ಬಾಗಿಲು ತೆರೆದ ಹಾಸನಾಂಬೆ ದೇವಾಲಯ; ದರ್ಶನಕ್ಕೆ ನಿಯಮಗಳು
ಹಾಸನ, ಅಕ್ಟೋಬರ್ 28; ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನ ನಗರದ ಅಧಿದೇವತೆ ಹಾಸನಾಂಬ ದೇವಾಲಯದ ಬಾಗಿಲನ್ನು ಗುರುವಾರ ತೆರೆಯಲಾಗಿದೆ. ಧಾರ್ಮಿಕ ಪೂಜಾ ವಿಧಿ-ವಿಧಾನಗಳ ಬಳಿಕ ಮಧ್ಯಾಹ್ನ 12.15ಕ್ಕೆ ದೇವಿಯ ದರ್ಶನ ಪ್ರಾರಂಭವಾಯಿತು.
Recommended Video
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ, ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಮಿ, ಜಿಲ್ಲಾಧಿಕಾರಿ ಆರ್. ಗಿರೀಶ್ ಸೇರಿದಂತೆ ಹಲವಾರು ಗಣ್ಯರು ದೇವಿಯ ದರ್ಶನ ಪಡೆದರು.
ಗುರುವಾರ ಹಾಸನಾಂಬ ದೇವಾಲಯ ಓಪನ್; ದರ್ಶನದ ಸಮಯ ತಿಳಿಯಿರಿ
ಹಾಸನಾಂಬ ದೇವರ ದರ್ಶನಕ್ಕೆ ರಾಜ ವಂಶಸ್ಥ ನಂಜರಾಜ ಅರಸ್ ಬಾಳೆಕಂದು ಕಡಿಯುವ ವಿಧಿವಿಧಾನ ನೆರವೇರಿಸಿದರು. ದೇವಿ ದರ್ಶನದ ನಂತರ ಸಿದ್ದೇಶ್ವರ ಸ್ವಾಮಿಗೆ ಸ್ವಾಮಿಗಳು, ಸಚಿವರು ಮತ್ತು ಅಧಿಕಾರಿಗಳು ಪೂಜೆ ಸಲ್ಲಿಸಿದರು. ಭಕ್ತರು ಅಕ್ಟೋಬರ್ 29 ರಿಂದ ನವೆಂಬರ 5ರ ತನಕ ಪ್ರತಿದಿನ ದೇವಿಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.
ಇಂದಿನಿಂದ (ಅ.28) ಹತ್ತು ದಿನಗಳ ಕಾಲ ಹಾಸನಾಂಬ ದೇವಾಲಯ ಬಾಗಿಲು ಓಪನ್
ಬಳಿಕ ಮಾತನಾಡಿದ ಸಚಿವ ಕೆ. ಗೋಪಾಲಯ್ಯ, "ಇಂದು ಶುಭ ಮುಹೂರ್ತದಲ್ಲಿ ಹಾಸನಾಂಬ ಜಾತ್ರೆಗೆ ಚಾಲನೆ ನೀಡಲಾಗಿದೆ, ವರ್ಷಕೊಮ್ಮೆ ಬಾಗಿಲು ತೆಗೆಯುವುದು ಈ ದೇವಸ್ಥಾನದ ವಿಶೇಷ, ವರ್ಷದವರೆಗೂ ಉರಿಯುವ ಜ್ಯೋತಿ ದೇವಿಯ ಪವಾಡ. ಈ ಬಾರಿಯ ದೇವಸ್ಥಾನದ ಬಾಗಿಲು ತೆರೆದಾಗ ದೀಪ ಉರಿಯುತ್ತಿತ್ತು ಇದನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂತೋಷದ ವಿಚಾರ" ಎಂದರು.
ಹಾಸನ: ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕೆಂದು ವಿಡಿಯೋ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ
ಭಕ್ತರಿಗೆ ಅವಕಾಶ ನೀಡಲಾಗಿದೆ
ಕೋವಿಡ್ ಕಾರಣದಿಂದಾಗಿ ಕಳೆದ ಬಾರಿ ದೇವಿಯ ದರ್ಶನಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿತ್ತು. ಈ ಬಾರಿ ಕೋವಿಡ್ ಲಸಿಕೆ ಪಡೆದ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತ ಭಕ್ತರ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ, ದರ್ಶನಕ್ಕಾಗಿ ಕಾದು ನಿಲ್ಲುವ ಭಕ್ತಾದಿಗಳಿಗೆ ಟಾರ್ಪಲ್ ಕಮಾನುಗಳನ್ನು ನಿರ್ಮಿಸಿ ನೆರಳಿನ ಅನುಕೂಲ ಕಲ್ಪಿಸಲಾಗಿದೆ. ಭಕ್ತಾದಿಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಲಾಗಿದೆ.
