ಜನರಲ್ಲಿ ಹೊಸ ಕನಸು ಬಿತ್ತಿದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ
ಹಾಸನ, ಡಿಸೆಂಬರ್ 15 : ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಬಳಿ ಆರಂಭವಾಗಿರುವ ಏತನೀರಾವರಿ ಯೋಜನೆ ತಾಲೂಕಿನ ಸುಮಾರು 79 ಹಳ್ಳಿಗಳ ರೈತರಲ್ಲಿ ಹೊಸ ಕನಸು ಮೂಡಿಸಿದೆ. 150 ಕೆರೆಗಳು ಹಾಗೂ 50 ಕಟ್ಟೆಗಳಿಗೆ ಕುಡಿಯುವ ನೀರಿಗಾಗಿ ನೀರು ತುಂಬಿಸುವ ಯೋಜನೆ ಇದಾಗಿದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಟ್ಟೇಪುರ ಗ್ರಾಮದ ಬಳಿ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಅರಕಲಗೂಡು ತಾಲೂಕಿನ ಕಸಬಾ, ಮಲ್ಲಿಪಟ್ಟಣ, ಕೊಣನೂರು, ದೊಡ್ಡಮಗ್ಗೆ ಹೋಬಳಿಯ ಗ್ರಾಮಗಳ ಕೆರೆ, ಕಟ್ಟೆಗಳಿಗೆ ಕುಡಿಯುವ ನೀರಿಗಾಗಿ ನೀರು ತುಂಬಿಸುವ ಯೋಜನೆ ಇದು.
ಕಸಬಾ, ಮಲ್ಲಿಪಟ್ಟಣ, ಕೊಣನೂರು, ದೊಡ್ಡಮಗ್ಗೆ ಹೋಬಳಿಯ ಗ್ರಾಮಗಳು ಭಾಗಶಃ ಬರಪೀಡಿತ ಪ್ರದೇಶಗಳಾಗಿವೆ. ಸದರಿ ಗ್ರಾಮಗಳ ರೈತರು ಆರ್ಥಿಕವಾಗಿ ಬಹಳ ಹಿಂದುಳಿದವರು. ಸದರಿ ಪ್ರದೇಶದಲ್ಲಿ ಒಣ ಬೆಳೆಗಳಾದ ರಾಗಿ, ಜೋಳ, ಕಡಲೆಕಾಯಿ, ರೇಷ್ಮೆ ಇತ್ಯಾದಿ ಮಳೆ ಅವಲಂಬಿತ ಬೆಳೆಗಳನ್ನು, ಕೆರೆ ಅಚ್ಚುಕಟ್ಟುಗಳಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗುತ್ತದೆ.

ಹಾಲಿ 79 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ತೀವ್ರ ಅಭಾವ ಉಂಟಾಗಿರುತ್ತದೆ. ಅರಕಲಗೂಡಿನ ಮಳೆ ಮಾಪನ ಕೇಂದ್ರದ ಅನುಸಾರ ಸದರಿ ಪ್ರದೇಶದಲ್ಲಿ ಮಳೆಯು ಕನಿಷ್ಟ ಮಟ್ಟಕ್ಕಿಂತ ಕಡಿಮೆ ಇರುತ್ತದೆ. ಸದರಿ ಪ್ರದೇಶದಲ್ಲಿ ಅಂತರ ಕೊಳವೆ ಬಾವಿಗಳನ್ನು ಕೊರೆದಿದ್ದರೂ ಸಹಾ ನೀರಿನ ಅಭಾವವಿರುತ್ತದೆ. ಅನೇಕ ಕಡೆ 450 ರಿಂದ 500 ಅಡಿವರೆಗೆ ಕೊರೆದರೂ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಆದರೆ, ನೀರು ಸಿಕ್ಕಿಲ್ಲ.
ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ ರಾಮಸ್ವಾಮಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಸದರಿ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಈ ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲವಾಗುವುದರ ಜೊತೆಗೆ ಅಂತರ್ಜಲ ವೃದ್ಧಿಗೊಳ್ಳಲಿದೆ. 79 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತದೆ.
ಸರ್ಕಾರದ ಆದೇಶದಂತೆ ಕಾಮಗಾರಿಯನ್ನು ಯಶ್ವಸಿಗೊಳಿಸುವ ಸಲುವಾಗಿ ಒಟ್ಟಾರೆ 190 ಕೋಟಿಗಳ ರೂ.ಗಳ ವಿವರವಾದ ಯೋಜನಾ ಅಂದಾಜಿಗೆ ತಾತ್ವಿಕ ಅನುಮೋದನೆ ನೀಡಿದ್ದು ಮೊದಲನೇ ಹಂತದಲ್ಲಿ ರೂ. 120 ಕೋಟಿಗಳ ಅಂದಾಜು ಮೊತ್ತಕ್ಕೆ ಚಾಲನೆ ನೀಡಲಾಗಿದೆ. 2ನೇ ಹಂತದಲ್ಲಿ 70 ಕೋಟಿ ರೂ.ಗಳ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಅನುದಾನ ದೊರೆಕಿಸಿಕೊಂಡು ಅನುಷ್ಠಾನಗೊಳಿಸಲಾಗುತ್ತದೆ.
ಒಟ್ಟಾರೆ ಯೋಜನೆ ಪೂರ್ಣಗೊಂಡಲ್ಲಿ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ, ಕೊಣನೂರು, ದೊಡ್ಡಮಗ್ಗೆ, ಕಸಬಾ ಹೋಬಳಿಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೃಷಿ ಚಟುವಟಿಕೆಗಳ ಚಿತ್ರಣವೇ ಬದಲಾಗುವುದರಲ್ಲಿ ಅನುಮಾನವಿಲ್ಲ.











Click it and Unblock the Notifications