ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಜನತೆ, ನಾವಲ್ಲ: ಎಚ್ ಡಿ ದೇವೇಗೌಡ
Recommended Video

ಹಾಸನ, ಏಪ್ರಿಲ್ 4: ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಜೆಡಿಎಸ್ ಅಭ್ಯರ್ಥಿ ಎದುರು ಸೋಲು ಅನುಭವಿಸಿದ್ದರು. ಇದರಿಂದ ಅವರ ಮನಸಿನಲ್ಲಿ ನೋವು ಇರಬಹುದು. ಆದರೆ, ಅವರ ಸೋಲಿಗೆ ನಾನು ಅಥವಾ ಜಿ.ಟಿ. ದೇವೇಗೌಡ ಕಾರಣರಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಾನು ಚಾಮುಂಡೇಶ್ವರಿಯಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿರಲಿಲ್ಲ. ಅವರನ್ನು ಸೋಲಿಸಿದ್ದು ಜಿಟಿ ದೇವೇಗೌಡರು ಎಂಬ ಪ್ರಶ್ನೆ ಬರುವುದಿಲ್ಲ. ಅಲ್ಲಿನ ಜನತೆ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದಾರೆ ಎಂದು ಹೇಳಿದರು.
ನಾನೂ ಸಹ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇನೆ. ಸಿದ್ದರಾಮಯ್ಯ ಅವರಿಗೂ ಅದರ ಅನುಭವ ಆಗಿದೆ. ಅವರು ಜೆಡಿಎಸ್ನಿಂದ ಕಾಂಗ್ರೆಸ್ಗೆ ಹೋದರು. ಬಳಿಕ ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು ಎಂದರು.
ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದಿರುವ ದೇವೇಗೌಡ ಅವರು ತಮ್ಮ ರಾಜಕೀಯ ಸ್ಥಿತ್ಯಂತರ, ಸಿದ್ದರಾಮಯ್ಯ ಅವರ ಸೋಲು, ಮೋದಿ ಮತ್ತು ಅಡ್ವಾಣಿ ಅವರ ಸಂಬಂಧ ಮುಂತಾದ ವಿಚಾರಗಳ ಕುರಿತು ಮಾತನಾಡಿದರು. ಅವರ ಮಾತಿನ ಕೆಲವು ಭಾಗಗಳು ಇಲ್ಲಿವೆ...

ಪರಮೇಶ್ವರ್ ಅವರೇ ಆಹ್ವಾನಿಸಿದ್ದರು
ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಹೇಳಿದ್ದೆ. ಅದಕ್ಕಾಗಿ ಪಕ್ಷದ ಎಲ್ಲ ಸದಸ್ಯರ ಅನುಮತಿ ಮೇರೆಗೇ ಮೂರು ವರ್ಷಗಳ ಹಿಂದೆ ಪ್ರಜ್ವಲ್ ರೇವಣ್ಣ ಹೆಸರನ್ನು ಸೂಚಿಸಿದ್ದೆ. ತುಮಕೂರಿಗೆ ಬಂದು ಸ್ಪರ್ಧಿಸಿ ಎಂದು ಜಿ. ಪರಮೇಶ್ವರ್ ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ಮುದ್ದಹನುಮೇಗೌಡ ಅವರೂ ಜತೆಯಲ್ಲಿದ್ದರು. ನೀವು ಇರಿ ನಾವು ಗೆಲ್ಲಿಸುತ್ತೇವೆ ಎಂಬ ಭರವಸೆ ನೀಡಿದರು.

ಸಂಸತ್ನಲ್ಲಿ ಅವಕಾಶವೇ ಸಿಗಲಿಲ್ಲ
ಸಂಸತ್ನಲ್ಲಿ ನನಗೆ ಮಾತನಾಡಲು ಅವಕಾಶವೇ ಸಿಗುತ್ತಿರಲಿಲ್ಲ. ಅಲ್ಲಿ ಪಕ್ಷಗಳು ಪಡೆದುಕೊಂಡ ಸ್ಥಾನಗಳ ಆಧಾರದಲ್ಲಿ ಸಮಯ ನೀಡಲಾಗುತ್ತಿತ್ತು. ಕೊನೆಗೆ ನಿಮ್ಮ ಭಾಷಣ ಬರೆದುಕೊಡಿ ಎಂದರು. ಇದರಿಂದ ಸಾಕಷ್ಟು ಬೇಸರವಾಯಿತು. ಒಬ್ಬ ಪ್ರಧಾನಿಯಾಗಿದ್ದವನಿಗೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದರೇನು? ಮತ್ತೆ ಸಂಸತ್ಗೆ ಬರಬಾರದು ಎನಿಸಿತು. ಯಾವುದೇ ಭಯದಿಂದ ಹಾಗೆ ಹೇಳಿರಲಿಲ್ಲ. ಸಂಸತ್ಗೆ ಬರಬಾರದು ಎಂಬ ಬೇಸರದಿಂದ ಹಾಗೆ ಹೇಳಿದ್ದೆ.

ನಾನು ಎಲ್ಲಿದ್ದರೂ ಹಾಸನದವನು
ನಾನು ಎಲ್ಲಿದ್ದರೂ ಹಾಸನದವನು. ನನ್ನ ಕಳೇಬರ ಇಲ್ಲಿಯೇ ಆಗುವುದು. ಜನರು ನನ್ನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ನಾನು ದೃತಿಗೆಟ್ಟಿಲ್ಲ. ಹಾಗೆಯೇ ತುಮಕೂರಿಗೆ ಬೇಕಿರುವ ನೀರು ಒದಗಿಸಲು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಪ್ರಾದೇಶಿಕ ಪಕ್ಷಗಳ ಮೇಲೆ ಮೋದಿ ಕಣ್ಣು
ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಮೇಲೆ ಕಣ್ಣಿಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಯಾಕೆ ಹೀಗೆ ಮೋದಿ ಮಾಡ್ತಿದ್ದಾರೋ ಗೊತ್ತಾಗುತ್ತಿಲ್ಲ. ಆದಾಯ ತೆರಿಗೆ ಇಲಾಖೆ, ಇಡಿ ಮುಂತಾದ ಸಂಸ್ಥೆಗಳನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಮೋದಿಯನ್ನು ಉಳಿಸಿದ್ದೇ ಅಡ್ವಾಣಿ
ನರೇಂದ್ರ ಮೋದಿ ಅವರು ರಾಜಧರ್ಮ ಪಾಲಿಸಿಲ್ಲ ಎಂದು ಅವರನ್ನು ಬಿಜೆಪಿಯಿಂದ ತೆಗೆದುಹಾಕಲು ನಾಯಕತ್ವ ಮುಂದಾಗಿತ್ತು. ಆಗ ಮೋದಿ ಅವರನ್ನು ಅಡ್ವಾಣಿ ಅವರೇ ಪಕ್ಷದಲ್ಲಿ ಉಳಿಸಿದ್ದರು. ಅಡ್ವಾಣಿ ಇಲ್ಲದಿದ್ದರೆ ಮೋದಿ ಎಂದೋ ಮೂಲೆ ಗುಂಪಾಗುತ್ತಿದ್ದರು.












Click it and Unblock the Notifications