ಶಿಷ್ಟಾಚಾರ ಉಲ್ಲಂಘನೆ, ಡಿಸಿ ರೋಹಿಣಿ ವಿರುದ್ಧ ದೂರು
ಹಾಸನ, ಅಕ್ಟೋಬರ್ 10: ಸರ್ಕಾರಿ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪ ಹೊರೆಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ದೂರು ದಾಖಲಾಗಿದೆ. ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿಯವರು ಅವರು ಮಂಗಳವಾರದಂದು ದೂರು ದಾಖಲಿಸಿದ್ದಾರೆ.
ಗೋಪಾಲಸ್ವಾಮಿ ಅವರು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರಿಗೆ ಲಿಖಿತ ದೂರು ಸಲ್ಲಿಸಿ, ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 27 ರಂದು ಡಿಸಿ ಕಚೇರಿಯಲ್ಲಿ ಹಾಸನಾಂಬೆ ಜಾತ್ರೆಯ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಆದರೆ, ಸಭೆಗೆ ಗೋಪಾಲ ಸ್ವಾಮಿ ಅವರಿಗೆ ಆಹ್ವಾನ ನೀಡಿರಲಿಲ್ಲ. ಸ್ಥಳೀಯ ಶಾಸಕರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ದೂರು ಸಲ್ಲಿಸಿದ್ದೇನೆ ಎಂದು ಗೋಪಾಲಸ್ವಾಮಿ ಅವರು ತಿಳಿಸಿದರು.
ಈ ಹಿಂದೆ ಕೂಡಾ ಹಾಸನಾಂಬೆ ದೇಗುಲದ ಸಿದ್ಧತಾ ಕಾರ್ಯ, ಕಾಮಗಾರಿ ಪ್ರಗತಿ ಸಭೆಯಲ್ಲೂ ಇಂಥದ್ದೇ ದೂರುಗಳನ್ನು ಸ್ಥಳೀಯ ಶಾಸಕರು ಮಾಡುತ್ತಾ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಕ್ಟೋಬರ್ 12ರಿಂದ 21ರ ತನಕ ಈ ಬಾರಿ ಹಾಸನಾಂಬೆ ದೇವಾಲಯ ಬಾಗಿಲು ತೆರೆಯಲಿದೆ. 9 ದಿನಗಳ ಕಾಲ ಇಪ್ಪನಾಲ್ಕು ಗಂಟೆಯೂ ದೇವಿಯ ದರ್ಶನ ಪಡೆಯಬಹುದಾಗಿದೆ.ಅಶ್ವಯುಜ ಮಾಸ ಪೂರ್ಣಿಮೆ ನಂತರ ಗುರುವಾರ ಬಾಗಿಲು ತೆರೆದು, ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚಲಾಗುತ್ತದೆ. 2016ರಲ್ಲಿ 13 ದಿನಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಸಿಕ್ಕಿತ್ತು. ಈ ಬಾರಿ 9 ದಿನಗಳ ಕಾಲ ದರ್ಶನಕ್ಕೆ ಅವಕಾಶ ಸಿಗಲಿದೆ. ಕೊನೆಯ ದಿನ ಮಧ್ಯಾಹ್ನ 12 ಗಂಟೆಯ ತನಕ ಮಾತ್ರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.












Click it and Unblock the Notifications