ಹಾಸನದಲ್ಲಿ ಮಳೆ ಆರ್ಭಟಕ್ಕೆ ನಲುಗಿದ ಜನರು, ವರುಣನಿಂದ ಹತ್ತಾರು ಅವಾಂತರ
ಹಾಸನ, ಜುಲೈ 11 : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಹೇಮಾವತಿ ನದಿಯ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಸೇರಿದಂತೆ ಹಲವು ಕಡೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಸಕಲೇಶಪುರ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯಕ್ಕೆ 23 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಪ್ರವಾಸಿಗರಿಗೆ ಸೂಚನೆ; ದೂಧ್ ಸಾಗರಕ್ಕೆ ಪ್ರವೇಶ ನಿಷೇಧ
ಹೇಮಾವತಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಒಳಹರಿವು ಹೆಚ್ಚಳ ಹಿನ್ನೆಲೆ 17 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದು, ಸಕಲೇಶಪುರ, ಆಲೂರು ಹಾಗೂ ಅರಕಲಗೂಡು ತಾಲೂಕಿನ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ನೀಡಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಬಾಳೆಹೊನ್ನೂರು ಸಮೀಪದ ಮಣಬೂರಿನಲ್ಲಿ ರಸ್ತೆ ಮಟ್ಟದ ಸೇತುವೆ ಮೇಲೆ 4 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು, ಗ್ರಾಮದಿಂದ ಹೊರಬರಲಾಗದೆ ಜನರಿಗೆ ಜಲದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಉಕ್ಕಿ ಹರಿಯುತ್ತಿರುವ ನದಿ ದಾಟಲು ಗ್ರಾಮಸ್ಥರ ಹರಸಾಹಸಪಡುತ್ತಿದ್ದು, ಹಗ್ಗವನ್ನು ಕಟ್ಟಿ ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಸಮಸ್ಯೆ ಇದ್ದರೂ ಬಗೆಹರಿದಿಲ್ಲ, ದಯವಿಟ್ಟು ಒಂದು ಸೇತುವೆ ನಿರ್ಮಿಸಿ ನಮ್ಮ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಮಣಬೂರು ಗ್ರಾಮಸ್ಥರ ಒತ್ತಾಯಿಸಿದ್ದಾರೆ.
ಭೋರ್ಗರೆಯುತ್ತಿರುವ ಗಗನ ಚುಕ್ಕಿ-ಭರಚುಕ್ಕಿ ಜಲಪಾತಗಳು: ಸಾವಿರಾರು ಪ್ರವಾಸಿಗರ ದಂಡು
ಮಳೆ ನೀರು ನುಗ್ಗಿ ರೈತರಿಗೆ ನಷ್ಟ
ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ರುದ್ರಮ್ಮ ಎಂಬುವವರ ವಾಸದ ಮನೆ ಬಿದ್ದು, ಮನೆಯಲ್ಲಿದ್ದ ಸಂಪೂರ್ಣ ವಸ್ತುಗಳು ನೀರುಪಾಲಾಗಿದೆ. ಬೇಲೂರು ತಾಲೂಕಿನ ಡನಾಯ್ಕನಹಳ್ಳಿ ಗ್ರಾಮದ ಶಿವಕುಮಾರ್ ಎಂಬ ರೈತನ ತೋಟಕ್ಕೆ ಮಳೆ ನೀರು ನುಗ್ಗಿ, ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶುಂಠಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಎತ್ತಿನಹೊಳೆ ಕಳಪೆ ಕಾಮಗಾರಿಯಿಂದಲೇ ಜಮೀನಿಗೆ ಮಳೆ ನೀರು ನುಗ್ಗಿದೆ, ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಜಮೀನು ಮಾಲೀಕರು ಒತ್ತಾಯ ಮಾಡಿದ್ದಾರೆ.
ಹಾಸನ - ಮಡಿಕೇರಿ ಹೆದ್ದಾರಿ ಬಂದ್
ಅರಕಲಗೂಡು ತಾಲೂಕಿನ ವಡವನಹೊಸಳ್ಳಿ ಗ್ರಾಮದ ಬಳಿ ಮಳೆಗೆ ತಾತ್ಕಾಲಿಕ ರಸ್ತೆ ಜಲಾವೃತ ಭೀತಿ ಹಿನ್ನೆಲೆಯಲ್ಲಿ ರಾಮನಾಥಪುರ - ಕೊಣನೂರು ಮಾರ್ಗದ ರಸ್ತೆ ಬಂದ್ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿಯ ಪ್ರವಾಹದ ನೀರು ಉಕ್ಕಿ ಬದಲಿ ರಸ್ತೆಯವರೆಗೂ ವ್ಯಾಪಿಸಿದೆ. ಹಾಸನ - ಮಡಿಕೇರಿ ನಡುವಿನ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ರಾಮನಾಥಪುರ- ಹಿರೇಹಳ್ಳಿ - ಹೊಸಹಳ್ಳಿ ಮಾರ್ಗವಾಗಿ ಕೊಣನೂರಿಗೆ ಬದಲಿ ಮಾರ್ಗದ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ.
ಭೂ ಕುಸಿತದ ಸ್ಥಳಕ್ಕೆ ಸಚಿವ, ಶಾಸಕರ ಭೇಟಿ
ಸಕಲೇಶಪುರ ತಾಲೂಕಿನ ದೋಣಿಗಾಲ ಬಳಿ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದ ಭೀತಿ ಎದುರಾಗಿದ್ದು, ಕಳೆದ ಮಳೆಗಾಲದಲ್ಲಿ ರಸ್ತೆ ಸಹಿತವಾಗಿ ಮಣ್ಣು ಕುಸಿದು ಒಂದು ತಿಂಗಳು ಬಂದ್ ಆಗಿದ್ದ ಜಾಗದಲ್ಲಿಯೇ ಈ ಭಾರಿಯೂ ಮಣ್ಣು ಕುಸಿದಿದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಮಣ್ಣು ಕುಸಿದಿರುವ ದೋಣಿಗಾಲ್ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಸ್ಥಳಿಯ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿರಾಡಿ ಘಾಟ್ ಬಂದ್ ಇಲ್ಲ
ಶಿರಾಡಿಘಾಟ್ ನಲ್ಲಿ ಎರಡು ಪಥದ ರಸ್ತೆ ಕಾಮಗಾರಿ ನಡೆಯುತ್ತಿದೆ, ಇದು ಬಹಳ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆಯೂ ಮಾಹಿತಿ ಇದೆ. ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಶಿರಾಡಿ ಘಾಟ್ ಬಂದ್ ಮಾಡದೇ ಟೆಕ್ನಾಲಜಿ ಬಳಸಿ ಕೆಲಸ ಬೇಗ ಮುಗಿಸುವಂತೆ ತಿಳಿಸಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ತಿಳಿಸಿದ್ದಾರೆ. ಶಿರಾಡಿಘಾಟ್ ಬಂದ್ ಮಾಡುವ ಪ್ರಮೇಯ ಹಾಗೂ ಪ್ರಶ್ನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳುವ ಮೂಲಕ ಶಿರಾಡಿ ಘಾಟ್ ಆರು ತಿಂಗಳು ಬಂದ್ ಮಾಡುತ್ತಾರೆ ಎನ್ನುವ ಊಹಾಪೋಹಳಿಗೆ ತೆರೆ ಎಳೆದರು.
Recommended Video