ಹಾಸನಾಂಬ ಜಾತ್ರೆ; ಮೂರು ದಿನದಲ್ಲಿ ಸಂಗ್ರಹವಾದ ಹಣ ಎಷ್ಟು? ಇಲ್ಲಿದೆ ವಿವರ
ಹಾಸನ, ಅಕ್ಟೋಬರ್, 19; ಪ್ರಸಿದ್ಧ ಹಾಸನಾಂಬ ದೇವಿಯ ವಿಶೇಷ ದರ್ಶನದಿಂದ ಕೇವಲ ಮೂರು ದಿನಗಳಲ್ಲಿ 42.78 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಕಾಣಿಕೆ ಹುಂಡಿಗೆ ಭಕ್ತರು ಇನ್ನು ಕಾಣಿಕೆಯನ್ನು ಅರ್ಪಿಸುತ್ತಲೇ ಇದ್ದಾರೆ.
ವರ್ಷಕ್ಕೊಮ್ಮೆ ದರ್ಶನ ಕಲ್ಪಿಸುವ ಹಾಸನಂಬೆಯ ಗರ್ಭದ ಗುಡಿ ಬಾಗಿಲು ಅಕ್ಟೋಬರ್ 13ರಂದು ತೆರೆದಿತ್ತು. ಆದರೆ ಭಕ್ತರಿಗೆ ದೇವಿ ದರ್ಶನ ಮಡಲು ಅಕ್ಟೋಬರ್ 14ರಿಂದ ಅವಕಾಶ ಮಾಡಿಕೊಡಲಾಗಿತ್ತು. ಸರತಿ ಸಾಲಿನಲ್ಲಿ ಹೆಚ್ಚುಕಾಲ ನಿಲ್ಲಲು ಆಗಲ್ಲ ಎನ್ನುವವರಿಗಗಿ ತಲಾ ಒಂದು ಸಾವಿರ ರೂಪಾಯಿ ಶುಲ್ಕ ವಿಧಿಸಿ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕಳೆದ ಮೂರು ದಿನದಲ್ಲಿ ಅಂದರೆ ಅಕ್ಟೋಬರ್ 14ರಂದು 4.99 ಲಕ್ಷ ರೂಪಾಯಿ, ಅಕ್ಟೋಬರ್ 15ರಂದು 3.31 ಲಕ್ಷ ರೂಪಾಯಿ, ಅಕ್ಟೋಬರ್ 16ರಂದು 8.35 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಅದೇ ರೀತಿ ತಲಾ 300 ರೂಪಾಯಿ ವಿಶೇಷ ದರ್ಶನದಿಂದ ಅಕ್ಟೋಬರ್ 14 ರಂದು 4.30 ಲಕ್ಷ ರೂಪಾಯಿ, ಅಕ್ಟೋಬರ್ 15 ರಂದು 4.49 ಲಕ್ಷ ರೂಪಾಯಿ, ಅಕ್ಟೋಬರ್ 16 ರಂದು 1.20 ಲಕ್ಷ ರೂಪಾಯಿ ಸಂಗ್ರಹವಾಗಿದೆ.
ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಓಪನ್
ಗಣ್ಯರು ತಮ್ಮ ಕುಟುಂಬದ ಜೊತೆ ಪ್ರತಿವರ್ಷ ಆಗಮಿಸುತ್ತಿದ್ದು, ಅದೇ ರೀತಿ ಈ ಬಾರಿಯೂ ಬಂದಿದ್ದೇವೆ ಎಂದರು. ಶಾಸಕರು, ಸಚಿವರು, ನ್ಯಾಯಾಧೀಶರು, ವಿಧಾನಸಭೆಯ ಹಿರಿಯ ಅಧಿಕಾರಿಗಳು ಹಾಸನಾಂಬ ದರ್ಶನಕ್ಕೆ ಬಂದಿದ್ದಾರೆ. ಗಣ್ಯರ ಭೇಟಿ ವೇಳೆ ಸಾಮಾನ್ಯ ಭಕ್ತರ ದರ್ಶನಕ್ಕೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದ ಕಾರಣ ಗಲಾಟೆ, ನೂಕು ನುಗ್ಗಲಿಗೆ ಆಸ್ಪದವಿಲ್ಲದಂತಾಗಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ದರೂ ಕೂಡ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಹರಿದುಬಂದಿದ್ದರು. ಭಕ್ತರು ಯಾವುದೇ ಘರ್ಷಣೆ ಇಲ್ಲದೇ ನಾಲ್ಕರಿಂದ ಐದು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಗಣ್ಯರು ತಂಡೋಪ ತಂಡವಾಗಿ ಆಗಮಿಸಿದ್ದನ್ನು ಕಂಡ ಸಾಮಾನ್ಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಗಮನಾರ್ಹವಾಗಿದೆ.

ವಿಶೇಷವಾಗಿ ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ತಾಯಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಅಕ್ಟೋಬರ್ 13ರಂದು ಚಾಲನೆ ದೊರೆತಿತ್ತು. ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12:12ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಬಾಳೆ ಕಂಬ ಕಡಿದ ನಂತರ ಹಲವು ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು.

ಹಚ್ಚಿದ ದೀಪ ಹಾರುವುದಿಲ್ಲವೆಂಬ ನಂಬಿಕೆ
ಗರ್ಭಗುಡಿ ಬಾಗಿಲು ತೆರೆದ ವೇಳೆ ಕಳೆದ ವರ್ಷ ಹಚ್ಚಿದ್ದ ದೀಪ ಉರಿಯುತ್ತಿದ್ದು, ಹೂವು ಬಾಡಿರಲಿಲ್ಲ. ನೈವೇದ್ಯ ಹಳಸಿರಲಿಲ್ಲ. ಈ ವಿಶೇಷ ಸಂದರ್ಭಕ್ಕೆ ಸಚಿವರಾದ ಕೆ.ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವರು ಸಾಕ್ಷಿಯಾದರು. ಮೊದಲ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದರು. ಆದರೂ ಕೂಡ ಭಕ್ತರು ದೇವಾಲಯದ ಬಳಿ ಜಮಾಯಿಸಿದ್ದರು. ಕೆಲವರು ಸರತಿ ಸಾಲಿನಲ್ಲಿ ನಿಂತಿದ್ದರು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ಹಲವು ಪವಾಡ ಸದೃಶ ಸಂಗತಿಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಪ್ರತಿ ವರ್ಷ ಗರ್ಭಗುಡಿ ಬಾಗಿಲು ಹಾಕುವಾಗ ಹಚ್ಚಿದ ಹಣತೆ, ಇಟ್ಟ ನೈವೇದ್ಯ, ಮುಡಿಸಿದ ಹೂ ಬಾಡುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಜೊತೆಗೆ ಬೇಡಿದ ಇಷ್ಟಾರ್ಥಗಳನ್ನು ಅಧಿದೇವತೆ ಈಡೇರಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ದೇವಿ ದರ್ಶನಕ್ಕಾಗಿ ಆಗಮಿಸುತ್ತಾರೆ.












Click it and Unblock the Notifications