೇಬೇಕೆಂದು, ಅನೂಪ್ ಮೊದಲು ಸೀರೆ ಕೊರಿಯರ್ ಮಾಡಿದ್ದ.
ಮೂರನೇ ಸಲ ವಾಪಸ್ ನೀಡಿದ್ದ ಮಹಿಳೆ
ಹೀಗಾಗಿ ಆಕೆಗೆ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ಕಳುಹಿಸಿದ್ದಾನೆ. ಆದರೆ ಮಹಿಳೆ ಅದನ್ನು ಪಡೆದುಕೊಂಡಿರಲಿಲ್ಲ. ಆಕೆ ಸತ್ತರೆ ಸಾಯಲಿ, ಇಲ್ಲ ಅಂದ್ರೆ ಮುಖ, ದೇಹದ ಭಾಗ ವಿಕಾರವಾಗಬೇಕು ಎಂಬುದು ಅನೂಪ್ನ ಉದ್ದೇಶವಾಗಿತ್ತು. ಡಿಟಿಡಿಸಿ ಕೊರಿಯರ್ ಅಂಗಡಿಯಿಂದ ಗಣೇಶ್ ಎಂಬಾತ ಡಿ.17 ರಂದು ಅದನ್ನು ಮಹಿಳೆ ಮನೆಗೆ ಡಿಲಿವರಿ ಮಾಡಿದ್ದ. ಡಿ.26 ರಂದು ಮೂರನೇ ಸಲ ಸಹ ವಿಳಾಸ ಸರಿ ಇಲ್ಲ ಎಂದು ಹಿಂದಿರುಗಿಸಿದ್ದಳು
ಅಂಗಡಿ ಮಾಲೀಖ ಶಶಿ ತನ್ನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ತರಾತುರಿಯಲ್ಲಿ ಮಿಕ್ಸಿಯನ್ನು ಪಕ್ಕಕ್ಕೆ ಎತ್ತಿಡಲು ಮುಂದಾಗಿದ್ದಾರೆ. ಈ ವೇಳೆ ಮಿಕ್ಸಿ ಹಾಗೂ ಜಾರ್ ಕೈಜಾರಿ ಕೆಳಗೆ ಬಿದ್ದು ಸ್ಪೋಟಗೊಂಡಿದ್ದು ಶಶಿ ತೀವ್ರವಾಗಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಅವಳಿ ಮಕ್ಕಳನ್ನು ನೋಡಲಾಗುತ್ತಿಲ್ಲ ಎಂದು ಗಾಯಾಳು ಕಣ್ಣೀರು
"ಡಿ.17 ರಂದು ವಸಂತ ಎಂಬುವವರ ಹೆಸರಿಗೆ ಕೊರಿಯರ್ ಬಂದಿತ್ತು. ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಗಣೇಶ್ ಎನ್ನುವ ಯುವಕ ಅಂದೇ ಡಿಲವೆರಿ ಮಾಡಿದ್ದ. ಡಿ.26 ರಂದು ಪಾರ್ಸೆಲ್ ನನಗೆ ವಾಪಾಸ್ ಕಳಿಸುವಂತೆ ತಂದಿದ್ದರು. 300 ರೂಪಾಯಿ ಚಾರ್ಜ್ ಆಗುತ್ತದೆ ಎಂದಾಗ ನನಗೆ ಬೇಡ ನೀವೆ ಇಟ್ಟುಕೊಳ್ಳಿ ಇಲ್ಲಾ ಬಿಸಾಡಿ ಎಂದು ಆ ಮಹಿಳೆ ಹೇಳಿದ್ದರು. ಆ ಮಿಕ್ಸಿಯನ್ನು ಪಕ್ಕಕ್ಕೆ ತೆಗೆದಿಡಲು ಹೋದ ವೇಳೆ ಕೈಜಾರಿ ಕೆಳಗೆ ಬಿದ್ದ ವೇಳೆ ಸ್ಫೋಟಗೊಂಡಿದೆ. ನನ್ನ ತಂದೆ ಅನಾರೋಗ್ಯದಿಂದ ನರಳುತ್ತಿದ್ದಾರೆ. ನಿನ್ನೆ ನನಗೆ ಅವಳಿ ಜವಳಿ ಮಕ್ಕಳಾಗಿದ್ದು ನೋಡಲು ಸಾಧ್ಯವಾಗುತ್ತಿಲ್ಲ. ಇಬ್ಬರ ನಡುವಿನ ಜಗಳದಿಂದ ನಾನು ನೋವು ಅನುಭವಿಸುವಂತಾಗಿದೆ. ಇದರಲ್ಲಿ ಯಾರೇ ತಪ್ಪು ಮಾಡಿದ್ದರು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು" ಗಾಯಾಳು ಶಶಿಕುಮಾರ್ ಒತ್ತಾಯಿಸಿದ್ದಾರೆ.
ಪ್ರಕರಣ ತನಿಖೆ ನಡೆಸುತ್ತಿರುವ ಬಡಾವಣೆ ಪೊಲೀಸರು ಅನೂಪ್ ಕುಮಾರ್ ಮತ್ತು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.