ಕೆಪಿಎಂಇ ಕಾಯ್ದೆ ಬಗ್ಗೆ ದೇವೇಗೌಡ ಹೇಳಿದ್ದು ಹೀಗೆ
ಹಾಸನ, ನವೆಂಬರ್ 15 : ರಾಜ್ಯದ ರಾಜಕೀಯ ಧುರಿಣ ಎಚ್.ಡಿ.ದೇವೇಗೌಡ ಅವರು ವಿವಾದಿತ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು ಮಸೂದೆ ತಿದ್ದುಪಡಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಎದುರಾದ ಮಾಧ್ಯಮರೊಂದಿಗೆ ಮಾತನಾಡಿದ ಅವರು, ಚುನಾವಣೆ ಹೊಸ್ತಿಲಲ್ಲಿ ಇರುವಾಗ ಕಾಯ್ದೆ ಮಂಡಿಸಲು ಹೊರಟಿರುವ ಕಾಂಗ್ರೆಸ್ ನ ನಡೆಯನ್ನು ಬುದ್ಧಿಹೀನ ನಡೆ ಎಂದು ಕರೆದಿದ್ದಾರೆ. "ಚುನಾವಣೆ ಹೊಸ್ತಿಲಲ್ಲಿ ಇದೆಲ್ಲಾ ಬೇಕಿತ್ತಾ?' ಎಂದು ಅವರು ತಮ್ಮ ಎಂದಿನ ಶೈಲಿಯಲ್ಲಿ ಕಾಂಗ್ರೆಸ್ ನಿರ್ಣವನ್ನು ಟೀಕಿಸಿದ್ದಾರೆ.

ಕಾಯ್ದೆಯಲ್ಲಿನ ವಿಷಯಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ದೇವೇಗೌಡ ಅವರು 'ತಪ್ಪು ಮಾಡಿದವರು ಲಾಯರ್ ಸಹಿತ ಇಟ್ಟುಕೊಳ್ಳುವ ಹಾಗಿಲ್ಲ ಎಂದರೆ ಹೇಗೆ?' ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಎಲ್ಲವನ್ನೂ ಸಮತೋಲನ ಮಾಡಿಕೊಂಡು ಆಡಳಿತ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ಮೌಡ್ಯ ನಿಷೇಧ ಕಾಯ್ದೆಯ ಬಗ್ಗೆ ಅಸಮಧಾನ ಹೊರಹಾಕಿರುವ ದೇವೇಗೌಡ " ಮೌಢ್ಯ ನಿಷೇಧ ಕಾಯ್ದೆ ಮಂಡಿಸಿದ್ದು ದೊಡ್ಡ ಸಾಧನೇನಾ, ಇದರಿಂದ ಮತ್ತೊಂದು ರೀತಿಯ ದೌರ್ಜನ್ಯ ಪ್ರರಂಭವಾಗುತ್ತದೆ' ಎಂದಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಬಗ್ಗೆಯೂ ಮಾತನಾಡಿದ ಅವರು ಗುಜರಾತ್ ಚುನಾವಣೆ ನಂತರ ರಾಜ್ಯ-ದೇಶದಲ್ಲಿ ರಾಜಕೀಯ ಮಾರ್ಪಾಡಾಗಲಿದೆ ಎಂದರು. ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಹಿನ್ನಡೆಯಾಗುವುದೋ ಆ ಪಕ್ಷದವರು ಬೇರೆ ಪಕ್ಷಕ್ಕೆ ಹೋಗುವುದನ್ನು ನೋಡುತ್ತೀರಿ, ರಾಜ್ಯದಲ್ಲಿ ಮುಂದಿನ 2 ತಿಂಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.












Click it and Unblock the Notifications