ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಮತ್ತೊಬ್ಬ ಕಾಂಗ್ರೆಸ್ ಶಾಸಕ
ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಗೆದ್ದಿರುವ ಶಾಸಕ ನಾನೊಬ್ಬನೇ, ಜನರ ಆಶೀರ್ವಾದ ನನ್ನ ಮೇಲೆ ಇದ್ದಿದ್ದರಿಂದ ನಾನು ಗೆದ್ದಿದ್ದೇನೆ. ನನಗೆ ಮಂತ್ರಿ ಕೊಡಿಸಿದರೆ, ಗೂಟದ ಕಾರಿನಲ್ಲಿ ಬರುತ್ತೇನೆ. ಆ ಮೇಲೆ ಹಾಸನ ಜಿಲ್ಲೆಯ ರಾಜಕಾರಣ ನೋಡಿ ಎಂದು ಶಾಸಕ ಶಿವಲಿಂಗೇಗೌಡ ಬಹಿರಂಗವಾಗಿಯೇ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.
ಇಂದು ಹಾಸನದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವ್ಯಂಗ್ಯ ಮಾಡಿದ್ದಾರೆ. ನನ್ನನ್ನು ಚುನಾವಣೆಯಲ್ಲಿ ಸೋಲಿಸುವ ಉದ್ದೇಶದಿಂದ ದೇವೇಗೌಡರು ವೀಲ್ಚೇರ್ನಲ್ಲೇ ಬಂದು ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡಿದರು. ಅಂತಹ ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧವೇ ಗೆಂದು ಬಂದೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.

ಅಂದು ಯಾರು ಏನೇ ಮಾಡಿದರೂ ಜನ ನನ್ನನ್ನು ಸೋಲಿಸಿದ್ರಾ? ಎಂದು ಪ್ರಶ್ನಿಸಿದ್ದಾರೆ. ನನ್ನ ಅಭಿವೃದ್ಧಿ ಕೆಲಸಗಳು, ನಾನು ಮಾಡಿದ ಹೋರಾಟ ಜನರಿಗೆ ಚೆನ್ನಾಗಿ ತಿಳಿದಿತ್ತು. ಅದರಿಂದಲೇ ನಾನು ಗೆಲುವು ಸಾಧಿಸಿದೆ. ಹಾಸನದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿ ಸಭೆ ಇಂದು ನಡೆಯಿತು. ಇಂತಾ ಸಾವಿರಾರು ಸಮಾವೇಶಗಳನ್ನು ಮುಂದೆ ಮಾಡಬೇಕಾಗಿದೆ. ನಮ್ಮ ಹಾಸನಕ್ಕೆ ಏನು ಬೇಕಾದರೂ ತರೋಣ ಎಂದು ಹೇಳಿದ್ದಾರೆ.
ಸಂಸದ ಶ್ರೇಯಸ್ ಪಟೇಲ್ ಕೇಂದ್ರದಲ್ಲಿ ಹಾಸನಕ್ಕೆ ನಾಯಕತ್ವ ಬೇಕು ಎಂದು ಕೇಳುವ ಅಗತ್ಯವಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಹೀಗಿರುವಾಗ ನಾವೇಕೆ ಹೆದರಬೇಕು? ಎಂದು ಶಿವಲಿಂಗೇಗೌಡ ಹೇಳಿದ್ದಾರೆ. ನಾನು ಒಂದೂರಿನಲ್ಲಿ ದನ ಕಾಯುತ್ತಿದ್ದವನು. ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನ ಸ್ವಂತ ಶಕ್ತಿಯಿಂದ ನಾನು ಬೆಳೆದಿದ್ದು, ಯಾರ ಆಶೀರ್ವಾದವೂ ನನಗಿಲ್ಲ. ನಾನು ಯಾರಿಗೂ ಕೇರ್ ಮಾಡುವ ವ್ಯಕ್ತಿಯೂ ಅಲ್ಲ ಎಂದು ಶಿವಲಿಂಗೇಗೌಡ ಖಡಕ್ ಆಗಿ ಹೇಳಿದ್ದಾರೆ.

ನನಗೆ ತಮಟೆ ಹೊಡೆಯುವುದೂ ಗೊತ್ತು. ಹಾಸನ ಜಿಲ್ಲೆಯಲ್ಲಿ ತಮಟೆ ಬಾರಿಸೋದೂ ಗೊತ್ತು. ಹೀಗಾಗಿ ನನಗೆ ಚೆನ್ನಾಗಿ ತಮಟೆ ಬಾರಿಸೋದು ಗೊತ್ತಿದೆ, ಹಾಗಾಗಿ ಅವನಿಗೆ ಸಚಿವ ಸ್ಥಾನ ಕೊಡಬೇಕು ಎಂದು ಗೋಪಾಲಸ್ವಾಮಿ ಹಾಗೂ ಪುಟ್ಟೇಗೌಡರೂ ಹೇಳಬೇಕು ಎಂದು ಸಚಿವ ಸ್ಥಾನದ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮೂರು ಬೈಎಲೆಕ್ಷನ್ನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ನಂತರ ರಾಜ್ಯ ಸಚಿವ ಸಂಪುಟದ ಪುನರ್ರಚನೆ ಅಥವಾ ಬದಲಾವಣೆಯ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. ಇನ್ನು ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಆಗಲ್ಲ ಎಂದು ನಾಯಕರು ಸ್ಪಷ್ಟನೆ ನೀಡುತ್ತಾ ಬಂದಿದ್ದಾರೆ. ಇನ್ನು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿ ಬಂದಿದ್ದಾಗಲೂ ಈ ವಿಷಯ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರವೂ ಚರ್ಚೆಯಲ್ಲಿದೆ. ಇದರಿಂದಾಗಿ ಒಂದಷ್ಟು ನಾಯಕರು ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಹಾಗೂ ಉಳಿದವರು ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.












Click it and Unblock the Notifications