ರಾಗಿಗೆ ಬೆಂಬಲ ಬೆಲೆ ನೀಡಲು ಕೇಂದ್ರದ ಅನುಮತಿಯ ನಿರೀಕ್ಷೆ
ಹಾಸನ, ಫೆಬ್ರವರಿ 18: ಬೆಂಬಲ ಬೆಲೆಯೊಂದಿಗೆ ರಾಗಿ ಖರೀದಿ ಆರಂಭಿಸುವುದಕ್ಕೆ ಕೇಂದ್ರ ಸರ್ಕಾರದ ಅನುಮತಿಯನ್ನು ಎದುರು ನೋಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಹೇಳಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಹಶೀಲ್ದಾರ್ ಕಚೇರಿ ಎದುರು ರಾಗಿ ಖರೀದಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಈಗಾಗಲೇ ಕೇಂದ ಸರ್ಕಾರಕ್ಕೆ ಪತ್ರ ಬರೆದು ರಾಗಿ ಖರೀದಿಗೆ ಮನವಿ ಮಾಡಿದ್ದು, ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿಧಾನಮಂಡಲದ ಅಧಿವೇಶನವು ಸೋಮವಾರ ಮತ್ತೆ ಆರಂಭವಾಗಲಿದೆ. ಇದಕ್ಕಿಂತ ಮೊದಲೇ ಸಿ.ಟಿ. ರವಿ ಜೊತೆ ತೆರಳಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಶಾಸಕ ಸಿ.ಟಿ.ರವಿ, ಕೆ .ಎಸ್. ಲಿಂಗೇಶ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದಾರೆ.

ರಾಗಿಗೆ ಬೆಂಬಲ ಬೆಲೆ ನೀಡಿ ಖರೀದಿಸಲು ಮನವಿ:
ರಾಜ್ಯ ಸಚಿವ ಸಂಪುಟದಲ್ಲಿ ರಾಗಿಗೆ ಬೆಂಬಲ ಬೆಲೆ ನೀಡಿ ಚರ್ಚೆ ನಡೆಸಿದಾಗ ಸಚಿವ ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ ಸೇರಿ ಅನೇಕ ಸಚಿವರು ಧ್ವನಿಗೂಡಿಸಿದರು. ಕೇಂದ್ರ ಸರ್ಕಾರದ ಒಪ್ಪಿಗೆ ಕೂಡ ಬೇಕಾಗುತ್ತದೆ. ಈ ಹಿನ್ನೆಲೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಅನುಮತಿ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ರಾಗಿ ಬೆಳೆಗಾರರಿಗೆ ಅನ್ಯಾಯವಾಗುವುದನ್ನು ಮನಗಂಡು ಮೈಸೂರು ಭಾಗದಲ್ಲಿ ಮುಂದಿನ 9 ತಿಂಗಳಿಗೆ ಬೇಕಾಗುವ ಪಡಿತರ ಧಾನ್ಯದೊಂದಿಗೆ ರಾಗಿಯನ್ನು ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಗಳು ನಡೆದಿವೆ.
ಹಾಸನ, ಚಿಕ್ಕಮಗಳೂರು, ಮೈಸೂರು, ತುಮಕೂರು, ಕೋಲಾರ, ಚಿತ್ರದುರ್ಗ, ಮಂಡ್ಯ ಭಾಗದ ಎಲ್ಲ ರಾಗಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೋಮವಾರ ಅಧಿವೇಶನ ಆರಂಭಕ್ಕೂ ಮುನ್ನ ಸಿಎಂ ಜೊತೆ ಚರ್ಚೆ ನಡೆಸಲಾಗುವುದು. ಅಲ್ಲಿಯವರೆಗೂ ಧರಣಿ ಕೈ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications