ಕಟ್ಟಡ ಬಿದ್ದಮೇಲೆ ಮರುಕ ಬೇಡ: ಈಗಲೇ ಹೊಸ ಶಾಲೆ ಕಟ್ಟಿಸಿ ಎಂದ ವಿದ್ಯಾರ್ಥಿಗಳು
ಹಾಸನ, ಜು.2: ಸರ್ಕಾರಿ ಶಾಲೆಯಲ್ಲಿ ಸರಿಯಾದ ಕಟ್ಟಡವಿಲ್ಲದೆ ಶಾಲೆಯ ಮಕ್ಕಳು ಭಯದಲ್ಲೇ ಪಾಠ ಕೇಳುವ ಪರಿಸ್ಥಿತಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿರ್ಮಾಣವಾಗಿದೆ.
ಸರ್ಕಾರ ಮಕ್ಕಳಿಗೆ ಉಚಿತ ಹಾಗೂ ಉತ್ತಮ ಶಿಕ್ಷಣ ನೀಡೋದಾಗಿ ಭರವಸೆ ನೀಡುತ್ತದೆ. ಆದರೆ, ಅರಸೀಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸುಮಾರು ನೂರು ಮಕ್ಕಳು ಓದುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿ ಸರಿಯಾದ ಕಟ್ಟಡ ಇಲ್ಲದೆ, ಬಿರುಕು ಗೋಡೆಯ ಕೊಠಡಿಯಲ್ಲಿ ಮಕ್ಕಳು ಕುಳಿತು ಪಾಠ ಕೇಳುವಂತಾಗಿದೆ. ಇದರಿಂದ ಮಕ್ಕಳು ಮತ್ತು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಶಾಲಾ ಕಟ್ಟಡ ಸೋರುತ್ತಿರುವುದರಿಂಧ ಮಳೆ ಬಂದರೆ ನಾವು ನೆನೆಯುತ್ತೇವೆ. ಪುಸ್ತಕಗಳೂ ಹಾಳಾಗುತ್ತಿವೆ. ನಮಗೆ ಸರಿಯಾದ ಶಾಲಾ ಕೊಠಡಿ ಕಟ್ಟಿಸಿಕೊಡಿ, ನಾವು ಚೆನ್ನಾಗಿ ಓದಬೇಕು, ಇಲ್ಲಿ ಮಳೆ ಬಂದರೆ ಭಯ ಆಗುತ್ತೆ, ಗೋಡೆ ಬಿರುಕು ಬಿಟ್ಟಿದೆ, ಪಾಠ ಕೇಳುವಾಗ ಗೋಡೆ ಕಡೆ ನೋಡಿದ್ದರೆ ಭಯ ಆಗುತ್ತೆ, ಹಾಗಾಗಿ ಇದು ಬೀಳುವವರೆಗೆ ಕಾಯದೆ ಈಗಲೇ ಹೊಸದಾದ ಕಟ್ಟಡವೊಂದು ಕಟ್ಟಿಸಿಕೊಡಿ ಎಂದು ಶಾಲಾ ಮಕ್ಕಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರತಿನಿತ್ಯ ಮಕ್ಕಳ ಸಂಕಟ
ಇತ್ತೀಚೆಗೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಿವೆ. ಆದರೆ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಸುಮಾರು ನೂರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರೂ ಕೂಡ ಸರಿಯಾದ ಕಟ್ಟಡ, ಶೌಚಾಲಯ ಇಲ್ಲದೆ, ಪ್ರತಿನಿತ್ಯ ಮಕ್ಕಳು ಸಂಕಟ ಪಡುವಂತಾಗಿದೆ. ಮಕ್ಕಳು ಕುಳಿತು ಪಾಠ ಕೇಳುವ ತರಗತಿಯ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತದಲ್ಲಿವೆ. ವಿಧಿಯಿಲ್ಲದೆ ಜೀವ ಕೈಲಿಡಿದು, ಮಕ್ಕಳು ಅದೇ ತರಗತಿಯೊಳಗೆ ಕುಳಿತು ಪಾಠ ಕೇಳುವಂತಾಗಿದೆ.

