ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ: ರಸ್ತೆಗೆ ಬಂದ ಒಂಟಿಸಲಗ!
ಹಾಸನ ಸೆಪ್ಟೆಂಬರ್ 28: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಹಾಸನದಲ್ಲಿ ನಡೆದಿದ್ದು ಇತರ ಸವಾರರನ್ನು ಬೆಚ್ಚಿ ಬೀಳಿಸಿದೆ. ಓಮ್ನಿ ಕಾರು ನೋಡನೋಡುತ್ತಿದ್ದಂತೆ ಹೊತ್ತಿ ಉರಿದಿದೆ. ಈ ವೇಳೆ ಇದರಲ್ಲಿ ಮೂರು ಜನ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಹಾಸನನ ಹೆರಗು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆನಳ್ಳಿ ಗ್ರಾಮದ ಅಶೋಕ್ ಎಂಬುವವರಿಗೆ ಸೇರಿದ ಓಮ್ನಿ ಕಾರಿಗೆ ಬೆಂಕಿ ಹೊತ್ತಿ ಉರಿದಿದೆ. ಕೂಡಲೇ ರಸ್ತೆಯಲ್ಲಿಯೇ ಕಾರು ನಿಲ್ಲಿಸಿದ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಚಾಲಕ ಅಶೋಕ್ ತಮ್ಮ ಇಟ್ಟಿಗೆ ಫ್ಯಾಕ್ಟರಿಗೆ ಹೋಗಿ ವಾಪಾಸ್ಸಾಗುತ್ತಿದ್ದರು. ಹೆರಗು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ಗಾಬರಿಗೊಂಡ ಅಶೋಕ್ ಹಾಗೂ ಇಬ್ಬರು ಸ್ನೇಹಿತರು ತಕ್ಷಣ ಕಾರು ನಿಲ್ಲಿಸಿ ಕೆಳಗಿಳಿದಿದ್ದಾರೆ. ಆದರೆ ಓಮ್ನಿ ಕಾರು ಸಂಪೂರ್ಣ ಸುಟ್ಟು ಹೋಗಿದೆ.

ಅದೃಷ್ಟವಶಾತ್ ಬಾರಿ ದೊಡ್ಡ ಅನಾಹುತ ತಪ್ಪಿದದೆ. ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಬೆಂಕಿ ನಂದಿಸಲು ಯತ್ನಿಸಿದರಾದರೂ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಾಸನ: ಹಾಡುಹಗಲೇ ರಸ್ತೆಗಿಳಿದ ಮದವೇರಿದ ಒಂಟಿಸಲಗ
ಬೇಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿ ಹೋಗಿದೆ. ಇಂದು ಹಾಡುಹಗಲೇ ರಸ್ತೆಗಿಳಿದ ಮದವೇರಿದ ಒಂಟಿಸಲಗ, ರಸ್ತೆಯಲ್ಲಿ ಕೆಲಕಾಲ ನಡೆದು ಆತಂಕ ಸೃಷ್ಟಿಸಿದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ, ದರ್ಬಾರ್ ಪೇಟೆಯಲ್ಲಿ ನಡೆದಿದೆ.

ರಸ್ತೆಯಲ್ಲಿ ಕಾಡಾನೆ ಕಂಡ ವಾಹನ ಸವಾರರು ವಾಹನಗಳನ್ನು ನಿಲ್ಲಿಸಿಕೊಂಡು ವಿಡಿಯೋ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ರಸ್ತೆಯಲ್ಲಿ ನಡೆದು ಸಾಗಿ ಕಾಫಿ ತೋಟದೊಳಗೆ ಹೋದ ಕಾಡಾನೆಯನ್ನು ಕಂಡು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆಲಸ ನಿಲ್ಲಿಸಿ ಹೊರಗೆ ಬಂದಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಒಂಟಿಸಲಗಕ್ಕೆ ಸ್ಥಳೀಯರು ಆತಂಕಗೊಂಡಿದ್ದಾರೆ. ಶಾಶ್ವತ ಪರಿಹಾರ ಕಂಡು ಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ರೈತರು ಹಾಗೂ ಕಾಫಿ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications