ಗೊಲ್ಲರಕೊಪ್ಪಲಿನಲ್ಲಿ ಊರಿನ ತುಂಬಾ ಚಿಕೂನ್ ಗುನ್ಯಾ ಬಾಧಿತರು!
ಹಾಸನ, ಜುಲೈ 6: ಪ್ರತಿ ಮನೆಯಲ್ಲೂ ಒಬ್ಬರಲ್ಲ ಒಬ್ಬರು ಜ್ವರದಿಂದ ಬಳಲುವವರು. ಕೈಕಾಲು ಊತಗೊಂಡು ನಡೆಯಲು ಬಿಡದೆ ಬಾಧಿಸುವ ನೋವು. ಮೈನಡುಗಿಸುವ ಚಳಿಯೊಂದಿಗೆ ಬರುವ ಆಗಾಗ್ಗೆ ಜ್ವರ. ಕೆಲಸಬಿಟ್ಟು ಆಸ್ಪತ್ರೆಗೆ ಎಡತಾಕುತ್ತಿರುವ ಜನ. ಶಾಲೆ ತೆರಳದ ಮನೆಯಲ್ಲೇ ಉಳಿದ ಮಕ್ಕಳು. ಜ್ವರ ಅಂಟುವ ಭಯದಲ್ಲಿ ಊರಿನತ್ತ ಮುಖ ಮಾಡದ ನೆಂಟರಿಷ್ಟರು.
ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?
ಇದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗೊಲ್ಲರಕೊಪ್ಪಲು ಗ್ರಾಮದ ಈಗಿನ ದುಸ್ಥಿತಿ. ಗ್ರಾಮದಲ್ಲಿ ಸುಮಾರು ಮೂವತೈದು ಕುಟುಂಬಗಳಿದ್ದು, ಈ ಪೈಕಿ ಹೆಚ್ಚಿನವರು ಕಳೆದೊಂದು ತಿಂಗಳಿನಿಂದ ಜ್ವರದಿಂದ ಬಳಲುತ್ತಿದ್ದಾರೆ. ಒಬ್ಬರು ಚಿಕಿತ್ಸೆ ಪಡೆದು ಸುಧಾರಿಸುತ್ತಿದ್ದಂತೆಯೇ ಮತ್ತೊಬ್ಬರನ್ನು ಜ್ವರ ಬಾಧಿಸುತ್ತಿದೆ.
ಸುತ್ತಮುತ್ತಲಿನ ಗ್ರಾಮಗಳಿಗೂ ಇದ್ಯಾವ ಜ್ವರ ಎಂಬುದರ ಅರಿವಿಲ್ಲದ ಕಾರಣ ವಿಚಿತ್ರ ಜ್ವರ ಎಂದು ಹೇಳಿ ಆತಂಕಪಡುತ್ತಿದ್ದಾರೆ. ಮೊದಲು ಒಂದಿಬ್ಬರಿಗೆ ಕಾಣಿಸಿಕೊಂಡ ಜ್ವರ ಬಳಿಕ ಎಲ್ಲರನ್ನು ಕಾಡತೊಡಗಿದೆ. ಹೀಗಾಗಿ ಎಲ್ಲರೂ ಜ್ವರ ಪೀಡಿತರಾದವರೇ ಆಗಿದ್ದು, ಆಸ್ಪತ್ರೆ ಔಷಧಿ ಎನ್ನುತ್ತಾ ಕಷ್ಟದ ಜೀವನ ಸಾಗಿಸುತ್ತಿದ್ದಾರೆ.
ಮಾರಕ ರೋಗಗಳ ತಡೆಗೆ ಸಸ್ಯ ತಂತ್ರಜ್ಞಾನ
ಗ್ರಾಮದ ಪಕ್ಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಹೀಗಾಗಿ ದೂರದ ಹಾಸನ ಅಥವಾ ಹೊಳೆನರಸೀಪುರ ಆಸ್ಪತ್ರೆಗೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ. ನಡೆದಾಡಲು ಅಸಾಧ್ಯವಾಗಿರುವ ಕಾರಣ ಖಾಸಗಿ ವಾಹನಗಳನ್ನಿಡಿದುಕೊಂಡು ಆಸ್ಪತ್ರೆಗೆ ಹೋಗಿ ಬರುತ್ತಿದ್ದಾರೆ. ಕೂಲಿ ಮಾಡಿಯೇ ಜೀವನ ಸಾಗಿಸುವ ಇವರ ಸ್ಥಿತಿ ಇದೀಗ ಜ್ವರ ಬಂದ ಕಾರಣ ಮೂರಾಬಟ್ಟೆಯಾಗಿದೆ.
