ಮೋದಿಗಾಗಿ 32 ಕೋಟಿ ವ್ಯಯಿಸುವ ಬದಲು ಒಂದು ಪಂಚಾಯಿತಿ ಅಭಿವೃದ್ಧಿ ಮಾಡಬಹುದಿತ್ತು: ಕುಮಾರಸ್ವಾಮಿ
ಹಾಸನ, ಜೂ.23: ಯೋಗ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆತರಲು 32 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇದು ಯಾವ ಪುರುಷಾರ್ಥಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಷ್ಟ್ರದ ಗೌರವಾನ್ವಿತ ಪ್ರಧಾನಿಯವರು ಮೈಸೂರಿಗೆ ಭೇಟಿ ನೀಡಿ, ವಿಶ್ವ ಯೋಗ ದಿನದ ಅಂಗವಾಗಿ ಮೈಸೂರಿನ ನಾಗರಿಕರ ಜೊತೆ ಯೋಗ ಆಯೋಜನೆಯಲ್ಲಿ ಭಾಗಿಯಾಗಿ ರುವುದಕ್ಕೆ ನಾನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಆದರೆ ಬೆಂಗಳೂರಿನ ಕೊಮ್ಮಘಟ್ಟ ಸಭೆಯಲ್ಲಿ ಮಾತನಾಡಬೇಕಾದರೆ ಯಾವ ಸರ್ಕಾರವೂ ಏನು ಮಾಡಿಲ್ಲ ಎಂದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ನಾಡಿಗೆ ಕೊಡುಗೆ ಕೊಟ್ಟಿದ್ದನ್ನು ಸ್ಮರಿಸುವುದು ದೊಡ್ಡತನ," ಎಂದರು.
Breaking; ಹಾಸನ ಮಾತ್ರವಲ್ಲ ಕೊಡಗಿನಲ್ಲೂ ಕಂಪಿಸಿದ ಭೂಮಿ
ಮೋದಿ ಹೇಳಿದ್ದು ಹಾಸ್ಯಾಸ್ಪದ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಯೋಜನೆಯನ್ನು ಪ್ರಧಾನಿ ಮೋದಿ ಅವರು ತಾವು ಜಾರಿಗೆ ತಂದಿರುವ ಯೋಜನೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ನಾನು ಮುಖ್ಯಮಂತ್ರಿ ಆಗಿದ್ದಾಗ ಅಂದು ರೈಲ್ವೆ ಸಚಿವರಾಗಿದ್ದ ಪಿಯೂಷ್ ಗೋಯಲ್ ಭೇಟಿ ಮಾಡಲಾಗಿದ್ದು, ಇದರ ನಿಜವಾದ ಚಿಂತಕರು ದೇವೇಗೌಡರು. ಅವರು ಪ್ರಧಾನಿ ಆಗಿದ್ದಾಗಲೇ ಈ ಯೋಜನೆ ಬಗ್ಗೆ ಕನಸು ಕಂಡಿದ್ದರು. ಅಷ್ಟರಲ್ಲಿ ಅವರ ಸರ್ಕಾರ ಹೋಯಿತು. ನನ್ನ ಸರ್ಕಾರದ ಅವಧಿಯಲ್ಲಿ ಇದಕ್ಕೆ ಮರು ಚಾಲನೆ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆದಾಗ ಪಿಯೂಷ್ ಗೋಯಲ್, ಕೃಷ್ಣಾದಲ್ಲಿ ಈ ಬಗ್ಗೆ ನನ್ನ ಜೊತೆ ಸಭೆ ಕೂಡ ಮಾಡಿದ್ರು. ಅಂದು ಅವರು ನನಗೆ ಮುಂದಿನ ಬಜೆಟ್ನಲ್ಲಿ ಹಣ ಇಟ್ಟು ಮೋದಿ ಕರೆಸಿ ಉದ್ಘಾಟನೆ ಮಾಡುವ ಭರವಸೆ ನೀಡಿದ್ದರು. ಆದರೂ ಮೂರು ವರ್ಷ ನೆನೆಗುದಿಗೆ ಬಿದ್ದಿತ್ತು. ಇದೀಗ ಚಾಲನೆ ನೀಡಿದ್ದಾರೆ ಅಷ್ಟೇ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕೇವಲ ಮೋದಿಯವರ ಕೊಡುಗೆ ಮಾತ್ರ ಇದೆಯಾ?
