ಜೆಡಿಎಸ್ನಿಂದ ಹಾಸನದಲ್ಲಿ ಭಯದ ವಾತಾವರಣ ನಿರ್ಮಾಣ; ಡಿಕೆಎಸ್
ಹಾಸನ, ಡಿಸೆಂಬರ್ 02; "ಜೆಡಿಎಸ್ ನಾಯಕರು ಹಾಸನ ಜಿಲ್ಲೆಯಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿನ್ನೆಲೆ ಮುಕ್ತ ಚುನಾವಣೆ ಅವಕಾಶಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ" ಎಂದು ಸಂಸದ ಡಿ. ಕೆ. ಸುರೇಶ್ ಹೇಳಿದರು.
ಗುರುವಾರ ಹಾಸನದಲ್ಲಿ ಮಾತಾನಾಡಿದ ಅವರು, "ಮತದಾನದ ಹಕ್ಕಿರುವ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಮ್ಮ ಏಜೆಂಟ್ಗೆ ತೋರಿಸಿ ಮತ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ" ಎಂದು ಜೆಡಿಎಸ್ ನಾಯಕರ ವಿರುದ್ಧ ಆರೋಪ ಮಾಡಿದರು.
"ಚುನಾವಣೆ ನೀತಿ ಸಂಹಿತೆ ಇದ್ದರೂ ಸರ್ಕಾರಿ ವಾಹನ ಹಿಂಪಡೆದಿಲ್ಲ. ಲೋಕಸಭಾ ಸದಸ್ಯರ ಕಚೇರಿ ಚುನಾವಣಾ ಕಾರ್ಯತಂತ್ರದ ಕೇಂದ್ರ ಸ್ಥಾನವಾಗಿದೆ. ಜಿಲ್ಲಾಡಳಿತ ಜೆಡಿಎಸ್ ಜೊತೆ ಶಾಮೀಲಾಗಿದೆ ಎಂದು ಕಾಣುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ" ಎಂದು ಡಿ. ಕೆ. ಸುರೇಶ್ ಎಚ್ಚರಿಸಿದರು.

ದೇವೇಗೌಡರ ಪ್ರಧಾನಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುರೇಶ್, "ಜೆಡಿಎಸ್ ಮತ್ತು ಬಿಜೆಪಿ ಯಾವುದೇ ಕ್ಷಣದಲ್ಲಿ ಬೇಕಾದರೂ ಒಂದಾಗುತ್ತಾರೆ ಎಂಬುದು ಗೊತ್ತಿದೆ. ಜೆಡಿಎಸ್ನವರು ಬಿಜೆಪಿ ಜೊತೆಯಲ್ಲಿ ಅಥವಾ ಯಾರ ಜೊತೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅಧಿಕಾರಕ್ಕೋಸ್ಕರ ಹಾಗೂ ಸ್ಥಾನ ಉಳಿಯಲು ಅವರು ಏನು ಬೇಕಾದರೂ ಮಾಡುತ್ತಾರೆ. ಅವರು ಅದನ್ನು ಮೊದಲಿಂದಲೂ ಮಾಡಿಕೊಂಡು ಬಂದಿದ್ದಾರೆ, ಮುಂದೆಯೂ ಈ ರೀತಿಯಾಗೆ ಮಾಡುತ್ತಾರೆ" ಎಂದು ವ್ಯಂಗ್ಯವಾಡಿದರು.
ಎ. ಮಂಜು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, "ಎ. ಮಂಜು ಅವರು ಈಗಾಗಲೇ ಬಿಜೆಪಿಯ ಸಕ್ರಿಯ ನಾಯಕರಾಗಿದ್ದಾರೆ. ಅವರು ಏನು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದರ ಬಗ್ಗೆ ನನಗೆ ಮಾಹಿತಿಯಿಲ್ಲ. ಕೊಡಗಿನಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ಮಂಥರ್ ಕಾಂಗ್ರೆಸ್ಗಾಗಿ ಅನೇಕ ಕೆಲಸ ಮಾಡಿದ್ದಾರೆ. ಪಕ್ಷ ಅವರನ್ನು ಗುರುತಿಸಿ ಟಿಕೆಟ್ ನೀಡಿದೆ. ಮಂಥರ್ ಪರ ಎ.ಮಂಜು ಅವರು ಹೋಗಿ ಚುನಾವಣೆ ಪ್ರಚಾರ ಮಾಡೋದು ಅವರ ವೈಯಕ್ತಿಕ ವಿಷಯವಾಗಿದೆ" ಎಂದು ಡಿ. ಕೆ. ಸುರೇಶ್ ಸ್ಪಷ್ಟಪಡಿಸಿದರು.
