ಹಾಸನ: ಮಲೆನಾಡು ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ; ಬಳಲಿ ಬೆಂಡಾದ ರೈತರು
ಹಾಸನ, ನವೆಂಬರ್ 22: ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ಗೋಳು ಹೇಳತೀರದಂತಾಗಿದ್ದು, ದಿನನಿತ್ಯ ಜೀವವನ್ನು ಕೈಯಲ್ಲಿ ಹಿಡಿದು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ಹಾವಳಿಯಿಂದ ಮಲೆನಾಡಿನ ಜನರು ಬಳಲಿ ಬೆಂಡಾಗಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲೂಕಿನಲ್ಲಿ ಕಾಡಾನೆಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ. ದಶಕಗಳಿಂದ ಕಾಡಾನೆ ಸಮಸ್ಯೆ ಎದುರಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ರೈತರು ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡನ್ನು ಸ್ಥಳಾಂತರಿಸುವಂತೆ ಎಷ್ಟು ಪ್ರತಿಭಟನೆ ನಡೆಸಿದರೂ ಫಲಕಾರಿಯಾಗಿಲ್ಲ.
ಇತ್ತ ಕಾಡಾನೆಗಳಿಂದ ಭಯದಲ್ಲೇ ಮಲೆನಾಡಿನ ಜನರು ಬದುಕುತ್ತಿದ್ದಾರೆ. ಸಂಬಂಧ ಪಟ್ಟ ಸಚಿವರುಗಳು ಇತ್ತ ಗಮನವನ್ನೂ ಹರಿಸುತ್ತಿಲ್ಲ. ಪದೇಪದೇ ಸಚಿವರುಗಳ ಬದಲಾವಣೆಯಿಂದ ಈ ಭಾಗದ ಜನರ ಕಷ್ಟ ಕೂಡ ಅವರಿಗೆ ಅರ್ಥವಾಗುತ್ತಿಲ್ಲ. ನಾವು ಎಲ್ಲಾ ಹೋರಾಟವನ್ನೂ ಮಾಡಿದ್ದೇವೆ, ನಮ್ಮ ಬದುಕು ದುಸ್ತರವಾಗಿದೆ. ಮಕ್ಕಳನ್ನು ಶಾಲೆ- ಕಾಲೇಜಿಗೂ ಕಳಿಸಲೂ ಆಗುತ್ತಿಲ್ಲ. ಇನ್ನು ನಮಗೆ ಉಳಿದಿರುವುದು ವಿಧಾನ ಸೌಧ ಮುತ್ತಿಗೆ ದಾರಿ ಮಾತ್ರ. ಅದನ್ನೂ ಮಾಡುತ್ತೇವೆ ಎಂದು ಈ ಭಾಗದ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇನ್ನು ಪ್ರತಿನಿತ್ಯ ಒಂದೊಂದು ಭಾಗದಲ್ಲಿ ಮೂವತ್ತರಿಂದ ನಲವತ್ತು ಆನೆಗಳು ಗುಂಪಾಗಿ ದಾಳಿ ಮಾಡುತ್ತಿವೆ. ಕಾಫಿ ಗಿಡಗಳು ಮತ್ತು ತೋಟದಲ್ಲಿ ನೀರಾವರಿಗಾಗಿ ಹಾಕಿದ್ದ ಪಂಪ್ಸೆಟ್, ಪೈಪ್ಲೈನ್ ಸೇರಿದಂತೆ ಲಕ್ಷಾಂತರ ರೂ. ಸಾಮಗ್ರಿಗಳನ್ನು ಧ್ವಂಸ ಮಾಡುತ್ತಿವೆ. ಭತ್ತದ ಬೆಳೆ ಕೂಡ ಸಂಪೂರ್ಣ ನಾಶವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರೆ ಅವು ಏನು ಮಾಡುವುದಿಲ್ಲ, ದೂರ ಇವೆ ನಿಮ್ಮ ಕೆಲಸ ನೀವು ನಾಡಿಕೊಳ್ಳಿ ಎಂದು ಸುಳ್ಳು ಹೇಳುತ್ತಿದ್ದಾರೆ.