ಬ್ರಿಟಿಷ್ ಅಧಿಕಾರದಲ್ಲಿ ದೇಶವನ್ನು ಒಡೆಯುವ ಕೆಲಸವಾಯಿತು. ಅವತ್ತು ಅನೇಕರು ಹೋರಾಟಕ್ಕೆ ಪ್ರಾಣ ಬಿಟ್ಟಿದ್ದಾರೆ. ಸ್ವಾತಂತ್ರ್ಯದ ಸಂದರ್ಭದ ದಿನದಿಂದ ಇಲ್ಲಿಯವರೆಗೆ ಹಲವಾರು ನಾಯಕರ ತೀರ್ಮಾನದಿಂದ ದೇಶ ಪ್ರಗತಿ ಕಂಡಿದೆ. ಹಲವಾರು ನಾಯಕರು ಹಲವಾರು ಕೊಡುಗೆ ಕೊಟ್ಟಿದ್ದಾರೆ. ಇಂದು ಮೋದಿ ಎಲ್ಲವೂ ತನ್ನಿಂದಲೇ ಆಗುತ್ತಿದೆ ಎನ್ನುತ್ತಿದ್ದಾರೆ. ಇದು ಉದ್ಧಟತನದ ಪರಮಾವಧಿ ಎಂದು ಹೆಚ್ಡಿಕೆ ಕಿಡಿಕಾರಿದರು.
ನೆಹರು ಅವತ್ತಿನ ಕೃಷಿ, ಕೈಗಾರಿಕೆಗೆ ಹಲವಾರು ಕೊಡುಗೆ ಕೊಟ್ಟಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ 33 ಸಾವಿರ ಕೋಟಿ ಅನುದಾನದ ಕಾಮಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದೇವೆ ಎಂದು ಪ್ರಧಾನಿ ಭಾಷಣ ಮಾಡಿದ್ದಾರೆ. ಇದರಲ್ಲಿ ಕೇವಲ ಮೋದಿಯವರ ಕೊಡುಗೆ ಮಾತ್ರ ಇದೆಯಾ? ಹಿಂದೆ ಇದ್ದ ಸರ್ಕಾರಗಳು ಹಾಕಿದ್ದ ಬೇಸ್ಗೆ ಇಂದು ಶಂಕುಸ್ಥಾಪನೆ ಮಾಡಿದ್ದಾರೆ. ಸಬ್ ಅರ್ಬನ್ ರೈಲ್ವೆ ವಿಚಾರದ ಬಗ್ಗೆ 40 ವರ್ಷ ಸಾಧನೆ ಮಾಡಿದ್ದೇವೆ ಎನ್ನುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಇದು ಪ್ರಜಾಪ್ರಭುತ್ವವಾ?
ಕರ್ನಾಟಕದಲ್ಲಿ ಮುಂದಿನ 11 ತಿಂಗಳಲ್ಲಿ ಚುನಾವಣೆ ಇರುವುದರಿಂದ ಇನ್ನು ಹನ್ನೊಂದು ಬಾರಿ ಮೋದಿ ರಾಜ್ಯಕ್ಕೆ ಬಂದು ಹೋಗಬಹುದು. ಕರ್ನಾಟಕಕ್ಕೆ ಕೋವಿಡ್ ಸಂದರ್ಭದಲ್ಲಿ ಸಂಕಷ್ಟ ಬಂದಾಗ ಇಲ್ಲಿಗೆ ಬರಲಿಲ್ಲ. ಜನರು ಎಲ್ಲವನ್ನೂ ಯೋಚಿಸಿ ತೀರ್ಮಾನ ಕೈಗೊಳ್ಳಬೇಕು. ಮೋದಿ ಬಂದುಹೋಗಿದ್ದಕ್ಕೆ 32 ಕೋಟಿ ರೂಪಾಯಿ ಖರ್ಚಾಗಿದೆ ಎನ್ನುತ್ತಿದ್ದಾರೆ. ಈ ಹಣದಿಂದ ಒಂದು ಗ್ರಾಮ ಪಂಚಾಯಿತಿಯನ್ನೇ ಉದ್ಧಾರ ಮಾಡಬಹುದಿತ್ತು ಎಂದು ಹೇಳಿದರು. ಪ್ರತಿಪಕ್ಷಗಳನ್ನು ಟೀಕೆ ಮಾಡುವ ನಿಮ್ಮ ಜಾಯಮಾನವನ್ನು ಮೊದಲು ನಿಲ್ಲಿಸಿ. ಪ್ರತಿಯೊಂದು ಸರ್ಕಾರ ಬಂದಾಗಲೂ ಅವರ ಜವಾಬ್ದಾರಿ ತೋರುತ್ತವೆ. ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಮಾಡುತ್ತಿದ್ದೀರಲ್ಲ ಇದು ಪ್ರಜಾಪ್ರಭುತ್ವವಾ? ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ? ರೈತರ ಬದುಕು ಕಳೆದ ಎಂಟು ವರ್ಷಗಳಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ ಎಂದು ಟೀಕಿಸಿದರು.
