'ಪ್ರಧಾನಿ ಮೋದಿ ಮಾತು ಕೇಳದೇ ಎಚ್ಡಿಕೆ ತಪ್ಪು ಮಾಡಿದರು': ಎಚ್.ಡಿ.ರೇವಣ್ಣ
ಹಾಸನ, ಜೂನ್ 30: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲಿನ ಬಗ್ಗೆ ಅಣಕವಾಡಿದ ಸಚಿವ ಆರ್.ಅಶೋಕ್ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
"ರಾಜ್ಯಸಭಾ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡುವಂತೆ ಯಾರ ಮನೆ ಬಾಗಿಲಿಗೂ ನಾವು ಹೋಗಿರಲಿಲ್ಲ. ಬೆಂಬಲ ಕೇಳಿದ್ದೆವು, ಅದು ರಾಜಕಾರಣದಲ್ಲಿ ಅದು ಸ್ವಾಭಾವಿಕ. ಮೇಡಂ (ಸೋನಿಯಾ ಗಾಂಧಿ) ಅವರು ಕೋಮುವಾದಿಗಳನ್ನು ದೂರವಿಡಬೇಕೆಂದು ಹೇಳಿದ್ದರು. ಆದರೆ, ಅವರೇ ಎ ಟೀಂ, ಬಿ ಟೀಂ ಎಂದು ಬಂದರು"ಎಂದು ಎಚ್.ಡಿ.ರೇವಣ್ಣ ಹೇಳಿದರು.
"ರಾಜ್ಯಸಭಾ ಚುನಾವಣೆಯಲ್ಲಿ ಬೆಂಬಲಕ್ಕಾಗಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಶಾಸಕರ ಕಾಲಿಗೆ ಬೀಳುವುದೊಂದು ಬಾಕಿ ಇತ್ತು"ಎಂದು ಅಶೋಕ್ ಲೇವಡಿ ಮಾಡಿದ್ದರು. "ಬಿಜೆಪಿಯ ಮೂರನೇ ಅಭ್ಯರ್ಥಿ ಗೆದ್ದಿದ್ದಾರೆಂದರೆ ಅದಕ್ಕೆ ಕಾಂಗ್ರೆಸ್ಸಿನವರೇ ಕಾರಣವೇ ಹೊರತು, ನಾವಲ್ಲ"ಎಂದು ರೇವಣ್ಣ ಸ್ಪಷ್ಟ ಪಡಿಸಿದರು.

"ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುವ ನಾಲ್ಕು ದಿನಗಳ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಕುಮಾರಸ್ವಾಮಿಯವರನ್ನು ದೆಹಲಿಗೆ ಕರೆಸಿಕೊಂಡಿದ್ದರು. ಬೇಷರತ್ ಬೆಂಬಲ ನೀಡುವುದಾಗಿ, ನೀವೇ ಐದು ವರ್ಷ ಮುಖ್ಯಮಂತ್ರಿಯಾಗಿ, ಕಾಂಗ್ರೆಸ್ ಅನ್ನು ನಂಬಬೇಡಿ ಎನ್ನುವ ಆಫರ್ ಅನ್ನು ನೀಡಿದ್ದರು. ಪ್ರಧಾನಿಯವರ ಮಾತನ್ನು ಕೇಳದೇ ಕುಮಾರಣ್ಣ ತಪ್ಪು ಮಾಡಿದರು. ಇದನ್ನು ಮೊದಲು ಅಶೋಕ್ ಅರಿತುಕೊಳ್ಳಲಿ"ಎಂದು ರೇವಣ್ಣ ತಿರುಗೇಟು ನೀಡಿದರು.
"ಮೂರ್ನಾಲ್ಕು ವೋಟ್ ಕಮ್ಮಿಯಿದೆ ಎಂದು ಸೋನಿಯಾ ಗಾಂಧಿಯವರನ್ನು ಕೇಳಿದ್ದು ನಿಜ. ಕಾಂಗ್ರೆಸ್ಸಿನವರೇ ನಮ್ಮ ಮನೆಗೆ ಬಂದಿದ್ದು, ನಮಗೆ ಮೂವತ್ತು ವೋಟ್ ಇದ್ದವು, ಅದನ್ನು ಹಾಕಿಕೊಂಡೆವು. ಗುಬ್ಬಿ ಶ್ರೀನಿವಾಸ್ ಅವರ ವೋಟ್ ಅನ್ನು ಬಿಜೆಪಿಯವರು ಎಷ್ಟಕ್ಕೆ ಖರೀದಿ ಮಾಡಿದರು ಎಂದು ಸತ್ಯ ಹೇಳಲಿ, ನೋಡೋಣ"ಎಂದು ರೇವಣ್ಣ ಸವಾಲು ಎಸೆದರು.

"ಈ ವಿಚಾರವನ್ನು ನಾನೇ ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುವೆ. ಗುಬ್ಬಿ ವಾಸಣ್ಣ ಅವರನ್ನು ಭೇಟಿಯಾಗಲು ಯಾರು ಹೋಗಿದ್ದರು, ಎಲ್ಲಿ ಭೇಟಿಯಾಗಿದ್ದರು, ಎಷ್ಟಕ್ಕೆ ಡೀಲ್ ಆಗಿರುವ ಮಾಹಿತಿ ನನ್ನಲ್ಲಿ ಇದೆ"ಎಂದು ರೇವಣ್ಣ ಹೇಳಿದರು.
"ಅಧಿಕಾರಕ್ಕಾಗಿ ಎಂದೂ ನಾವು ಯಾರ ಮನೆಗೂ ಹೋದವರಲ್ಲ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಗೊತ್ತಿಲ್ಲವೇ. ಬಿಜೆಪಿಯವರಿಗೆ ನಾವು ಹೇಳುವುದಿಷ್ಟೇ, ಇನ್ನು ಮುಂದೆ ಚುನಾವಣೆ ನಡೆಸಬೇಡಿ. ಎಲ್ಲಾ ಅಧಿಕಾರವನ್ನು ನೀವೇ ಅನುಭವಿಸಿ"ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ.












Click it and Unblock the Notifications