ಜೆಡಿಎಸ್ ವಾಟ್ಸಪ್ ಗ್ರೂಪ್ನಿಂದ ಹೊರಬಂದ ಶಾಸಕ ಶಿವಲಿಂಗೇಗೌಡ
ಹಾಸನ, ಜೂನ್ 27: ಜೆಡಿಎಸ್ನಿಂದ ಬಂಧ ಕಳೆದುಕೊಂಡು ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಧಾನ ಪರಿಷತ್ ಚುನಾವಣೆ ಸಮಯದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಜೆಡಿಎಸ್ ಪಕ್ಷದೊಂದಿಗೆ ಇದ್ದ ಬಸವರಾಜ ಹೊರಟ್ಟಿ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು.
ರಾಜ್ಯಸಭೆ ಚುನಾವಣೆಯಲ್ಲಿ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದೀಗ ಕಳೆದ ಕೆಲವು ತಿಂಗಳಿನಂದ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಪಕ್ಷದ ಹಲವು ವಾಟ್ಸಪ್ ಗ್ರೂಪ್ಗಳಿಂದ ಹೊರ ಬರುವ ಮೂಲಕ ಪಕ್ಷ ಬಿಡುವ ಸುಳಿವು ನೀಡಿದ್ದಾರೆ.
ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ: ತುಂಬಾ ಸಂತೋಷ ಎಂದ ಗುಬ್ಬಿ ಶ್ರೀನಿವಾಸ್
ಜೆಡಿಎಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಬೇಕೆಂಬ ಯೋಜನೆಯಲ್ಲಿ ರಚನೆ ಮಾಡಿದ್ದ 2023ಕ್ಕೆ ಜನತಾ ಸರಕಾರ, ಕನ್ನಡ ನಾಡಿನ ಜೆಡಿಎಸ್ ಪಡೆ , ವಿಜಯಪುರ ಜೆಡಿಎಸ್, ದಳಪತಿಗಳು ಎನ್ನುವ ವಾಟ್ಸಪ್ ಗುಂಪುಗಳಿಂದ ಅರಸೀಕರೆ ಶಾಸಕರು ಹೊರಬಂದಿದ್ದಾರೆ. ಈ ಗುಂಪುಗಳಲ್ಲಿ ಪಕ್ಷದ ಪ್ರಮುಖ ನಾಯಕರು, ಕೆಲವು ಶಾಸಕರು, ಶಾಸಕರ ಆಪ್ತ ಕಾರ್ಯದರ್ಶಿಗಳು ಇದ್ದರು.
ಕೆಲವು ದಿನಗಳ ಹಿಂದೆ ಶಿವಲಿಂಗೇಗೌಡ ವಿರುದ್ಧ ಬಹಿರಂಗ ಸಭೆಯಲ್ಲೇ ಪಕ್ಷದ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದರು. ಆದಾದ ಕೆಲವು ದಿನಗಳಿಂದ ಶಿವಲಿಂಗೇಗೌಡ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಇದೀಗ ವಾಟ್ಸಪ್ ಗುಂಪಿನಿಂದ ಹೊರ ಬರುವ ಮೂಲಕ ಅಧಿಕೃತವಾಗಿ ಪಕ್ಷದಿಂದ ಹೊರಬರುವ ಸೂಚನೆ ನೀಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ವದಂತಿ; ಎಚ್ಡಿಕೆ ಸ್ಪಷ್ಟನೆ
ರಾಜ್ಯಸಭೆಯಲ್ಲಿ ಜೆಡಿಎಸ್ಗೆ ಮತ
ಅದಾಗಲೇ ಜೆಡಿಎಸ್ ಬಂಡಾಯ ಶಾಸಕ ಎಂದು ಗುರುತಿಸಿಕೊಂಡಿದ್ದ ಕೆ. ಎಲ್. ಶಿವಲಿಂಗೇಗೌಡ ಇದೇ ತಿಂಗಳು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಇದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು."ಇವತ್ತಿಗೆ ನಾನು ಜೆಡಿಎಸ್ನಲ್ಲಿದ್ದೇನೆ, ಜೆಡಿಎಸ್ಗೆ ಮತ ಹಾಕಿದ್ದೇನೆ. ಹಿಂದೇನಾಗಿದೆ, ಮುಂದೇನಾಗುತ್ತದೋ? ಎಂಬುದನ್ನು ನೋಡೋಣ. ಅರಸೀಕೆರೆ ಜನ ಹೇಳಿದಂತೆ ಕೇಳುತ್ತೇನೆ" ಎಂದು ತಿಳಿಸಿದ್ದರು.