ಎಲ್ಲಾ ದಾಖಲಾತಿಗಳೂ ಇ.ಡಿ ಬಳಿಯೇ ಇವೆ
ರಾಹುಲ್ ಗಾಂಧಿ ವಿಚಾರದ ಇ.ಡಿ. ವಿಚಾರಕ್ಕೆ ನಾನು ಹೆಚ್ಚು ಪ್ರತಿಕ್ರಿಯಿಸೋದಿಲ್ಲ. ರಾಹುಲ್ ಗಾಂಧಿ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ನಿರಂತರ ವಿಚಾರಣೆಗೆ ಕರೆಯುತ್ತಿದ್ದಾರೆ. ವಿಚಾರಣೆ ಮಾಡಲು ಐದು ದಿನಗಳು ಬೇಕಾ? ಎಲ್ಲಾ ದಾಖಲಾತಿಗಳೂ ಇ.ಡಿ ಬಳಿಯೇ ಇವೆ. ಅರ್ಧಗಂಟೆಯಲ್ಲೇ ಎಲ್ಲಾ ವಿಚಾರಣೆ ನಡೆಸಬಹುದು. ಸುಮ್ಮನೆ ಹರಾಸ್ಮೆಂಟ್ ಮಾಡಲು ಈ ರೀತಿ ವಿಚಾರಣೆ ನಡೆಸುತ್ತಿದ್ದಾರೆ. ಯಾರೋ ಸುಬ್ರಮಣ್ಯಂ ಸ್ವಾಮಿ ದೂರು ನೀಡಿದ್ರು ಅಂತಾ ತನಿಖೆ ಆರಂಭಿಸಿದರು. . ಕರ್ನಾಟಕದಲ್ಲಿ ಕೆಂಪಣ್ಣ ಪ್ರಧಾನಿಗೆ 40 ಪರ್ಸೆಂಟ್ ಕಮಿಷನ್ ಬಗ್ಗೆ ಪತ್ರ ಬರೆದಿದ್ದರು. ಈ ಬಗ್ಗೆ ಯಾಕೆ ಇಲ್ಲಿಯವರೆಗೆ ತನಿಖೆ ನಡೆಸಲಿಲ್ಲ ಎಂದು ಕುಮಾರಸ್ವಾಮಿ ಕೆಂಡಮಂಡಲವಾದರು.
ಪಠ್ಯಕ್ರಮ ವಿಚಾರವಾಗಿ ದೇವೇಗೌಡರು ಪತ್ರ ಬರೆದಿದ್ದಾರೆ. ಈ ಬಗ್ಗೆ ಬೊಮ್ಮಾಯಿಯವರೂ ಸಭೆ ಕರೆಯುವುದಾಗಿ ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಿಮೋಟ್ ಕಂಟ್ರೋಲ್ ಸಿಎಂ ಆಗಿದ್ದಾರೆ. ಎಲ್ಲವೂ ಕೇಶವಕೃಪದಲ್ಲೇ ತೀರ್ಮಾನವಾಗುತ್ತದೆ ಎಂದು ಹೆಚ್ಡಿಕೆ ಆರೋಪಿಸಿದರು.
ಇದೇ ವೇಳೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್, ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು.
Recommended Video