ಹಾಸನ ನಗರಸಭೆ ಚುನಾವಣೆಗೆ ಹೈಕೋರ್ಟ್ ಒಪ್ಪಿಗೆ; ಜೆಡಿಎಸ್ಗೆ ಹಿನ್ನಡೆ
ಹಾಸನ, ಅಕ್ಟೋಬರ್ 21 : ಹಾಸನ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಮೀಸಲಾತಿಗೆ ಯಾವುದೇ ತಡೆಯನ್ನು ನೀಡಿಲ್ಲ.
ಕರ್ನಾಟಕ ಸರ್ಕಾರ ಹಾಸನ ನಗರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರಿಸಿ ಆದೇಶ ಹೊರಡಿಸಿತ್ತು. ಇದಕ್ಕೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿತ್ತು.
ನ್ಯಾಯಮೂರ್ತಿ ಆರ್. ದೇವದಾಸ್ ನೇತೃತ್ವದ ಏಕ ಸದಸ್ಯ ಪೀಠ ಹೆಚ್. ವಿ. ಚಂದ್ರೇಗೌಡ ಸೇರಿದಂತೆ ಹಾಸನ ನಗರಸಭೆಯ 21 ಚುನಾಯಿತ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಒಪ್ಪಿಗೆ ನೀಡಿತು ಮತ್ತು ನವೆಂಬರ್ 2ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿತು. ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು.
ವಿವಾದವೇನು? : ಸರ್ಕಾರ ಹಾಸನ ನಗರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರಿಸಿ ಆದೇಶ ಹೊರಡಿಸಿದೆ. ಹಾಸನ ನಗರ ಸಭೆ ಸದಸ್ಯ ಬಲ 35. ಜೆಡಿಎಸ್ 17, ಬಿಜೆಪಿ 13 ಸ್ಥಾನದಲ್ಲಿ ಜಯಗಳಿಸಿದೆ. ಹೆಚ್ಚು ಸ್ಥಾನಗಳಿಸಿದ್ದರೂ ಜೆಡಿಎಸ್ಗೆ ಅಧಿಕಾರ ಸಿಗುವುದಿಲ್ಲ. ಇದಕ್ಕೆ ಮೀಸಲಾತಿ ಕಾರಣವಾಗಿದೆ.
ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಪ್ರಭಾವದಿಂದ ಮೀಸಲಾತಿಯನ್ನು ಬದಲಾವಣೆ ಮಾಡಲಾಗಿದೆ ಎಂಬುದು ಜೆಡಿಎಸ್ ಆರೋಪ. ಆದ್ದರಿಂದ, ನಾಯಕರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಮೀಸಲಾತಿ ಬದಲಾವಣೆಗೆ ನ್ಯಾಯಾಲಯ ಸೂಚನೆ ನೀಡಿಲ್ಲ.












Click it and Unblock the Notifications