"ನಾನು ಶಾಸಕರಾದ ಶಿವಲಿಂಗೇಗೌಡ, ಪ್ರೀತಂಗೌಡ, ಬಾಲಕೃಷ್ಣ, ಹೆಚ್. ಕೆ. ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರ ಬೆಂಬಲ ಕೋರುತ್ತೇನೆ, ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಶಂಕರ್ಗೆ ಮತ ನೀಡಿ" ಎಂದು ಮನವಿ ಮಾಡಿದರು.
ತನಿಖೆ ನಂತರ ಸತ್ಯಸತ್ಯತೆ ತಿಳಿಯಲಿದೆ; "ಪೊಲೀಸರ ತನಿಖೆ ನಂತರ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಕೊಲೆ ಸಂಚು ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ" ಎಂದು ಸಂಸದ ಡಿ. ಕೆ. ಸುರೇಶ್ ಹೇಳಿದರು.
"ಈಗಾಗಲೇ ಗೋಪಾಲಕೃಷ್ಣ ಅವರು ವೀಡಿಯೋ ಮತ್ತು ಆಡಿಯೋ ರಿಲೀಸ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಈಗಿರುವುದು ಫೇಕ್ ವೀಡಿಯೋ ಎಂದು ಸಿಸಿಬಿಗೆ ಮನವಿ ಸಲ್ಲಿಸಿದ್ದಾರೆ. ರಾಜಕಾರಣದಲ್ಲಿ ವೈಯಕ್ತಿಕ ದ್ವೇಷ ಮಾಡುವುದು ಒಳ್ಳೆಯದಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷದಲ್ಲಿದ್ದಲ್ಲಿದ್ದರೂ ಈ ರೀತಿ ಮಾಡುವುದು ಸರಿಯಾಗಲ್ಲ" ಎಂದರು.
"ನಮಗೆ ಕೊಟ್ಟಿರುವ ಮಾಹಿತಿ ಪ್ರಕಾರ ಫೇಕ್ ವೀಡಿಯೋ ಎಂದು ಹೇಳಿದ್ದಾರೆ. ಪೊಲೀಸರು ಅದಕ್ಕೆ ಬೇಕಾದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಕುರಿತಾಗಿ ಗೋಪಾಲಕೃಷ್ಣ ಅವರು ಈಗಾಗಲೇ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಕೂಡ ಒಂದೊಂದು ಪಕ್ಷದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷ ಯಾವತ್ತೂ ಇಂಥ ಕೆಲಸ ಬೆಂಬಲಿಸಲ್ಲ" ಎಂದು ಸ್ಪಷ್ಟಪಡಿಸಿದರು.
ಬೆದರಿಕೆ ಹಾಕ್ತಿದ್ದಾರೆ: "ಜೆಡಿಎಸ್ ನಾಯಕರು ನಮಗೆ ಮತ ಹಾಕದಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದಾರೆ" ಎಂದು ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಎಂ. ಶಂಕರ್ ಗಂಭೀರ ಆರೋಪ ಮಾಡಿದರು
ಹಾಸನದಲ್ಲಿ ಮಾತನಾಡಿದ ಅವರು, "ಜೆಡಿಎಸ್ನವರು ನಮಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹೇಳುತ್ತಿದ್ದಾರೆ. ನಮಗೆ ಮತ ಹಾಕಲು ಆಸಕ್ತಿಯಿದ್ದರೂ, ಜೆಡಿಎಸ್ ಮುಖಂಡರಿಂದ ಕಿರುಕುಳ ಇದೆ ಎನ್ನುತ್ತಿದ್ದಾರೆ. ನೀವೆಲ್ಲ ದಳಕ್ಕೆ ಮತಹಾಕಬೇಕು. ನಾವು ಅದನ್ನು ನೋಡುತ್ತಿರುತ್ತೇವೆ ಎಂದು ಜೆಡಿಎಸ್ ಮುಖಂಡರು ಹೆದರಿಸುತ್ತಿದ್ದಾರೆ ಎಂದು ಮತದಾರರು ನಮಗೆ ತಿಳಿಸಿದ್ದಾರೆ. ಮತದಾರರ ಮನೆಗೂ ಬಂದು ತಾಕೀತು ಮಾಡುತ್ತಿದ್ದಾರೆ. ಹೀಗಾಗಿ ನನಗೆ ಮತ ಹಾಕಲು ಅವರೆಲ್ಲ ಈಗ ಹೆದರುತ್ತಿದ್ದಾರೆ. ಜೆಡಿಎಸ್ನವರು ತೀರ ಬೆದರಿಕೆ ಸಂದರ್ಭ ಮುಂದುವರಿಸಿದರೆ ದೂರು ಕೊಡಿಸುತ್ತೇವೆ" ಎಂದು ಆಕ್ರೋಶ ಹೊರ ಹಾಕಿದರು.












Click it and Unblock the Notifications