ಸಭೆ ಬಗ್ಗೆ ಮಾಹಿತಿ ನೀಡದಕ್ಕೆ ಕೆಂಡಾಮಂಡಲವಾಗಿದ್ದರು
ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಮಾಡಲು ದೇವೇಗೌಡ ನೇತೃತ್ವದಲ್ಲಿ ನಡೆದಿದ್ದ ಸಭೆಯ ವೇಳೆ ಶಿವಲಿಂಗೇಗೌಡ ತಮಗೆ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು. ಎಲ್ಲಾ ಕ್ಷೇತ್ರದ ಶಾಸಕರಿಗೆ ಕಾರ್ಯಕರ್ತರ ಜೊತೆಗೆ ಬರ ಹೇಳಿ, ನನಗೆ ಮಾತ್ರ ಇದರ ಬಗ್ಗೆ ಏನೂ ಮಾಹಿತಿ ನೀಡಿಲ್ಲ, ದೇವೇಗೌಡ, ಕುಮಾರಸ್ವಾಮಿ ಹೆಸರೇಳಿದರೆ ಇಂದು ಯಾರು ಓಡಿಬಂದು ಮತ ಹಾಕಲ್ಲ. ನನಗೂ ಮಾಹಿತಿ ನೀಡಿದ್ದರೆ, ನಮ್ಮ ಕಾರ್ಯಕರ್ತರ ಜೊತೆ ಬರುತ್ತಿದ್ದೆ. ಸೀಕ್ರೇಟ್ ಸಭೆ ಎಂದು ಈಗ ನಾನು ಒಬ್ಬನೇ ಬಂದಿದ್ದೇನೆ, ಇದರಿಂದ ನಮ್ಮ ಭಾಗದ ಕಾರ್ಯಕರ್ತರು ಬೇಸರ ಮಾಡಿಕೊಂಡಿದ್ದಾರೆ ಎಂದು ಎಲ್ಲರೆದರೂ ಆಕ್ರೋಶ ಹೊರ ಹಾಕಿದ್ದರು.
'ಕೈ' ಹಿಡಿಯಲಿದ್ದಾರೆ ಶಿವಲಿಂಗೇಗೌಡ
ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನವೇ ಸಾಕಷ್ಟು ಪಕ್ಷಾಂತರಗಳು ನಡೆಯಲಾರಂಭಿಸಿವೆ. ಅದರಲ್ಲೂ ಜೆಡಿಎಸ್ನಲ್ಲಿ ಪಕ್ಷ ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರು ಬಾರಿ ಶಾಸಕರಾಗಿದ್ದರೂ, ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಶಿವಲಿಂಗೇಗೌಡ ಜೆಡಿಎಸ್ ಪಕ್ಷ ಬಿಡಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಇವರು ಮಾತ್ರವಲ್ಲದೇ ಅರಕಲಗೂಡು ಶಾಸಕ ಎ. ಟಿ. ರಾಮಸ್ವಾಮಿ ಕೂಡ ಪಕ್ಷದ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಇವರ ಜೊತೆಗೆ ಹಲವು ಮುಖಂಡರೂ ಕೂಡ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಪಕ್ಷ ತ್ಯಜಿಸಲಿರುವ ಪ್ರಮುಖರು
ಬಸವರಾಜ ಹೊರಟ್ಟಿ ನಂತರ ಮೈಸೂರಿನ ಪ್ರಭಾವಿ ನಾಯಕ ಜಿ. ಟಿ. ದೇವೇಗೌಡ ಕೂಡ ಶೀಘ್ರದಲ್ಲೇ ಪಕ್ಷವನ್ನು ಬಿಡಲಿದ್ದಾರೆ. ಆದರೆ ಅವರು ಯಾವ ಪಕ್ಷ ಸೇರಲಿದ್ದಾರೆ? ಎನ್ನುವುದು ಇನ್ನೂ ನಿಗೂಢವಾಗಿ ಉಳಿದುಕೊಂಡಿದೆ. ಇನ್ನು ರಾಜ್ಯಸಭೆ ಚುನಾವಣೆ ವೇಳೆ ಅಡ್ಡಮತದಾನ ಮಾಡಿರುವ ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಮತ್ತು ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಕೂಡ ಪಕ್ಷ ಬಿಡುವ ಸಾಧ್ಯತೆಯಿದೆ. ಇನ್ನೂ ಚುನಾವಣೆಗೆ ಒಂದು ವರ್ಷವಿದ್ದು ಯಾರು, ಯಾರು ಪಕ್ಷ ತೊರೆಯಲಿದ್ದಾರೆ? ಕಾದು ನೋಡಬೇಕಿದೆ.