ಜೈನ ಧರ್ಮ ನಾಡಿಗೆ ನೀಡಿದ ಕೊಡುಗೆ ಅವಿಸ್ಮರಣೀಯ: ಉಮಾಶ್ರೀ
ಹಾಸನ, ಆಗಸ್ಟ್ 12: ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಜೈನ ಧರ್ಮವು ಅಪಾರ ಕೊಡುಗೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು. ಶ್ರವಣಬೆಳಗೊಳದಲ್ಲಿ ಆಗಸ್ಟ್ 11 ರಿಂದ ಆರಂಭವಾದ ರಾಷ್ಟ್ರಮಟ್ಟದ ಜೈನ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಧರ್ಮ ತ್ಯಾಗ, ಶಾಂತಿ ಎಲ್ಲವೂ ಸಮಾಜದ ಇತರ ಧರ್ಮಗಳಿಗೆ ಮಾದರಿಯಂತಿದ್ದು, ಜೈನ ಪರಂಪರೆ ಅತ್ಯುತ್ತಮವಾದುದ್ದು, ಜೈನ ರಾಜರು ಅನೇಕ ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಸಮಾಜದ ಏಳ್ಗೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಇತಿಹಾಸ ಸಾರುತ್ತಿದೆ ಎಂದರು.

ಜೈನ ಧರ್ಮಿಯರು ಕನ್ನಡದ ಬೆಳವಣಿಗೆಗೆ ಅತ್ಯುತ್ತಮವಾದ ಸಾಕಷ್ಟು ಕೊಡುಗೆ ನೀಡಿದ್ದಾರೆ. ದಾನಚಿಂತಾಮಣಿ ಅತ್ತಿಮಬ್ಬೆ ಕಾಲಾವಧಿಯಲ್ಲಿ ಎಲ್ಲಾ ಧರ್ಮದ 1500 ಕ್ಕೂ ಹೆಚ್ಚು ದೇವಾಲಯಗಳ ನಿರ್ಮಾಣವಾಗಿರುವುದು ಜೈನರು ಪರಧರ್ಮ ಸಹಿಷ್ಣತೆಗೆ ಸಾಕ್ಷಿ. ಆದ್ದರಿಂದಲೇ ಸರ್ಕಾರ ಅತ್ತಿಮಬ್ಬೆ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಾ ಬಂದಿದೆ ಎಂದರು.
ಜಾತಿ,ಮತಗಳನ್ನು ಮೀರಿ ಆದರ್ಶಗಳ ಕಡೆಗೆ ನಡೆಯುವ ಗುಣ ಎಲ್ಲರೂ ಬೆಳೆಸಿಕೊಳ್ಳಬೇಕು. ಪರಧರ್ಮ ಸಹಿಷ್ಣುಗಳಾಗಿ ಬದುಕುವ ಜೊತೆಗೆ ಯಾವುದೇ ಧರ್ಮದ ಉತ್ತಮ ಅಂಶಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕವಾಗುವತ್ತ ಎಲ್ಲರೂ ಮನಸ್ಸು ಮಾಡಬೇಕಿದೆ ಎಂದರು.

ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಈ ಸಮಾಜಕ್ಕೆ ತೋರ್ಪಡಿಸಬೇಕು. ಕಷ್ಟಗಳಿಗೆ ಎದೆಗುಂದದೆ ಪ್ರಯತ್ನಗಳ ನಂಬಿಕೆ ಇಟ್ಟುಕೊಂಡು ಸಾಗುವ ಗುಣ ಪ್ರತಿಯೊಂದು ಹೆಣ್ಣು ಅಗತ್ಯವಾಗಿ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು, ಮಹಾಮಸ್ತಕಾಭಿಷೇಕ ಮಹೋತ್ಸವ 2018 ರ ರಾಷ್ಟ್ರೀಯ ಅಧ್ಯಕ್ಷೆ ಸರಿತಾ ಎಂ.ಕೆ ಜೈನ್,ಮಹಾಮಸ್ತಕಾಭಿಷೇಕದ ಸಮಿತಿಯ ಕಾರ್ಯಾಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ಶಾಸಕ ಸಿ.ಎನ್ ಬಾಲಕೃಷ್ಣ, ಹರಿಯಾಣ ಸರ್ಕಾರದ ಕಲೆ ಮತ್ತು ಸಂಸ್ಕೃತಿ ಸಚಿವೆ ಕವಿತಾ ಜೈನ್, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಲಾ ಅನಂತರಾಜ್, ತಾರಾ ಎ.ಮಂಜು, ಜಿಪಂ ಸದಸ್ಯೆ ಮಮತಾ ರಮೇಶ್, ಜಿಪಂ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ, ಇತರರು ಹಾಜರಿದ್ದರು.












Click it and Unblock the Notifications