ಶಾಲೆಗೆ ತೆರಳದ ಮಕ್ಕಳು
ಜ್ವರದಿಂದಾಗಿ ಮಕ್ಕಳು ಶಾಲೆಗೆ ತೆರಳುತ್ತಿಲ್ಲ. ಶಾಲೆಯಲ್ಲೂ ಒಬ್ಬರಿಂದ ಮತ್ತೊಬ್ಬರಿಗೆ ಜ್ವರ ಹರಡುವ ಭಯವೂ ಇಲ್ಲದಿಲ್ಲ. ಹೀಗಾಗಿ ಜ್ವರ ಪೀಡಿತ ಮಕ್ಕಳು ಗುಣಮುಖರಾದ ಮೇಲೆಯೇ ಶಾಲೆಗೆ ಬರುವಂತೆ ಶಿಕ್ಷಕರು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.
ಆಪತ್ತಿಗೆ ನೆಂಟರೂ ಇಲ್ಲ!
ಗ್ರಾಮದಲ್ಲಿ ಜ್ವರವಿರುವ ವಿಷಯ ತಿಳಿದ ಬಳಿಕ ಊರಿಗೆ ಸಂಬಂಧಿಕರು ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಎಲ್ಲರಿಗೂ ಜ್ವರದ್ದೇ ಭಯ. ಜ್ವರ ಪೀಡಿತರ ಮೈ, ಕೈ, ಪಾದ ಊದಿಕೊಂಡು ನಡೆಯಲಾರದ ಸ್ಥಿತಿ ತಲುಪಿದ್ದರಿಂದ ಹೊರಗೆ ಹೋಗಲು ಮುಜುಗರ ಪಟ್ಟುಕೊಂಡು ಮನೆಯಲ್ಲೇ ಉಳಿದುಕೊಳ್ಳುತ್ತಿದ್ದಾರೆ.
ಚಿಕೂನ್ ಗುನ್ಯಾವಂತೆ
ಇಷ್ಟಕ್ಕೂ ಇದೇನು ವಿಚಿತ್ರ ಜ್ವರವಲ್ಲ ಚಿಕೂನ್ ಗುನ್ಯಾ ಎಂದು ತಾಲೂಕು ವೈದ್ಯಾಧಿಕಾರಿ ಡಾ. ರಾಜೇಶ್ ಹೇಳಿಕೆ ನೀಡಿದ್ದಾರೆ. ತಾಲೂಕು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಹಳ್ಳಿಮೈಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರ ಪೀಡಿತರನ್ನು ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾರೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಹಿರಣ್ಣಯ್ಯ ಅವರು ಕೂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಆದರೂ ಗ್ರಾಮಸ್ಥರಿಗೆ ಜ್ವರದ ಭಯ ಮಾತ್ರ ಇನ್ನೂ ಹೋಗಿಲ್ಲ.
ಆರೋಗ್ಯ ಕಾಳಜಿ ಇರಲಿ
ಮಳೆಗಾಲದಲ್ಲಿ ಕಾಯಿಲೆಗಳು ಸಾಮಾನ್ಯ. ಅದರಲ್ಲೂ ಮುನ್ನೆಚ್ಚರಿಕೆ ವಹಿಸದಿದ್ದರೆ ಇಂಥ ಜ್ವರಗಳು ಬರುವುದು ಗ್ಯಾರಂಟಿ. ತಿನ್ನುವ ಆಹಾರ, ಮನೆ ಸುತ್ತ ಮುತ್ತ ಸ್ವಚ್ಛತೆ ಕಾಯ್ದುಕೊಳ್ಳುವುದು, ರೋಗ ಲಕ್ಷಣ ಅರಿವಿಗೆ ಬರುತ್ತಿದ್ದಂತೆಯೇ ವೈದ್ಯರ ಬಳಿ ತೆರಳುವುದು, ಅಗತ್ಯ ಮನೆಮದ್ದುಗಳನ್ನು ಬಳಸುವುದರಿಂದ ರೋಗ ತಡೆಗಟ್ಟಬಹುದು ಎಂದು ಜಿಲ್ಲಾಡಳಿತ ಸಲಹೆ ನೀಡಿದೆ.