ಗ್ರಾಮಸ್ಥರು ಹಲವು ಅಧಿಕಾರಿಗಳ ಮೊರೆ
ಸುಸಜ್ಜಿತ ಕಟ್ಟಡ ಹಾಗೂ ಶೌಚಾಲಯಕ್ಕಾಗಿ ಈಗಾಗಲೇ ಗ್ರಾಮಸ್ಥರು ಹಲವು ಅಧಿಕಾರಿಗಳ ಮೊರೆ ಹೋಗಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ ಕುಸಿದು ಏನಾದರೂ ಅವಾಂತರ ಆಗುವ ಮೊದಲು, ಸರ್ಕಾರ ಈ ಶಾಲೆಗೆ ಒಳ್ಳೆಯ ಕಟ್ಟಡ ಕಟ್ಟಿಕೊಡಲು ತಕ್ಷಣವೇ ಮುಂದಾಗಬೇಕಿದೆ.

ಶೌಚಾಲಯ ವ್ಯವಸ್ಥೆಗೆ ಮೀನಾಮೇಷ
ಸುಮಾರು ನೂರು ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಸರಿಯಾದ ಶೌಚಾಲಯವೇ ಇಲ್ಲ. ಹೀಗಾಗಿ ಮಕ್ಕಳು ಬಯಲು ಶೌಚಾಲಯವನ್ನೇ ಆಶ್ರಯಿಸುವಂತಾಗಿದೆ. ಬಯಲುಮುಕ್ತ ಶೌಚಾಲಯದ ಬಗ್ಗೆ ಮಾತನಾಡುವ ಸರ್ಕಾರ ವಿದ್ಯಾರ್ಥಿಗಳಿಗೆ ಕನಿಷ್ಟ ಶೌಚಾಲಯ ವ್ಯವಸ್ಥೆ ಮಾಡಲು ಕೂಡ ಮೀನಾಮೇಷ ಎಣಿಸುತ್ತಿದೆ. ತಮ್ಮ ಮಕ್ಕಳು ಜೀವ ಭಯದಲ್ಲಿ ಇಂತಹ ಶಾಲೆಯಲ್ಲಿ ಓದುವ ಬದಲು, ನಾವು ಸಾಲ ಮಾಡಿಯಾದರೂ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತೇವೆ ಎಂದು ಕೆಲವು ಪೋಷಕರು ಟಿಸಿ ಪಡೆದು ಹೋಗುತ್ತಿದ್ದಾರೆ

ಸರ್ಕಾರ ವಿರುದ್ಧ ಗ್ರಾಮಸ್ಥರ ಆಕ್ರೋಶ
ಈ ಬಗ್ಗೆ ಸ್ಥಳೀಯ ಮಂಜೇಗೌಡ ಎಂಬುವರು ಮಾತನಾಡಿ, "ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಸುಮಾರು ನೂರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಕಾಮಸಮುದ್ರ ಗ್ರಾಮದ ಶಾಲೆಯಲ್ಲಿ ತುಂಬಾ ಮಕ್ಕಳು ಓದುತ್ತಿದ್ದಾರೆ, ಆದರೆ ಸರಿಯಾದ ವ್ಯವಸ್ಥೆ ಇಲ್ಲ, ಕೊಠಡಿ ವ್ಯವಸ್ಥೆ ಸರಿ ಇಲ್ಲ, ಶೌಚಾಲಯ ಇಲ್ಲ, ಮಕ್ಕಳಿಗೆ ಎಲ್ಲಾ ತೊಂದರೆ ಉಂಟಾಗಿದೆ, ಈ ಹಿಂದೆ ಒಂದು ವಿಡಿಯೋ ಮಾಡಿ ಸರ್ಕಾರ ಕ್ಕೆಮನವಿ ಮಾಡಿದ್ದೆ ಈ ಸಲ ಮನವಿ ಮಾಡ್ತೀನಿ ನಮಗೊಂದು ಸುಂದರವಾದ ಶಾಲೆ ಕಟ್ಟಿಸಿಕೊಡಿ," ಎಂದು ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.












Click it and Unblock the Notifications