ಹಾಸನ : ಶೀಘ್ರದಲ್ಲಿಯೇ ಪ್ರವಾಸಿಗರನ್ನು ಆಕರ್ಷಿಸಲಿದೆ ಹುಣಸಿನಕೆರೆ
ಹಾಸನ, ಜೂನ್ 13 : ಹಾಸನ ನಗರದ ಹುಣಸಿನಕೆರೆ ಅಭಿವೃದ್ದಿಗೆ ಜಿಲ್ಲಾಡಳಿತ ಸಂಕಲ್ಪ ತೊಟ್ಟಿದೆ. ಕೊಳಚೆ ನೀರಿನಿಂದ ತುಂಬಿರುವ ಕೆರೆಯನ್ನು ಶುಚಿಗೊಳಿಸಿ, ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಅಭಿವೃದ್ಧಿಗೊಳಿಸಲಾಗುತ್ತದೆ.
ಗುರುವಾರ ಹುಣಸಿನಕೆರೆ ಅಭಿವೃದ್ದಿಗೆ ವಿಸ್ತ್ರತವಾದ ಯೋಜನೆ ರೂಪಿಸುವ ಸಲುವಾಗಿ ನಿವೃತ್ತ ಇಂಜಿನಿಯರ್ಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕೆರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬೆಂಗಳೂರಿನ ಜಲ ಮಂಡಳಿಯ ನಿವೃತ್ತ ಹೆಚ್ಚುವರಿ ಮುಖ್ಯ ಇಂಜಿನಿಯರ್, ನಗರ ನೀರು ಸರಬರಾಜು ಮಂಡಳಿಯ ಇಂಜಿನಿಯರ್ಗಳು, ಹಸಿರು ಭೂಮಿ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹುಣಸಿನಕೆರೆಗೆ ಭೇಟಿ ನೀಡಿದರು.
ಬೆಂಗಳೂರು ಜಲ ಮಂಡಳಿ ನಿವೃತ್ತ ಹೆಚ್ಚುವರಿ ಮುಖ್ಯ ಇಂಜಿನಿಯರ್ ವಿ.ಸಿ ಕುಮಾರ್ ಅವರು ಮಾತನಾಡಿ, 'ನಗರದ ಕೊಳಚೆ ನೀರು ನೇರವಾಗಿ ಕೆರೆಗೆ ಬರುತ್ತಿದೆ. ಇದರಿಂದ ಸ್ಥಳೀಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಮೊದಲು ಕೊಳಚೆ ನೀರು ಕೆರೆಗೆ ಬಾರದಂತೆ ಪ್ರತ್ಯೇಕ ಚರಂಡಿ ವ್ಯವಸ್ಥೆ ಮಾಡಬೇಕಾಗಿದೆ' ಎಂದರು.

ಸ್ಥಳೀಯರ ಸಹಕಾರ ಅಗತ್ಯ
ಕೆರೆಯ ಹೂಳು ತೆಗೆದು, ತಡೆಗೋಡೆಗಳನ್ನು ನಿರ್ಮಾಣ ಮಾಡುವ ಮೂಲಕ ಕೊಳಚೆ ನೀರು ಕೆರೆಗೆ ನೇರವಾಗಿ ಹರಿಯುವುದನ್ನು ತಡೆಯಬಹುದಾಗಿದೆ. ಆದರೆ ಕೆರೆಯ ಸ್ವಚ್ಚತೆ, ಸೌಂದರ್ಯ ಅಭಿವೃದ್ಧಿಗೊಳಿಸಲು ಸ್ಥಳೀಯರ ಹೆಚ್ಚಿನ ಸಹಕಾರ ಅಗತ್ಯ ಎಂದು ಅಧಿಕಾರಿಗಳು ಹೇಳಿದರು.

ವಿಶ್ರಾಂತಿ ಗೃಹ ನಿರ್ಮಾಣ
ವಿಶ್ರಾಂತಿ ಗೃಹ ನಿರ್ಮಾಣ ಮಾಡಿ, ಆ ಮೂಲಕ ಕೆರೆಗೆ ಆಗಮಿಸುವವರಿಗೆ ಮೂಲಭೂತ ಸೌಕರ್ಯ ಕಲ್ಪಿಸಬಹುದಾಗಿದೆ. ಅಲ್ಲದೆ ವಿವಿಧ ಜೀವ ಸಂಕುಲಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೃತಕ ದ್ವೀಪ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಚರ್ಚೆ ನಡೆಸಲಾಯಿತು.

213 ಎಕರೆ ವಿಸ್ತಾರವಾದ ಕರೆ
ಖ್ಯಾತ ಕಲಾವಿದರಾದ ಬಿ.ಎಸ್ ದೇಸಾಯಿ ಮಾತನಾಡಿ, 'ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೆರೆಯಿಂದ ಹಿಂದೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು, ಸುಮಾರು 130 ಜಾತಿಯ ಪಕ್ಷಿಗಳು ಪ್ರತಿ ವರ್ಷ ನೋಡುಗರನ್ನು ಆಕರ್ಷಿಸುತ್ತಿದ್ದವು. 213 ಎಕರೆ ವಿಸ್ತಾರವಾದ ಕೆರೆ ಈಗ ಒತ್ತುವರಿಯಾಗಿದೆ' ಎಂದರು.

ರಾಸಾಯನಿಕ ಸೇರುತ್ತಿದೆ
ಈ ಕೆರೆಗೆ ರಾಸಾಯನಿಕ ದ್ರವಗಳು ಸೇರಿದಂತೆ ಇನ್ನಿತರ ಹಾನಿಕಾರಕ ತ್ಯಾಜ್ಯಗಳ ವಿಲೇವಾರಿಯಾಗುತ್ತಿದೆ ಎಂದು ಚರ್ಚೆ ನಡೆಸಲಾಯಿತು. ಸ್ಥಳೀಯರ ಸಹಕಾರದಿಂದ ಕೆರೆಯನ್ನು ಅಭಿವೃದ್ಧಿ ಮಾಡುವ ಕುರಿತು ಚರ್ಚೆ ನಡೆಸಲಾಯಿತು.












Click it and Unblock the Notifications