PFI-SDPI ನಿಷೇಧಿಸುವುದಾದರೆ, ಆರ್ಎಸ್ಎಸ್-ಭಜರಂಗದಳವನ್ನು ಬ್ಯಾನ್ ಮಾಡಲಿ;ಪ್ರಜ್ವಲ್ ರೇವಣ್ಣ
ಹಾಸನ, ಸೆ.30: ಚುನಾವಣೆ ಗಿಮಿಕ್ಗಾಗಿ ಪಿಎಫ್ಐ ಮತ್ತು ಎಸ್ಡಿಪಿಐ ಬ್ಯಾನ್ ಮಾಡಲಾಗಿದ್ದು, ಬ್ಯಾನ್ ಮಾಡುವುದಾದರೇ ಆರ್ಎಸ್ಎಸ್, ಭಜರಂಗದಳ ಸೇರಿಸಿ ಒಟ್ಟಿಗೆ ಮಾಡಲಿ ಎಂದು ಸಂಸದ ಪ್ರಜ್ವಲ್ ರೇವಣ್ಣನವರು ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಹಾಸನದ ಜವೇನಹಳ್ಳಿ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, "ದೇಶದಲ್ಲಿ ಬ್ಯಾನ್ ಮಾಡಲಾಗಿರುವ ಪಿಎಫ್ಐ ಒಂದೆ ಅಲ್ಲ. ಆರ್ಎಸ್ಎಸ್, ಭಜರಂಗದಳ ಒಂದೆ ಅಲ್ಲ ಅನೇಕ ಸಂಘಟನೆಗಳಿವೆ. ಬ್ಯಾನ್ ಮಾಡುವುದಾದರೇ ಎಲ್ಲಾ ಒಟ್ಟಿಗೆ ಬ್ಯಾನ್ ಮಾಡಲಿ. ಒಂದೆರಡು ಬ್ಯಾನ್ ಮಾಡುತ್ತೀನಿ ಎನ್ನುವುದು, ಇನ್ನೆರಡು ಬ್ಯಾನ್ ಮಾಡುವುದಿಲ್ಲ ಎಂದು ಸಮಾಜದಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಠಿ ಮಾಡಿ ನೀವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಿ" ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಹಾಸನದಲ್ಲಿ ಪ್ರತಿಯೊಬ್ಬರೂ ದೇವೇಗೌಡರ ಹೆಸರೇಳಿ ರಾಜಕಾರಣ ಮಾಡುತ್ತಿದ್ದಾರೆ: ಪ್ರಜ್ವಲ್ ರೇವಣ್ಣ
ಉಳಿದ ಸಂಘಟನೆಗಳ ಕಡೆ PFI, SDPI ಬೊಟ್ಟು ಮಾಡುತ್ತದೆ
"ಪಿಎಫ್ಐ ಮತ್ತು ಎಸ್ಡಿಪಿಐ ಮಾತ್ರ ಬ್ಯಾನ್ ಮಾಡುತ್ತೀನಿ ಎಂದ್ರೆ ಅವರು ಸುಮ್ಮನಿರುತ್ತಾರಾ..? ಉಳಿದ ಸಂಘಟನೆಯನ್ನು ಕೂಡ ಬ್ಯಾನ್ ಮಾಡುವಂತೆ ಬೆಟ್ಟು ಮಾಡಿ ತೋರಿಸುತ್ತಾರೆ. ಸರಕಾರಗಳು ಇದಕ್ಕೆ ತುರ್ತು ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರೇ ಎಲ್ಲಾ ಪಾರ್ಟಿಗಳ ಸಭೆ ಕರೆಯಿರಿ, ನಮ್ಮನ್ನು ಬಿಡಿ ನಾವೆಲ್ಲಾ ಜೂನಿಯರ್ಸ್, ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಪಿಎಫ್ಐ ಮತ್ತು ಎಸ್.ಡಿ.ಪಿ.ಐ. ನಿಂದ ಯಾವ ತಪ್ಪಾಗಿದೆ? ಟರ್ನಿಸಂ ಆಕ್ಟಿವಿಟಿ ನಡೆಯುತ್ತಿದೆ ಎಂದು ಶಾಸಕರು, ಮಂತ್ರಿಗಳು ಹೇಳಿಕೆ ಕೊಡುತ್ತಿದ್ದಾರೆ. ನೀವು ಹೇಳುವುದಕ್ಕೆ ದಾಖಲಾತಿ ಏನಿದೆ? ಸಾಕ್ಷಿಯನ್ನು ಜನರ ಮುಂದೆ ಇಟ್ಟು ನಂತರ ಯಾರಾನ್ನಾದರೂ ಬ್ಯಾನ್ ಮಾಡಿ ಬೇಡ ಎಂದು ಹೇಳುವುದಿಲ್ಲ" ಎಂದಿದ್ದಾರೆ.
ತಪ್ಪೆ ಮಾಡದೇ ಶಿಕ್ಷೆ ನೀಡಿದ್ರೆ ಅದು ಯಾವ ನ್ಯಾಯ..?
