'ಮಾತು ಕೊಟ್ರೆ ದೇವಸ್ಥಾನ ಕಟ್ಟಿಸಿಕೊಡ್ತೇನೆ' ಗ್ರಾಮಸ್ಥರಿಗೆ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಆಮಿಷ
ಹಾಸನ, ಏಪ್ರಿಲ್ 28: ಹಾಸನದಲ್ಲಿ ಚುನಾವಣಾ ಕಣ ರಂಗೇರಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಹಾಗೂ ಜೆಡಿಎಸ್ ಎಚ್.ಪಿ ಸ್ವರೂಪ್ ನಡುವೆ ಜಿದ್ದಾಜಿದ್ದಿಯ ಪೈಪೋಟಿ ಇದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಶತ ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಮತದಾರರಿಗೆ ಆಮಿಷವೊಡ್ಡಿರುವ ಆರೋಪ ಕೇಳಿ ಬಂದಿದೆ.
ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಮಲ್ಲನಾಯಕನಹಳ್ಳಿಯಲ್ಲಿ ಬುಧವಾರ ನಡೆದ ಬಿಜೆಪಿ ರೋಡ್ ಶೋನಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಮುಂದೆ ಗ್ರಾಮಸ್ಥರು ದೇವಸ್ಥಾನ ಕಟ್ಟಿಸಿಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಗ್ರಾಮಸ್ಥರ ಬೇಡಿಕೆ ಆಲಿಸಿ ಮಾತನಾಡಿದ ಶಾಸಕ ಪ್ರೀತಂ ಗೌಡ, 'ಊರಲ್ಲಿ ಎಷ್ಟು ಓಟು ಇದೆಯಣ್ಣ, ನಿಮ್ಮೂರಿನಲ್ಲಿ ಹೇಳಿ ಬೂತ್ನಲ್ಲಿ ಬೇಡ' ಎಂದಿದ್ದಾರೆ. ಈ ವೇಳೆ ಯುವಕನೊಬ್ಬ 150 ಮತ ಇದೆ ಎಂದಿದ್ದಾನೆ.

ಮಾತು ಮುಂದುವರಿಸಿದ ಪ್ರೀತಂ ಗೌಡ, 150 ಮತಗಳಲ್ಲಿ ಓಟಿಂಗ್ ಆಗೋದು 120, 130 ಅಲ್ವೇನಣ್ಣ, 120, 130ಕ್ಕೆ ಎಷ್ಟು ಓಟು ಹಾಕ್ತಿರಾ ಹೇಳಿ, ಒಂದು ಲೆಕ್ಕಾ ಇರಲಿ. 65- 70 ಓಟು ಹಾಕುತ್ತೇವೆ ಎಂದು ನಮ್ಮ ಹಿರಿಯರು, ನಮ್ಮ ತಾಯಂದಿರು ಎಲ್ಲಾ ಸೇರಿ ಹೇಳುತ್ತಿದ್ದಾರೆ. ದೇವಸ್ಥಾನದ ವಿಚಾರದಲ್ಲಿ ಯಾರು ಸುಳ್ಳು ಹೇಳುವುದಿಲ್ಲ. 70 ಜನ ಯಾರು, ಯಾರು ಮತ ಹಾಕುವವರು ಬಂದು ದೇವಸ್ಥಾನದ ಮುಂದೆ ಮಂಗಳಾರತಿ ಮಾಡಿಸಿ, ಗುದ್ದಲಿ ಪೂಜೆ ಮಾಡಿ ಕೆಲಸ ಪ್ರಾರಂಭ ಮಾಡಿಸಿ, ದೇವಸ್ಥಾನ ಮಾಡಿಕೊಡುವುದು ನನ್ನ ಜವಾಬ್ದಾರಿ ಎಂದಿದ್ದಾರೆ.
ಆ ಎಪ್ಪತ್ತು ಜನ ಬಂದು ಪೂಜೆ ಮಾಡಿಸಿ ಪ್ರೀತಂ ಗೌಡರ ಜೊತೆ ಇರುತ್ತೇವೆ. ಓಟು ಹಾಕುತ್ತೇವೆ ಅಂತ ಮಾತು ಕೊಡಿ. ಉಳಿದಿದ್ದು ಕೆಲಸ ನಾನು ಮಾಡುತ್ತೇನೆ. ಎಪ್ಪತ್ತಕ್ಕಿಂತ ಕಡಿಮೆ ಓಟು ಬಂದರೆ ಚುನಾವಣೆ ಆದ ಮೇಲೆ ಮಾತಾಡುತ್ತೇನೆ. ಯಾರು ಎಪ್ಪತ್ತು ಜನ ಅಂತ ಈಗ ಕರೆದು ಪೂಜೆ ಮಾಡಿಸಿ ಏಕೆಂದರೆ ನನಗೆ ನೆಂಟಸ್ಥನದ್ದು ಕಾಟ ಜಾಸ್ತಿ ನನಗೆ ಎಂದಿದ್ದಾರೆ.

ಹಾಸನದಲ್ಲಿ ಇರುತ್ತಾರೆ ಚುನಾವಣೆ ಬಂದ ತಕ್ಷಣ ಇಲ್ಲಿ ಬಂದು ನೆಂಟಸ್ಥನ ಮಾಡಿಕೊಂಡು, ನಮ್ಮ ಅಣ್ಣ ತಮ್ಮ, ಅವರು ನನಗೆ, ನೆಂಟರು, ಇವರು ನನಗೆ ನೆಂಟರು ಅಂತ ಬೇರೆ ಪಕ್ಷದ ಕಡೆಗೆ ಮುಖ ಮಾಡಿದರೆ. ನಾನು ಮಾಡಿದ ಕೆಲಸಕ್ಕೆ ಕೂಲಿ ಕೊಡುವುದು ಯಾರು ಎಂದು ಪ್ರಶ್ನಿಸಿದ್ದಾರೆ.
ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಎಪ್ಪತ್ತು ಜನನು ಮಂಗಳಾರತಿ ಮಾಡಿ. ಪ್ರೀತಂ ಗೌಡಂಗೆ ಓಟು ಹಾಕುತ್ತೇವೆ ಅಂತ ತೀರ್ಮಾನ ಮಾಡಿ ಕೆಲಸ ಮಾಡಿಕೊಡುವುದು ನನ್ನ ಜವಾಬ್ದಾರಿ ಎಂದು ಮತದಾರರಿಗೆ ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ. ಮಲ್ಲನಾಯಕನಹಳ್ಳಿಯು ದಿ.ಎಚ್.ಎಸ್.ಪ್ರಕಾಶ್ ಅವರ ಸಂಬಂಧಿಕರು ಹೆಚ್ಚಿರುವ ಊರು ಹೀಗಾಗಿ ಗ್ರಾಮದಲ್ಲಿ ಪ್ರಚಾರ ಮಾಡುವ ವೇಳೆ ಸ್ವರೂಪ್ ಹೆಸರು ಹೇಳದೆ ಪರೋಕ್ಷವಾಗಿ ಅವರ ಸಂಬಂಧಿಕರು ಎನ್ನುವ ಕಾರಣಕ್ಕೆ ಮತ ಹಾಕಬೇಡಿ ಎಂದು ಪ್ರೀತಂ ಗೌಡ ಹೇಳಿದ್ದಾರೆ.












Click it and Unblock the Notifications