ಶ್ರವಣಬೆಳಗೊಳ : ಜನಿವಾರ ಕೆರೆಯಲ್ಲಿ ಸಾಹಸ ಕ್ರೀಡೆಗೆ ಚಾಲನೆ
ಹಾಸನ, ಫೆಬ್ರವರಿ 13 : ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಜಲ ಸಾಹಸ ಕ್ರೀಡೆಯನ್ನು ಆರಂಭಿಸಲಾಗಿದೆ. ಶ್ರವಣಬೆಳಗೊಳಕ್ಕೆ ಆಗಮಿಸುವ ಪ್ರವಾಸಿಗರು ಜನಿವಾರ ಕೆರೆಯಲ್ಲಿ ಜಲ ಸಾಹಸ ಕ್ರೀಡೆಯ ಅನುಭವ ಪಡೆಯಬಹುದಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಜಲ ಸಾಹಸ ಕ್ರೀಡೆಗೆ ಸೋಮವಾರ ಚಾಲನೆ ನೀಡಿದರು. ಜನಿವಾರ ಕೆರೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಕ್ರೀಡೆಯನ್ನು ಆಯೋಜನೆ ಮಾಡಲಾಗಿದೆ.
ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ: ಹಿನ್ನಲೆ, ಮಹತ್ವ
ನಂತರ ಮತಾಡನಾಡಿದ ಸಚಿವರು, 'ರಾಜ್ಯ ಸರ್ಕಾರ ಸುಮಾರು 50 ಲಕ್ಷ ವೆಚ್ಚದಲ್ಲಿ ಜನಿವಾರ ಕೆರೆಯಲ್ಲಿ ಇಂದಿನಿಂದ ಬೋಟಿಂಗ್ ವ್ಯವಸ್ಥೆಯನ್ನ ಮಾಡಿದೆ. ಕೆರೆಗೆ ಹೇಮಾವತಿ ನದಿ ಸಂಪರ್ಕ ಇರುವುದರಿಂದ ವರ್ಷ ಪೂರ್ತಿ ಕೆರೆಯಲ್ಲಿ ನೀರು ಇರುತ್ತದೆ' ಎಂದರು.
600 ಎಕರೆ ಪ್ರದೇಶದ ಕೆರೆ ಅಚ್ಚುಕಟ್ಟನ್ನು ಜನಿವಾರ ಕೆರೆ ಒಳಗೊಂಡಿದೆ. ಇದರಲ್ಲಿ ಸದ್ಯ 355 ಎಕರೆ ಪ್ರದೇಶವನ್ನು ಕ್ರೀಡಾ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತಿದೆ. ದೋಣಿ ವಿಹಾರ, ಬಂಪ್ರೈಡ್, ಬನಾನಾ ಬೋಟ್ರೈಡ್, ಪವರ್ಬೋಟ್ರೈಡ್, ಪೆಡ್ಲಿಂಗ್ ಬೋಟ್ ಮುಂತಾದ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ.
In Pics: ಬಾಹುಬಲಿ ಮಹಾಮಜ್ಜನಕ್ಕೆ ರಾಷ್ಟ್ರಪತಿ ಕೋವಿಂದ್ ಚಾಲನೆ
ಕೆರೆಯಲ್ಲಿ ಕ್ರೀಡೆ ನಡೆಯುವ ಸ್ಥಳದ ಸುತ್ತಲೂ ಬೇಲಿ, ತಡೆಗೋಡೆ ನಿರ್ಮಾಣ, ರಸ್ತೆ ವಿಸ್ತರಣೆ, ಜಲಸಾಹಸ ಕ್ರೀಡೆ ಹಾಗೂ ಪ್ರವಾಸಿಗರ ಮೂಲ ಸೌಲಭ್ಯ ಕಲ್ಪಿಸಲು 5 ಕೋಟಿ ರೂ.ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ.
ಶಾಶ್ವತವಾಗಿ ಜಲಕ್ರೀಡೆ ಆಯೋಜಿಸುವ ಸಲುವಾಗಿ ಸಂಬಂಧಪಟ್ಟ ಕೆಲ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗಿದ್ದು, ರಿಯಾಯಿತಿ ದರದಲ್ಲಿ ಶಾಶ್ವತವಾಗಿ ಕ್ರೀಡಾ ಚಟುವಟಿಕೆ ನಡೆಯಲಿದೆ.
ಮಾಹಿತಿ ಕೈಪಿಡಿ ಬಿಡುಗಡೆ : ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿಗರಿಗಾಗಿ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಬೈಕ್ ಟೂರಿಸಂ : ಶ್ರವಣಬೆಳಗೊಳದಲ್ಲಿ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕಲ್ಪಿಸಿರುವ ಬಾಡಿಗೆ ಆಧಾರಿತ ಬೈಕ್ಗಳನ್ನು ಸ್ವತಹ ಜಿಲ್ಲಾ ಉಸ್ತುವಾರಿ ಸಚಿವರು ಚಾಲಯಿಸುವ ಮೂಲಕ ಹಸಿರು ನಿಶಾನೆ ತೋರಿಸಿದರು.