"ಯಾಕಾಗಿ ಪಿಎಫ್ಐ ಬ್ಯಾನ್ ಮಾಡ್ತೀದ್ದೀರಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ಮೊದಲು ರೆಕಾರ್ಡ್ ನೀಡಿ ಉತ್ತರ ಕೊಡಿ. ನಾನು ತಪ್ಪು ಮಾಡಿದ್ರೆ ಶಿಕ್ಷೆ ಆಗಬೇಕು. ತಪ್ಪೆ ಮಾಡದೇ ಶಿಕ್ಷೆ ನೀಡಿದ್ರೆ ಅದು ಯಾವ ನ್ಯಾಯ?. ನೂರಕ್ಕೆ ನೂರರಷ್ಟು ದುಡುಕಿನ ನಿರ್ಧಾರ ಒಂದೆ ಅಲ್ಲ. ಚುನಾವಣೆ ಹತ್ತಿರ ಇರುವುದರಿಂದ ರಾಜಕೀಯಕ್ಕೊಸ್ಕರ ಇಂತಹದಕ್ಕೆ ಮುಂದಾಗಿದ್ದಾರೆ" ಎಂದು ದೂರಿದ್ದಾರೆ.
'ಆರೋಪಗಳಲ್ಲ, ದಾಖಲಾತಿ ಅತಿ ಅವಶ್ಯಕ'
'ಈ ಸಂಘಟನೆಗಳು ನೆನ್ನೆ ಮೊನ್ನೆ ಹುಟ್ಟಿದಲ್ಲ. ಹಲವಾರು ವರ್ಷಗಳಿಂದ ಇದ್ದು, ಬ್ಯಾನ್ ಮಾಡುವುದಾದರೇ ಸರಕಾರ ಬಂದ ಮೂರು ವರ್ಷಗಳಲ್ಲೆ ಮಾಡಬಹುದಿತ್ತು. ಇಷ್ಟೊಂದು ಸಮಯ ಬೇಕಾಗಿರಲಿಲ್ಲ. ಇದೆಲ್ಲಾ ಚುನಾವಣೆಯ ಗಿಮಿಕ್ ಆಗಿ ಮಾಡುತ್ತಿದ್ದಾರೆ. ಇದೆಲ್ಲಾ ಯಾವುದು ಶಾಶ್ವತವಲ್ಲ. ಇದೆಲ್ಲಾ ಮಾಡುತ್ತಾ ಹೋದ್ರೆ ನಾವೇ ಸಮಾಜದಲ್ಲಿ ಒಡಕನ್ನು ತಂದಂತಾಗುತ್ತದೆ" ಎಂದಿದ್ದಾರೆ.
'ಹಿಂದೂ ಕಾರ್ಯಕರ್ತರ ಹತ್ಯೆಗಳಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರ ಕೈವಾಡ ಇದೆ ಎನ್ನುವ ಆರೋಪಗಳನ್ನು ಪೊಲೀಸ್ ಹೇಳುತ್ತಿದ್ದಾರೊ, ಇತರರು ಹೇಳುತ್ತಿದ್ದರೊ ಅದಕ್ಕೆಲ್ಲ ದಾಖಲಾತಿಗಳು ಅವಶ್ಯಕ. ಗೃಹ ಸಚಿವರೂ ಕೂಡ ದಾಖಲಾತಿ ಸಮೇತ ಕೊಡಲಿ. ಚುನಾವಣೆಗೊಸ್ಕರ ಒಂದೆರಡು ಕಮಿಟಿ, ಜನಾಂಗ ಒಡೆಯುವುದಕ್ಕಾಗಲಿ ಮತ್ತು ರಾಜ್ಯವನ್ನು ಒಡೆಯುವುದಕ್ಕಾಗಲಿ ದಯವಿಟ್ಟು ಮಾಡಬೇಡಿ. ವಿಶ್ವಾಸದಿಂದ ಜನರು ಬದುಕು ನಡೆಸುತ್ತಿದ್ದು, ಇದರಲ್ಲಿ ನೀವೇ ವಿಷ ಹಾಕಿ ಒಡೆಯುವ ಕೆಲಸ ಮಾಡಬೇಡಿ' ಎಂದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಗುತ್ತಿಗೆದಾರರ ಸಂಘ ಇಡೀ ರಾಜ್ಯಕ್ಕೆ 40% ಕಮಿಷನ್ ಬಗ್ಗೆ ತಿಳಿಸಿದೆ
ನಾನು ಆಗಲಿ, ಕುಮಾರಣ್ಣ ಆಗಲಿ,ರೇವಣ್ಣ ಆಗಲಿ 40 ಪರ್ಸೇಂಟ್ ಸರಕಾರ ಎಂದು ಹೇಳಲು ಹೋಗಲಿಲ್ಲ. ಮುಖ್ಯಮಂತ್ರಿಗಳು ಸಭೆ ಕರೆದ ವೇಳೆ ಗುತ್ತಿಗೆದಾರ ಅಸೋಸಿಯೇಷನ್ ಇಡೀ ರಾಜ್ಯಕ್ಕೆ 40 ಪರ್ಸೆಂಟ್ ಸರಕಾರವೆಂದು ತಿಳಿಸಿದ್ದಾರೆ. ನಾನು ಹೇಳಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಣ್ಣ ಹೇಳಿಲ್ಲ. ಈಗ ಇಡೀ ಗ್ರಾಮೀಣ ಮಟ್ಟಕ್ಕೆ 40 ಪರ್ಸೆಂಟ್ ಸರಕಾರ ಎಂದು ಗೊತ್ತಾಗಿದೆ. ಇಂತಹ ಆರೋಪಗಳನ್ನು ಅಧಿಕಾರಿಗಳು ಹಣ ಪಡೆದು ಸರಕಾರದ ಮೇಲೆ ದೂರುತ್ತಿರಬೇಕು. ಇಲ್ಲ ಸರಕಾರವು ಹಣ ಪಡೆದು ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿರಬೇಕು. ಅಧಿಕಾರಿಗಳು ಸರಿಯಾಗಿರಬೇಕು ಎಂದರೇ ಸರಕಾರ ಅವರನ್ನು ಹದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.