ಪರಪುರುಷನೊಡನೆ ಸ್ನೇಹ: ಹಾಸನದಲ್ಲಿ ಪತಿಗೇ ವಿಷವುಣಿಸಿದ ಪತ್ನಿ!
ಅನುಮಾನಾಸ್ಪದವಾಗಿ ವಿಶ್ವನಾಥ್ ಎಂಬ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನ ಪತ್ನಿ ಆಶಾ ಎಂಬುವವರನ್ನೇ ಪೊಲೀಸರು ವಶಕ್ಕೆ ಪಡೆದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ, ಮೇ 03: ಅನುಮಾನಾಸ್ಪದವಾಗಿ ವಿಶ್ವನಾಥ್ ಎಂಬ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನ ಪತ್ನಿ ಆಶಾ ಅಲಿಯಾಸ್ ಪುಷ್ಪಲಕ್ಷ್ಮಿ ಎಂಬುವವರನ್ನೇ ಪೊಲೀಸರು ವಶಕ್ಕೆ ಪಡೆದ ಘಟನೆ ಹಾಸನ ಜಿಲ್ಲೆಯ ಕಿತ್ತನಹಳ್ಳಿಯಲ್ಲಿ ನಡೆದಿದೆ.
ಮೂರು ತಿಂಗಳ ಹಿಂದೆ ವಿಶ್ವನಾಥ್ ಎಂಬುವವರೊಂದಿಗೆ ಆಶಾ ವಿವಾಹವಾಗಿತ್ತು. ಏಪ್ರಿಲ್ 24 ರಂದು ವಿಶ್ವನಾಥ್ ಮತ್ತು ಆಶಾ ಇಬ್ಬರೂ ಸಂಬಂಧಿಕರ ನಾಮಕರಣವೊಂದಕ್ಕೆ ತೆರಳಿದ್ದರು. ಹಿಂದಿರುಗಿ ಬರುವಾಗ ಪತಿ-ಪತ್ನಿ ಇಬ್ಬರೂ ಹತ್ತಿರದ ಪಾರ್ಕ್ ಒಂದಕ್ಕೆ ತೆರಳಿ ಕೆಲ ಸಮಯ ಇದ್ದರು.
ಪಾರ್ಕಿಗೆ ತೆರಳುವ ಮುನ್ನ ಆಶಾ ಮೆಡಿಕಲ್ ಶಾಪಿಗೆ ತೆರಳಿ, ನಿದ್ದೆ ಮಾತ್ರೆ ಮತ್ತು ವಿಷದ ಇಂಜೆಕ್ಷನ್ ಖರೀದಿಸಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಪಾರ್ಕಿನಲ್ಲಿ ಪತಿಗೆ ಮತ್ತು ಬರುವ ಮಾತ್ರೆ ನೀಡಿ, ನಂತರ ವಿಷದ ಇಂಜೆಕ್ಷನ್ ನೀಡಿದ ಪರಿಣಾಮ ವಿಶ್ವನಾಥ್ ಪಾರ್ಕಿನಲ್ಲೇ ನರಳಿ ಕೊನೆಯುಸಿರೆಳೆದರು. ವಿಶ್ವನಾಥ್ ಪ್ರಾಣ ಬಿಡುವ ಮೊದಲು ಪೊಲಿಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. [ಹಾಸನ: ಕಲ್ಲುಕ್ವಾರೆಯಲ್ಲಿ ಸಿಡಿಮದ್ದು ಸ್ಫೋಟಕ್ಕೆ ಮೂವರು ಸಾವು]
ಇಂಜೆಕ್ಷನ್ ನೀಡಿದ ಬಳಿಕ ಪತಿಯನ್ನು ಪಾರ್ಕಿನಲ್ಲಿಯೇ ಬಿಟ್ಟು ಪರಾರಿಯಾಗಿದ್ದ ಆಶಾರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದ ವೇಳೆ ಆಕೆಗೆ ಸಂತೋಷ್ ಎಂಬ ಯುವಕನೊಬ್ಬನೊಂದಿಗೆ ಅತಿಯಾದ ಸ್ನೇಹವಿತ್ತು ಎನ್ನಲಾಗಿದೆ. ವಿಶ್ವನಾಥ್ ಅವರನ್ನು ಕೊಲೆ ಮಾಡುವುದಕ್ಕೆ ಇದೇ ಕಾರಣವಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ.
"ಆಶಾಗೆ ಸಂತೋಷ್ ಎಂಬುವವರೊಂದಿಗೆ ಅತಿಯಾದ ಸ್ನೇಹವಿತ್ತು, ಈ ಬಗ್ಗೆ ನಮಗೂ ಅಸಮಾಧಾನವಿತ್ತು. ಅದಕ್ಕೆಂದೇ ನಮ್ಮ ಮಗ ವಿಶ್ವನಾಥ್ ಜೊತೆ ಆಶಾ ಸದಾ ಅಂತರ ಕಾಯ್ದುಕೊಂಡಿದ್ದಳು" ಎಂದು ವಿಶ್ವನಾಥ್ ತಂದೆ ಬೋರಶೆಟ್ಟಿ ತಮ್ಮ ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications