ಪ್ರಜ್ವಲ್ ಗೆ ಅಸೆಂಬ್ಲಿ ಟಿಕೆಟ್ ಕೊಡಲು ದೇವೇಗೌಡ್ರು ಹಿಂದೇಟು ಏಕೆ?
Recommended Video

ಬೆಂಗಳೂರು, ಮಾರ್ಚ್ 30: 'ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಯಾವ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ವ್ಹೀಲ್ಚೇರ್ನಲ್ಲಿ ಸಂಸತ್ತಿಗೆ ಹೋಗಲು ಇಷ್ಟವಿಲ್ಲ, ನನ್ನ ಮೊಮ್ಮಗ ಪ್ರಜ್ವಲ್ ನನ್ನು ಲೋಕಸಭೆಗೆ ಕಳಿಸಲು ಬಯಸುತ್ತೇನೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ, ಆದರೆ, ಇದು ದೇವೇಗೌಡರ ಅಭಿಲಾಶೆಯೋ ಅಥವಾ ಒತ್ತಡವೋ ಸ್ಪಷ್ಟವಾಗಿಲ್ಲ.
'ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ ಇದೆ, ಆದರೆ ಟಿಕೆಟ್ ಕೊಡದಿದ್ದರೆ ಕಾರ್ಯಕರ್ತನಾಗಿ ದುಡಿಯುತ್ತೇನೆ' ಎಂದು ಪ್ರಜ್ವಲ್ ರೇವಣ್ಣ ತಮ್ಮ ಇಂಗಿತ ವ್ಯಕ್ತಪಡಿಸಿದ್ದನ್ನು ಮರೆಯುವಂತಿಲ್ಲ.
ದೇವೇಗೌಡರು ಹೇಳಿದ್ದಿಷ್ಟು: 'ನನ್ನ ಹೊರತಾಗಿ ಯಾರಾದರೂ ಸ್ಪರ್ಧಿಸಿದರೆ ಸ್ವಾಗತ. ಇಲ್ಲದಿದ್ದರೆ ಮೊಮ್ಮಗ ಪ್ರಜ್ವಲ್ನನ್ನು ನಿಲ್ಲಿಸುತ್ತೇನೆ. ಅವನನನ್ನು ಲೋಕಸಭೆಗೆ ಕಳಿಸಬೇಕು ಎಂಬ ಆಸೆ ಇದೆ, ಪ್ರಜ್ವಲ್ ವಿದ್ಯಾವಂತ. ಕೊಂಚ ದುಡುಕು ಬುದ್ಧಿ ಅಷ್ಟೇ. ಅವನನ್ನೇ ಮಗನೆಂದು ತಿಳಿದು ಗೆಲ್ಲಿಸಬೇಕು' ಎಂದಿದ್ದರು.
ಚುನಾವಣೆಗೆ ಇನ್ನೂ 45 ದಿನ ಇದೆ. 113 ಸ್ಥಾನ ಗೆಲ್ಲಲೇಬೇಕು ಎಂಬುದು ನನ್ನ ಗುರಿ. ಇನ್ನು 45 ದಿನಗಳು ಬಾಕಿ ಇದ್ದು, ವಿಶ್ರಾಂತಿ ಪಡೆಯದೆ ರಾಜ್ಯ ಸುತ್ತುತ್ತೇನೆ ಎಂದು ಹೇಳಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾದ ಸರ್ಕಾರ ರಚಿಸುವುದು ನಮ್ಮ ಗುರಿ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ ಎಂದರು.

ದೊಡ್ಡ ಗೌಡರಿಗೆ ಕಾರ್ಯಕರ್ತರ ಆಗ್ರಹ
ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್. ನಗರ) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ, ಜೆ.ಡಿ.ಎಸ್. ಕಾರ್ಯಕರ್ತರು ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡರ ಪದ್ಮನಾಭನಗರದಲ್ಲಿರುವ ನಿವಾಸದ ಎದುರು ಧರಣಿ ನಡೆಸಿದ್ದರು.
ದೇವೇಗೌಡರ ನಿವಾಸದ ಎದುರು ಆರ್.ಆರ್. ನಗರದ ಜೆ.ಡಿ.ಎಸ್. ಪಕ್ಷದ ಮುಖಂಡ ಮಂಜುನಾಥ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ, ಕಾರ್ಯಕರ್ತರಿಗೆ ಈಗ ನಿರಾಶೆ ಕಾದಿದೆ.