ಇವೆಲ್ಲಾ ಘಟನೆಯಿಂದ ಕಾರ್ಮಿಕರೂ ಕೂಡ ಹೆದರಿದ್ದು, ಕೆಲಸಕ್ಕೆ ಬಾರದಂತಾಗಿದ್ದಾರೆ. ನಿರಂತರ ಸಮಸ್ಯೆಯಿಂದ ಜನರು ನೊಂದು ಹೋಗಿದ್ದು, ಕೂಡಲೇ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ರೈತರೊಬ್ಬರು ಆಗ್ರಹಿಸುತ್ತಿದ್ದಾರೆ.
ಕಾಫಿ ಬೆಳೆಗಾರ ಪಾಲೇಶ್ ಮಾತಾನಾಡಿ ಸತತ ನಾಲ್ಕು ವರ್ಷದಿಂದ ಕಾಡಾನೆಗಳು ನಿರಂತರ ಬೆಳೆ ದಾಳಿ ಮಾಡುತ್ತಿವೆ. ಕಾಡಾನೆಗಳು ಎಲ್ಲಿವೆ, ಯಾವಾಗ ದಾಳಿ ಮಾಡುತ್ತವೆ ಎಂಬ ಭಯದಿಂದಲೇ ಬದುಕುತ್ತಿದ್ದೇವೆ. ನಮ್ಮ ಕಷ್ಟ ಯಾರಿಗೆ ಹೇಳಲಿ ಮುಖ್ಯಮಂತ್ರಿಗಳೇ, ಅರಣ್ಯ ಸಚಿವರೇ ಇಲ್ಲಿಗೆ ಬಂದು ನೋಡಿ ನಮ್ಮ ಕಷ್ಟ ಗೊತ್ತಾಗುತ್ತದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಲಿ ಕಾರ್ಮಿಕರೇ ಕಾಫಿ ತೋಟದ ಕೆಲಸಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಎಲ್ಲಿ ಆನೆ ಬಂದು ನಮ್ಮ ತುಳಿದು ಹಾಕುತ್ತದೆ ಅಂಥಾ ಭಯದಲ್ಲೇ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದೇವೆ, ದಯವಿಟ್ಟು ನಮ್ಮ ಸಮಸ್ಯೆಗೆ ಸ್ಪಂದಿಸಿ ಕಾಡಾನೆಗಳನ್ನು ಸ್ಥಳಾಂತರ ಮಾಡಿ. ಆಗ ನೆಮ್ಮದಿಯಿಂದ ಬದುಕುತ್ತೇವೆ, ಇಲ್ಲದಿದ್ದರೆ ನಮ್ಮ ಬದುಕು ದುಸ್ತರವಾಗುತ್ತದೆ ಎಂದು ಕಾಫಿ ಬೆಳೆಗಾರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಶ್ರೀಮಂತರ ಬೆಳೆ ಎನಿಸಿಕೊಂಡಿರುವ ಕಾಫಿ ಬೆಳೆಯನ್ನು ನೂರಾರು ವರ್ಷಗಳಿಂದ ಬೆಳೆಯುತ್ತಿರುವ ರೈತರು ಹೈರಾಣಾಗಿದ್ದು, ನಮಗೆ ಕಾಫಿ ತೋಟದ ಸಹವಾಸವೇ ಬೇಡ. ಜೀವ ಇದ್ದರೆ ಹೇಗಾದರೂ ಬದುಕುತ್ತೇವೆ ಎಂದು ಸರ್ಕಾರಗಳ ನಿರ್ಲಕ್ಷ್ಯದ ವಿರುದ್ಧ ಹಿಡಿಶಾಪ ಹಾಕುತ್ತಾ ಮಲೆನಾಡಿನ ಜನರು ಬದುಕುತ್ತಿದ್ದಾರೆ.
Recommended Video