ಅಸ್ಸಾಂ ಪ್ರವಾಹ: 48 ಲಕ್ಷ ಜನ, 33 ಲಕ್ಷ ಪ್ರಾಣಿಗಳ ಮೇಲೆ ಪರಿಣಾಮ
ಗುವಾಹಟಿ, ಜೂನ್ 21: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳು ಮತ್ತು ಅದರ ಉಪನದಿಗಳ ಪ್ರವಾಹದಿಂದಾಗಿ ಈಶಾನ್ಯ ರಾಜ್ಯದಲ್ಲಿ ಸುಮಾರು 48 ಲಕ್ಷ ಜನರು ತೊಂದರೆಗೀಡಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತನ್ನ ಸಿಬ್ಬಂದಿಯನ್ನು ಅಸ್ಸಾಂನ ಬರಾಕ್ ಕಣಿವೆಯಲ್ಲಿರುವ ಕ್ಯಾಚಾರ್ಗೆ ಧಾವಿಸಿದೆ. ಬರಾಕ್ ಕಣಿವೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಭುವನೇಶ್ವರದಿಂದ ಎನ್ಡಿಆರ್ಎಫ್ನ ನಾಲ್ಕು ಘಟಕಗಳನ್ನು ಒಟ್ಟು 105 ಸಿಬ್ಬಂದಿಗಳೊಂದಿಗೆ ಸಿಲ್ಚಾರ್ಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಕಳೆದ ವಾರದಿಂದ ನಿರಂತರ ಮಳೆಯಿಂದ ವಿನಾಶಕಾರಿ ಪ್ರವಾಹ ಉಂಟುಮಾಡಿದೆ. ಅಸ್ಸಾಂ ರಾಜ್ಯದ 36 ಜಿಲ್ಲೆಗಳ ಪೈಕಿ 32 ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಅಧಿಕಾರಿಗಳ ಪ್ರಕಾರ ಕಳೆದ 24 ಗಂಟೆಯಲ್ಲಿ 11 ಮಂದಿ ನಾಪತ್ತೆಯಾಗಿದ್ದಾರೆ.
ಈ ವರ್ಷ ಅಸ್ಸಾಂನಲ್ಲಿ ಎರಡನೇ ಬಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜೂನ್ 14 ರಿಂದ ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ 44 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ನಿರಾಶ್ರಿತರಾದ ಲಕ್ಷಾಂತರ ಮಂದಿ
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ವರದಿ ಬಿಡುಗಡೆ ಮಾಡಿದೆ. ರಾಜ್ಯದ 449 ಹಳ್ಳಿಗಳಲ್ಲಿ 2,07,143 ಜನಸಂಖ್ಯೆ ಪ್ರವಾಹದಿಂದಾಗಿ ಹಾನಿಗೊಳಗಾಗಿದೆ ಎಂದು ಹೇಳಿದೆ. ಕರೀಂಗಂಜ್ನ 305 ಹಳ್ಳಿಗಳಲ್ಲಿ 1,33,865 ಜನಸಂಖ್ಯೆ ಇದೆ.
ರಾಜ್ಯದಾದ್ಯಂತ ಒಟ್ಟು 5,424 ಗ್ರಾಮಗಳು ಹೆಚ್ಚುತ್ತಿರುವ ನೀರಿನಿಂದ ಹಾನಿಗೊಳಗಾಗಿದ್ದು, 2,31,819 ಜನರು 810 ಪರಿಹಾರ ಶಿಬಿರಗಳಿಗೆ ತೆರಳಿದ್ದಾರೆ. ಕಳೆದ 24 ಗಂಟೆಗಳಲ್ಲಿ 11,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ.

ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ
ಪ್ರವಾಹದಿಂದ ಒಟ್ಟು 1,13,485.37 ಹೆಕ್ಟೇರ್ ಬೆಳೆ ಪ್ರದೇಶದ ಮೇಲೆ ಪರಿಣಾಮ ಬೀರಿದೆ ಎಂದು ಬುಲೆಟಿನ್ ಹೇಳಿದೆ. ಇದಲ್ಲದೆ, ಪ್ರವಾಹವು ಮನುಷ್ಯರ ಮೇಲಷ್ಟೆ ಅಲ್ಲದೆ 33,84,326 ಪ್ರಾಣಿಗಳ ಮೇಲೂ ಪರಿಣಾಮ ಬೀರಿದೆ. ರಾಜ್ಯಾದ್ಯಂತ 5,232 ಪ್ರಾಣಿಗಳು ಕೊಚ್ಚಿಹೋಗಿವೆ.
ರಾಜ್ಯ ಸರ್ಕಾರ ತೆರೆದಿರುವ 615 ತಾತ್ಕಾಲಿಕ ವಿತರಣಾ ಕೇಂದ್ರಗಳು ಮತ್ತು ಪಾಯಿಂಟ್ಗಳ ಮೂಲಕ ಪ್ರವಾಹ ಶೆಲ್ಟರ್ಗಳಿಗೆ ಸ್ಥಳಾಂತರಗೊಳ್ಳದವರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ.

ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಗಳು
ನಿಮತಿಘಾಟ್, ತೇಜ್ಪುರ್, ಗುವಾಹಟಿ, ಕಾಮ್ರೂಪ್, ಗೋಲ್ಪಾರಾ ಮತ್ತು ಧುಬ್ರಿಯಲ್ಲಿ ಬ್ರಹ್ಮಪುತ್ರ ನದಿಯು ತನ್ನ ಹೆಚ್ಚಿನ ಪ್ರವಾಹದ ಮಟ್ಟದಿಂದ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಮಾಹಿತಿ ನೀಡಿದೆ.
ನಾಗಾಂವ್ ಜಿಲ್ಲೆಯ ಕಂಪುರದಲ್ಲಿ ಕೊಪಿಲಿ ನದಿಯು ತನ್ನ ಹೆಚ್ಚಿನ ಪ್ರವಾಹದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದೆ ಮತ್ತು ಪುತಿಮರಿ, ಪಗ್ಲಾಡಿಯಾ, ಬೇಕಿ ಬರಾಕ್ ಮತ್ತು ಕುಶಿಯಾರಾ ಕೂಡ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.

ಹಲವು ಪ್ರದೇಶಗಳಲ್ಲಿ ಭೂ ಕುಸಿತ
ಬಾರ್ಪೇಟಾ, ಕ್ಯಾಚಾರ್, ದರ್ರಾಂಗ್, ಗೋಲ್ಪಾರಾ, ಕಮ್ರೂಪ್ (ಮೆಟ್ರೋ) ಮತ್ತು ಕರೀಂಗಂಜ್ ಸೇರಿದಂತೆ ನಗರ ಪ್ರದೇಶಗಳಲ್ಲಿ ಪ್ರವಾಹ ವರದಿಯಾಗಿದೆ. ಕಮ್ರೂಪ್ ಮತ್ತು ಕರೀಂಗಂಜ್ನಲ್ಲಿ ಭೂಕುಸಿತವಾಗಿರುವ ಬಗ್ಗೆ ವರದಿಯಾಗಿದೆ.
ಪ್ರವಾಹದ ದೃಷ್ಟಿಯಿಂದ, ಈಶಾನ್ಯ ಫ್ರಾಂಟಿಯರ್ ರೈಲ್ವೇಸ್ ಹಲವಾರು ರೈಲುಗಳನ್ನು ರದ್ದುಗೊಳಿಸಿದೆ, ಅಲ್ಪಾವಧಿಗೆ ಕೊನೆಗೊಳಿಸಿದೆ ಅಥವಾ ಮಾರ್ಗ ಬದಲಾವಣೆ ಮಾಡಿದೆ. ರಂಗಿಯಾ ವಿಭಾಗದ ಲುಮ್ಡಿಂಗ್ ಮತ್ತು ಹರಿಸಿಂಗ-ತಂಗ್ಲಾ ವಿಭಾಗದ ಚಾಪರ್ಮುಖ್-ಕಂಪೂರ್ ಮತ್ತು ಚಪರ್ಮುಖ್-ಸೆಂಚೋವಾ ವಿಭಾಗಗಳಲ್ಲಿ ಪ್ರವಾಹದಿಂದಾಗಿ ರೈಲ್ವೆ ಹಳಿಗಳು ಉಂಟಾದ ಹಾನಿಯಿಂದ ರೈಲುಗಳ ಓಡಾಟದಲ್ಲಿ ವ್ಯತ್ಯಾಸವಾಗಿದೆ.












Click it and Unblock the Notifications