ಕೋವಿಡ್ ಲಸಿಕೆ ಪಡೆದಿರಬೇಕು
ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, "ಸಾರ್ವಜನಿಕರಿಗೆ ಅಕ್ಟೋಬರ್ 29 ರಿಂದ ನವೆಂಬರ 5ರ ತನಕ ಪ್ರತಿ ದಿನ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ ತನಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 1 ರಿಂದ 3 ಗಂಟೆ ತನಕ ನೈವೇದ್ಯ ಸಮರ್ಪಣೆ ಸಮಯ ಹೊರತು ಪಡಿಸಿ ಉಳಿದ ಸಮಯದಲ್ಲಿ ದರ್ಶನಕ್ಕೆ ಅವಕಾಶವಿದೆ. ಆದರೆ ಭಕ್ತರು ಕಡ್ಡಾಯವಾಗಿ ಕನಿಷ್ಠ 1 ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಹಾಗೂ ಈ ಬಗ್ಗೆ ಮುದ್ರಿತ ಅಥವಾ ಡಿಜಿಟಲ್ ದಾಖಲೆಯನ್ನು ಪ್ರದರ್ಶಿಸಬೇಕು" ಎಂದು ಹೇಳಿದ್ದಾರೆ.
ನಾಡಿನ ಜನರಿಗೆ ಒಳಿತಾಗಲಿ
ಕಾನೂನು ಸಂದೀಯ ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಮಾತನಾಡಿ, "ಕಳೆದ ವರ್ಷ ಕೊರೊನಾ ಹೆಚ್ಚಿರುವುದರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಈ ಬಾರಿಯ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದರು. ತಾಯಿಯ ಆಶೀರ್ವಾದಿಂದ ನಾಡಿಗೆ ಒಳಿತಾಗಲಿ. ಹಾಸನಾಂಬೆ ತಾಯಿಯ ಆಶೀರ್ವಾದದಿಂದ ಕೋವಿಡ್ ಮೂರನೇ ಅಲೆ ರಾಜ್ಯದಲ್ಲಿ ಪರಿಣಾಮಕಾರಿಯಾಗಲಿಲ್ಲ. ಮಳೆ, ಬೆಳೆ, ಉತ್ತಮವಾಗಿದ್ದು, ತಾಯಿಯ ಆಶೀರ್ವಾದಿಂದ ನಾಡು ಸುಭೀಕ್ಷವಾಗಿರಲಿ" ಎಂದು ಪ್ರಾರ್ಥಿಸಿದರು.
ಮೂರು ರೀತಿ ನೆಲೆಗೊಂಡಿದ್ದಾಳೆ
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, "ಪ್ರತಿ ವರ್ಷದಂತೆ ಈ ಬಾರಿಯೂ ಶುಭ ಮುಹೂರ್ತದಲ್ಲಿ ಹಾಸನಾಂಬೆಯ ದರ್ಶನಕ್ಕಾಗಿ ಮಹಾದ್ವಾರವನ್ನು ತೆರೆಯಲಾಗಿದೆ. ಪುರುಷನ ಪ್ರತಿಬಿಂಬವಾಗಿರುವಂತಹ ಶಕ್ತಿಮಾತೆ ಹಾಸನದ ದೇವಸ್ಥಾನದಲ್ಲಿ ಮೂರು ರೀತಿ ನೆಲೆಗೊಂಡಿದ್ದಾಳೆ. ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಗೆ ಮೂರು ರೂಪ ಇದೆ. ಲಕ್ಷ್ಮಿಯಾಗಿ, ಕಾಳಿಯಾಗಿ, ಸರಸ್ವತಿಯಾಗಿ ನೆಲೆಸಿದ್ದಾಳೆ. ಈ ಪವಿತ್ರ ಸ್ಥಳಕ್ಕೆ ಬರುವವರಿಗೆ ಮೂರೂ ದೇವಿಯರ ದರ್ಶನ ಆಗಲಿದೆ. ಜ್ಞಾನಶಕ್ತಿ, ಪರಾಶಕ್ತಿ, ಇಚ್ಛಾಶಕ್ತಿ, ಸಂಕಷ್ಟ ಪರಿಹರಿಸುವ ಕೆಲಸ ತಾಯಿ ಮಾಡಲಿ. ತಾಯಿ ಕೃಪೆಯಿಂದ ಪೂರ್ಣಪ್ರಮಾಣದಲ್ಲಿ ಈ ರೋಗ ನಾಡಿನಿಂದ ಹೋಗಲಿ, ಜನರ ಬಾಳು ಸಂತೋಷವಾಗಿರಲಿ" ಎಂದರು.