ದಕ್ಷಿಣ ಕಾಶಿ ರಾಮನಾಥಪುರದಲ್ಲಿ ಪುಷ್ಕರ ಸ್ನಾನ
ಹಾಸನ, ಸೆ. 12 : ದಕ್ಷಿಣ ಕಾಶಿ ಎಂದೇ ಜನಜನಿತವಾಗಿರುವ ರಾಮನಾಥಪುರದಲ್ಲಿ ಸೆಪ್ಟಂಬರ್ 12 ರಿಂದ 23ರ ವರೆಗೂ ಕಾವೇರಿ ಪುಷ್ಕರ ಸ್ನಾನ ಆಯೋಜನೆಗೊಂಡಿದೆ.
ವಿಶ್ವಕರ್ಮ ಜಗದ್ಗುರು ಪೀಠದ ಶ್ರೀಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳು ಈ ಬಗ್ಗೆ ವಿವರ ನೀಡಿ, ಕನ್ನಡ ನಾಡಿನಲ್ಲಿ ಅನೇಕ ಪುಣ್ಯ ಕ್ಷೇತ್ರಗಳು, ಪುಣ್ಯ ನದಿಗಳಿವೆ, ಆದರೆ, ಕಾವೇರಿ ನದಿಗೆ ಒಂದು ವಿಶೇಷವಾದ ಸ್ಥಾನವಿದೆ. ಕೊಡಗಿನಲ್ಲಿ ಹುಟ್ಟುವ ಕಾವೇರಿ ಗಂಗೆಯಷ್ಟೇ ಪವಿತ್ರಳು, ನಾಡಿನ ಜೀವನದಿ ಎಂದರು.
ಜ್ಯೋತಿಷ್ಯ ಹಾಗೂ ಪುರಾಣಗಳ ರೀತಿಯಲ್ಲಿ ಗುರು ಗ್ರಹವು ತುಲಾ ರಾಶಿಗೆ ಪ್ರವೇಶ ಮಾಡಿದಾಗ ನಮ್ಮ ಕಾವೇರಿ ನದಿಗೆ ಸಕಲ ನದಿಗಳ ತೀರ್ಥಗಳ ಸಂಗಮವಾಗುವುದು ಎಂದು ಶಾಸ್ತ್ರಗಳು ಹೇಳಿವೆ.
ಈ ಮಹಾಪರ್ವಕಾಲದಲ್ಲಿ ಕುಟುಂಬ ಸಮೇತರಾಗಿ ಸಂಕಲ್ಪ ಮಾಡಿ ಪವಿತ್ರ ಸ್ನಾನ ಮಾಡುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತದೆ ಎಂದರು.
ಜ್ಯೋತಿಷಿಗಳಾದ ಆಚಾರ್ಯ ಗುರುಪ್ರಕಾಶ್ ಗುರೂಜಿ ನೇತೃತ್ವದಲ್ಲಿ ರಾಮನಾಥಪುರದ ಗುರುಗಳು ಹಾಗೂ ಊರಿನ ಪ್ರಮುಖರ ಸಹಕಾರದಿಂದ ಲೋಕಕಲ್ಯಾಣಾರ್ಥ, ಸಮರ್ಪಕ ಮಳೆ ಬೆಳೆ, ಅನ್ನದಾತರ ಅಭ್ಯುದಯಕ್ಕಾಗಿ ಕಾವೇರಿ ನದಿ ತಟದಲ್ಲಿ ಅರೇಮಾದನಹಳ್ಳಿ ಶಾಖಾಮಠದಲ್ಲಿ 12 ದಿನಗಳ ಕಾಲ ವಿಶೇಷ ಪೂಜೆ, ಹೋಮವನ್ನು ನಡೆಸಲಾಗುತ್ತದೆ.
ಅರಕಲಗೂಡು ದೊಡ್ಡಮಠದ ಮಲ್ಲಿಕಾರ್ಜುನ ಮಹಾ ಸ್ವಾಮೀಜಿ, ಆದಿ ಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕೆ.ಆರ್. ನಗರ ಕನಕಗುರು ಪೀಠದ ಶಿವನಂದಪುರಿ ಮಹಾ ಸ್ವಾಮೀಜಿ. ಅರಕಲಗೂಡು ಚೆಲುಮೆ ಮಠದ ಜಯದೇವ ಸ್ವಾಮೀಜಿ, ಬಸವಾಪಟ್ಟಣದ ಬಸವಲಿಂಗ ಸ್ವಾಮೀಜಿ, ಶಿರದನಹಳ್ಳಿ ಬಸವ ಕಲ್ಯಾಣ ಮಠದ ಸಿದ್ದಲಿಂಗ ಸ್ವಾಮೀಜಿಗಳು ಈ ಪುಷ್ಕರ ಸ್ನಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಾಸನದಿಂದ ಅರಕಲಗೂಡು ಮಾರ್ಗದಲ್ಲಿ ಸರಿ ಸುಮಾರು 50 ಕಿ.ಮೀ ದೂರದಲ್ಲಿರುವ ರಾಮನಾಥಪುರದ ಪ್ರಸನ್ನ ಸುಬ್ರಮಣ್ಯ ದೇಗುಲದಲ್ಲಿ ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.