ರೇವಣ್ಣ ವಿರುದ್ಧ ಸಿದ್ದರಾಮಯ್ಯಗೆ ಕಾಂಗ್ರೆಸ್ ಮುಖಂಡರ ದೂರು
Recommended Video

ಬೆಂಗಳೂರು, ನವೆಂಬರ್ 29: ಮೈತ್ರಿ ಸರ್ಕಾರಕ್ಕೆ ಹಾಸನ ರಾಜಕೀಯ ಮಗ್ಗುಲ ಮುಳ್ಳಾಗಿದೆ. ಬೇರೆಲ್ಲಡೆ ಅನ್ಯೋನ್ಯತೆ ಪ್ರದರ್ಶಿಸುತ್ತಿರುವ ಜೆಡಿಎಸ್-ಕಾಂಗ್ರೆಸ್ ಪಕ್ಷ ಹಾಸನದಲ್ಲಿ ಮಾತ್ರ ಇನ್ನೂ ಹಾವು-ಮುಂಗುಸಿಯಾಗಯೇ ಮುಂದುವರೆದಿದೆ.
ಇಂದು ಮಾಜಿ ಸಿಎಂ ಮತ್ತು ಮೈತ್ರಿ ಸರ್ಕಾರದ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸಚಿವ ರೇವಣ್ಣ ವಿರುದ್ಧ ದೂರುಗಳ ಸುರಿಮಳೆ ಸುರಿಸಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ರೇವಣ್ಣ ಅವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರ ಒಂದೂ ಕೆಲಸಗಳು ಆಗದಂತೆ ಮಾಡಿದ್ದಾರೆ. ಪ್ರತಿಯೊಂದಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.
ಹಾಸನ ಕಾಂಗ್ರೆಸ್ ಮುಖಂಡರ ದೂರುಗಳನ್ನು ಆಲಿಸಿದ ಸಿದ್ದರಾಮಯ್ಯ ಅವರು ಮುಖಂಡರಿಗೆ ಸಮಾಧಾನ ಹೇಳಿದ್ದಾರೆ. ಈ ಬಗ್ಗೆ ಸ್ವತಃ ರೇವಣ್ಣ ಅವರ ಬಳಿ ಚರ್ಚೆ ಮಾಡುವುದಾಗಿ ಹಾಗೂ ಸಮನ್ವಯ ಸಮಿತಿ ಸಭೆಯಲ್ಲಿಯೂ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

ಎ.ಮಂಜು ಸಹ ದೂರು ನೀಡಿದ್ದರು
ಈ ಮುಂಚೆ ಮಾಜಿ ಸಚಿವ ಎ.ಮಂಜು ಸಹ ರೇವಣ್ಣ ಅವರ ಮೇಲೆ ಬಹಿರಂಗವಾಗಿ ಹರಿಹಾಯ್ದಿದ್ದರು ಅಷ್ಟೆ ಅಲ್ಲದೆ ರೇವಣ್ಣ ಕುಟುಂಬದವರ ಮೇಲೆ ಅಕ್ರಮ ಭೂ ಕಬಳಿಕೆ ಆರೋಪವನ್ನೂ ಮಾಡಿದ್ದರು. ಅವರೂ ಸಹ ಈ ಮುಂಚೆಯೇ ಸಿದ್ದರಾಮಯ್ಯ ಬಳಿ ರೇವಣ್ಣ ಬಳಿ ದೂರು ನೀಡಿದ್ದರು.

ಪರಸ್ಪರ ಎದುರಾಳಿ ಆಗಿದ್ದ ಪಕ್ಷಗಳು
ಹಾಸನದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವೆ ನೇರ ಸ್ಪರ್ಧೆ ಇದೆ. ಇಷ್ಟು ವರ್ಷ ಪರಸ್ಪರ ಎದುರಾಳಿಗಳಾಗಿ ಹೋರಾಡಿದ ಎರಡೂ ಪಕ್ಷಗಳು ಈಗ ಏಕಾ-ಏಕಿ ಸ್ನೇಹಿತರಂತೆ ಬಾಳುವುದು ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಹಾಸನದಿಂದ ಆಗಾಗ್ಗೆ ದೂರುಗಳು ಕೇಳಿ ಬರುತ್ತಲೇ ಇವೆ.

ಕೈ ಕಾರ್ಯಕರ್ತರ ಮೇಲೆ ದಬ್ಬಾಳಿಕೆ
ಇಂದು ಸಿದ್ದರಾಮಯ್ಯ ಅವರ ಭೇಟಿ ಮಾಡಿದ್ದ ಮುಖಂಡರು ಸಹ ರೇವಣ್ಣ ಅವರ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಪುಟ್ಟೇಗೌಡ ಅವರು, ಜೆಡಿಎಸ್ ನ ಕುಮಾರಸ್ವಾಮಿ ಸಿಎಂ ಆಗಲು ಕಾರಣ ಕಾಂಗ್ರೆಸ್ ಆದರೆ, ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆಯೇ ದಬ್ಬಾಳಿಕೆ ನಡೆಯುತ್ತಿದೆ, ಹಾಸನದಲ್ಲಿ ಗೌಡರ ಕುಟುಂಬ ಆಡಿದ್ದೇ ಆಟವಾಗಿಬಿಟ್ಟಿದೆ ಎಂದಿದ್ದಾರೆ.

ಭವಾನಿ ರೇವಣ್ಣ ಅವರೊಂದಿಗೂ ವಾಗ್ವಾದ
ಎ.ಮಂಜು ಪುತ್ರ ಮಂತರ್ ಗೌಡ ವಿರುದ್ಧ ಕೆಲವು ತಿಂಗಳುಗಳ ಹಿಂದೆ ಅಷ್ಟೆ ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ವಾಗ್ದಾಳಿ ನಡೆಸಿದ್ದರು. ಜಿಲ್ಲಾಪಂಚಾಯಿತಿ ಸಭೆಯಲ್ಲಿ ಪರಸ್ಪರ ಜಟಾಪಟಿ ಮಾಡಿದ್ದರು.












Click it and Unblock the Notifications