ಹುತಾತ್ಮ ಸಂದೀಪ್ ಪಾರ್ಥೀವ ಶರೀರ: ಮಧ್ಯಾಹ್ನ ಅಂತ್ಯಕ್ರಿಯೆ
ಹಾಸನ, ಫೆಬ್ರವರಿ 1: ಜಮ್ಮು,ಕಾಶ್ಮೀರದ ಹಿಮಕುಸಿತಕ್ಕೆ ಸಿಲುಕಿ ಮರಣವನ್ನಪ್ಪಿದ ಯೋಧ ಸಂದೀಪ್ ಕುಮಾರ್ ಶೆಟ್ಟೆ ಅವರ ಪಾರ್ಥೀವ ಶರೀರ ಮಂಗಳವಾರ ತಡರಾತ್ರಿ ಅವರ ಹುಟ್ಟೂರಾದ ಹಾಸನ ಜಿಲ್ಲೆಗೆ ತುಲುಪಿದೆ. ಬುಧವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಹಿಮಕುಸಿತದಿಂದ ಹಲವು ದಿನಗಳ ಕಾಲ ಹಿಮದಲ್ಲಿಯೇ ಇದ್ದ ಯೋಧ ಸಂದೀಪ್ ಅವರ ಪಾರ್ಥೀವ ಶರೀರವನ್ನು ಹೊರತೆಗೆದು ನವದೆಹಲಿಗೆ ತರಲಾಗಿತ್ತು. ಅಲ್ಲಿಂದ ಮಂಗಳವಾರ ತಡರಾತ್ರಿ 2.30ರ ಸುಮಾರಿಗೆ ವಿಶೇಷ ಆಂಬುಲೆನ್ಸ್ ಮೂಲಕ ಹಾಸನ ಜಿಲ್ಲಾಸ್ಪತ್ರೆಗೆ ಪಾರ್ಥೀವ ಶರೀರವನ್ನು ತರಲಾಗಿದ್ದು, ಜೊತೆಗೆ ಸೇನಾ ಅಧಿಕಾರಿಗಳ ತಂಡವೂ ಇತ್ತು. ಪಾರ್ಥೀವ ಶರೀರವನ್ನು ಹಾಸನದ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಯಿತು.[ಹಾಸನದ ಹುತಾತ್ಮ ಯೋಧ ಸಂದೀಪ್ ಕುಟುಂಬಕ್ಕೆ 25 ಲಕ್ಷ ಪರಿಹಾರ]
ಮಾಹಿತಿಯಿದ್ದ ಜಿಲ್ಲಾಡಳಿತದ ಅಧಿಕಾರಿಗಳು ಸಂದೀಪ್ ಅವರ ಪಾರ್ಥೀವ ಶರೀರವನ್ನು ಬರಮಾಡಿಕೊಂಡರು. ಸ್ಥಳದಲ್ಲಿ ಸಂದೀಪ್ ಪೋಷಕರು, ಶಾಸಕ ಎಚ್. ಎಸ್. ಪ್ರಕಾಶ್, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇಂದು(ಫೆ.1) ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪ್ರಸ್ತುತ ಪಾರ್ಥೀವ ಶರೀರವನ್ನು ಸ್ವಗ್ರಾಮ ದೇವಿಹಳ್ಳಿಗೆ ಮೆರವಣಿಗೆ ಮುಖಾಂತರ ತೆಗೆದುಕೊಂಡು ಹೋಗಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆಯ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.