ನನ್ನ ವಿರುದ್ಧ ಪಿತೂರಿ ನಡೆದಿದೆ ಎಂದ ಪ್ರಜ್ವಲ್
ನಾನು ರಾಜಕೀಯವಾಗಿ ಬೆಳೆದೆರೆ ತಮ್ಮ ಕಳ್ಳಾಟ ನಡೆಯುವುದಿಲ್ಲವೆಂದು ಕೆಲವರು ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ. ನನ್ನ ಶಕ್ತಿ ಕುಂದಿಸುವ ಕೆಲಸ ಮಾಡಿದ್ದಾರೆ ಆದರೆ ನಾನು ಈವರೆಗೆ ಬಿದ್ದಿಲ್ಲ, ಬೀಳುವುದಿಲ್ಲ. ತಾಯಿ ರಾಜರಾಜೇಶ್ವರಿ ಆಶೀರ್ವಾದ ಮಾಡಿದರೆ ನಿಮ್ಮ ಮಗನಾಗಿ ದುಡಿಯುತ್ತೇನೆ' ಎಂದು ಪ್ರಜ್ವಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಇದು ಹುಣಸೂರು ಕ್ಷೇತ್ರ ಸೂಟ್ ಕೇಸ್ ಡೈಲಾಗ್ ಕಿರಿಕಿರಿ ನಂತರ ಬಂದ ಮಾತುಗಳು.

ಎಚ್ಡಿಕೆಗೆ ಮೇಲೆ ಗೂಬೆ ಕೂರಿಸುವ ಯತ್ನ
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಹಾಗೂ ಅತ್ತಿಗೆ ಭವಾನಿ ರೇವಣ್ಣ ಅವರು ಚುನಾವಣೆಗೆ ಸ್ಪರ್ಧಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರಜ್ವಲ್ ಏಳಿಗೆಯನ್ನು ಸಹಿಸುತ್ತಿಲ್ಲ ಎಂದು ಜೆಡಿಎಸ್ ನಿಂದ ಬಂಡಾಯವೆಂದು ಈಗ ಕಾಂಗ್ರೆಸ್ ಸೇರಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಅನೇಕರು ಹೇಳಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ನೇರವಾಗಿ ಪ್ರತಿಕ್ರಿಯಿಸಿಲ್ಲ. ಬದಲಿಗೆ, ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧೆ ಎಂದು ನೂರಾರು ಬಾರಿ ವಿವಿಧ ವೇದಿಕೆಗಳಲ್ಲಿ ಘೋಷಿಸಿದ್ದಾರೆ.

ಲೋಕಸಭೆಗೆ ಸ್ಪರ್ಧೆಯಂತೂ ಖಚಿತ
ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಈ ಹಿಂದೆ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರಜ್ವಲ್ ಕೂಡಾ ಒಲವು ತೋರಿದ್ದರು. ಆದರೆ, ಹುಣಸೂರಿನಲ್ಲಿ ಸ್ಪರ್ಧೆ ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದಾರೆ ಎನ್ನಲಾಗಿದೆ. ಆದರೆ, ಪ್ರಜ್ವಲ್ ಅವರ ತಾಯಿ ಭವಾನಿ ಅವರಿಗೆ ತಮ್ಮ ಮಗ ಬೇಲೂರಿನಿಂದ ಸ್ಪರ್ಧಿಸಲಿ ಎಂಬ ಆಸೆಯಿದೆ. ಅಸೆಂಬ್ಲಿಗೆ ಸ್ಪರ್ಧಿಸುವುದು ಸಾಧ್ಯವಾಗದಿದ್ದರೆ, ಲೋಕಸಭೆಗೆ ಸ್ಪರ್ಧಿಸುವುದಂತೂ ಖಚಿತ.












Click it and Unblock the Notifications