45 ದಿನಗಳ ಕಾಲ ಬಿಸಿಲೆ ಘಾಟ್ನಲ್ಲಿ ವಾಹನ ಸಂಚಾರ ಬಂದ್
ಹಾಸನ, ಏಪ್ರಿಲ್ 13; ಹಾಸನ ಜಿಲ್ಲೆಯ ಸಕಲೇಶಪುರದ ಬಿಸಿಲೆ ಘಾಟ್ ಮಾರ್ಗದಲ್ಲಿ 45 ದಿನಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನ ಸವಾರರು ಬದಲಿ ಮಾರ್ಗವನ್ನು ಬಳಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಏಪ್ರಿಲ್ 16 ರಿಂದ ಜೂನ್ 1ರ ತನಕ ಬಿಸಿಲೆ ಘಾಟ್ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗಲಿದೆ. ಬದಲಿ ಮಾರ್ಗವನ್ನು ಹಾಸನ ಜಿಲ್ಲಾಡಳಿತವೇ ಸೂಚಿಸಿದೆ.
ಬೆಂಗಳೂರು-ಜಾಲ್ಸೂರು ರಸ್ತೆಯಲ್ಲಿನ ಬಿಸಿಲೆ ಘಾಟ್ ವ್ಯಾಪ್ತಿಯಲ್ಲಿ ಬಾಕಿ ಇರುವ ಕಿ. ಮೀ. 283 ರಿಂದ 286ರ ತನಕ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕಿದೆ. ಈ ಕಾಮಗಾರಿ ಹಿನ್ನಲೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.

ಬಿಸಿಲೆ ಘಾಟ್ ರಸ್ತೆ ಕಿರಿದಾಗಿದೆ. ಕಾಮಗಾರಿ ಅವಧಿಯಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ. ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ 45 ದಿನಗಳ ಕಾಲ ವಾಹನ ಸಂಚಾರವನ್ನು ನಿಷೇಧಿಸಿ ಹಾನಸ ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ.
ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರು, ಸ್ಥಳೀಯ ಗ್ರಾಮಗಳಾದ ಹೆತ್ತೂರು, ಯಸಳೂರು, ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಜನರಿಗೆ ಇದರಿಂದಾಗಿ ತೊಂದರೆ ಉಂಟಾಗಲಿದೆ.
ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ, ಗುಂಡ್ಯ ಮತ್ತು ಸೋಮವಾರಪೇಟೆ-ಮಡಿಕೇರಿ-ಸುಳ್ಯ ಮಾರ್ಗದಲ್ಲಿ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.












Click it and Unblock the Notifications