ಹಾಸನಾಂಬ ದರ್ಶನಕ್ಕೆ ತೆರೆ : 2.64 ಕೋಟಿ ಹುಂಡಿ ಕಾಣಿಕೆ ಸಂಗ್ರಹ
ಹಾಸನ, ನವೆಂಬರ್ 11 : ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಅಧಿಕೃತ ತೆರೆ ಬಿದ್ದಿದೆ. ನವೆಂಬರ್ 9ರಂದು ಮಧ್ಯಾಹ್ನ 1.18ಕ್ಕೆ ದೇವಾಲಯದ ಬಾಗಿಲುನ್ನು ಮುಚ್ಚಲಾಗಿದೆ. ಈ ಬಾರಿ 2.64 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.
ಈ ವರ್ಷ ನವೆಂಬರ್ 1 ರಂದು ದೇವಾಲಯದ ಬಾಗಿಲನ್ನು ತೆರೆಯಲಾಗಿತ್ತು. ನವೆಂಬರ್ 9ರಂದು ದೇವಾಲಯದ ಬಾಗಿಲಿಗೆ ಬೀಗ ಹಾಕಲಾಯಿತು. ನಂತರ ಜಿಲ್ಲಾಡಳಿತ ದೇವಾಲಯದ ಹುಂಡಿ ಕಾಣಿಕೆಯ ಹಣವನ್ನು ಎಣಿಕೆ ಮಾಡಿತು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್. ಪ್ರಕಾಶ್ ಗೌಡ, ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಅವರ ಸಮ್ಮುಖದಲ್ಲಿ ಹಾಸನಾಂಬಾ ದೇವಾಲಯದ ಬಾಗಿಲಿಗೆ ಬೀಗ ಹಾಕಲಾಯಿತು.
ವರ್ಷಕ್ಕೆ ಒಮ್ಮೆ ಮಾತ್ರ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗತ್ತದೆ. 2019ರಲ್ಲಿ ಅಕ್ಟೋಬರ್ 17 ರಿಂದ ಅಕ್ಟೋಬರ್ 29 ರವರೆಗೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಎಲ್ಲರಿಗೂ ಅಭಿನಂದನೆ
ದೇವಾಲಯದ ಬಾಗಿಲು ಮುಚ್ಚಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, 'ಈ ವರ್ಷವೂ ಹಾಸನಾಂಬೆ ದರ್ಶನೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ತೆರಳಿದ್ದಾರೆ. ಯಾವುದೇ ಅಹಿತಕರ ಘಟನೆಗಳಿಲ್ಲದಂತೆ ಶಾಂತಿಯುತವಾಗಿ ನಡೆದಿದ್ದು ಇದಕ್ಕೆ ಸಹಕರಿಸಿದ ಎಲ್ಲಾರಿಗೂ ಅಭಿನಂದನೆ ಸಲ್ಲಿಸುವುದಾಗಿ' ಹೇಳಿದರು.

ಹುಂಡಿ ಹಣ ಏಣಿಕೆ
ನವೆಂಬರ್ 9ರಂದು ದೇವಾಲಯದ ಬಾಗಿಲು ಮುಚ್ಚುವ ಜೊತೆಗೆ ಲಕ್ಷಾಂತರ ಭಕ್ತರು ಸಲ್ಲಿಸಿರುವ ಹುಂಡಿ ಕಾಣಿಕೆಯ ಏಣಿಕೆ ಕಾರ್ಯ ಕೂಡ ನಡೆಯಿತು. ದೇವಾಲಯದ ಆಡಳಿತಾಧಿಕಾರಿ ಹೆಚ್.ಎಲ್.ನಾಗರಾಜ್ ಅವರ ನೇತೃತ್ವದಲ್ಲಿ ಹಣ ಏಣಿಕೆ ಕಾರ್ಯ ನಡೆಯಿತು. 2.64 ಕೋಟಿ ಹುಂಡಿ ಕಾಣಿಕೆ ಸಂಗ್ರಹವಾಗಿತ್ತು.

ಈ ಬಾರಿ ಕಡಿಮೆ ಕಾಣಿಕೆ
ವರ್ಷದಿಂದ ವರ್ಷಕ್ಕೆ ಹಾಸನಾಂಬೆ ದೇವರ ಕಾಣಿಕೆ ಹುಂಡಿ ಹಣ ಸಂಗ್ರಹ ಹೆಚ್ಚಳವಾಗುತ್ತಿದೆ.
* 2013 1.23 ಕೋಟಿ
* 2014 1.27 ಕೋಟಿ
* 2015 1.16 ಕೋಟಿ
* 2016 2.67 ಕೋಟಿ

ಯಾವುದರಿಂದ ಎಷ್ಟು ಆದಾಯ?
ಈ ವರ್ಷ 1 ಸಾವಿರ ರೂ. ಪಾವತಿ ಮಾಡಿ ನೇರ ದರ್ಶನ ಪಡೆದವರಿಂದ 89,78,400 ರೂ.ಗಳು, 300 ರೂ. ಪ್ರವೇಶದಿಂದ 53,78,400 ರೂ.ಗಳು, ಲಾಡು ಮಾರಾಟದಿಂದ 13,39,440 ರೂ.ಗಳು, ಭಕ್ತರು ದೇವರಿಗೆ ಕೊಟ್ಟ ಸೀರೆ ಹರಾಜಿನಿಂದ 56,200 ರೂ.ಗಳು ಸೇರಿ 1.57 ಕೋಟಿ ರೂ. ಹಣ ಸಂಗ್ರವಾಗಿದೆ ಎಂದು ಡಾ.ನಾಗರಾಜ್ ಮಾಹಿತಿ ನೀಡಿದ್ದಾರೆ.












Click it and Unblock the Notifications