ಅಸ್ವಸ್ಥಗೊಂಡ ಕಾರ್ಯಕರ್ತನನ್ನು ನೋಡಿ ಭಾಷಣ ನಿಲ್ಲಿಸಿದ ಪ್ರಧಾನಿ
ಗುವಾಹಟಿ, ಏಪ್ರಿಲ್ 3: ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಕಾರ್ಯಕರ್ತರೊಬ್ಬರು ಅಸ್ವಸ್ಥರಾದ ಕಾರಣ ಭಾಷಣವನ್ನು ಕೆಲವು ಸಮಯದವರೆಗೆ ಮೊಟಕುಗೊಳಿಸಿದರು. ಸಮಾವೇಶದ ನಡುವೆ ಬಿಜೆಪಿ ಕಾರ್ಯಕರ್ತರೊಬ್ಬರು ನಿರ್ಜಲೀಕರಣದಿಂದ ಅಸ್ವಸ್ಥರಾದರು. ಇದನ್ನು ಗಮನಿಸಿದ ಮೋದಿ, ಭಾಷಣವನ್ನು ಮಧ್ಯದಲ್ಲಿಯೇ ನಿಲ್ಲಿಸಿದರು. ಆ ಕಾರ್ಯಕರ್ತರ ಆರೋಗ್ಯ ವಿಚಾರಿಸುವಂತೆ ತಮ್ಮ ಜತೆ ಇದ್ದ ವೈದ್ಯಕೀಯ ತಂಡಕ್ಕೆ ಮೋದಿ ಸೂಚಿಸಿದರು.
'ಪಿಎಂಒ ವೈದ್ಯಕೀಯ ತಂಡ, ನಿರ್ಜಲೀಕರಣದಿಂದ ಸಮಸ್ಯೆ ಎದುರಿಸುತ್ತಿರುವ ಆ ಕಾರ್ಯಕರ್ತನನ್ನು ನೋಡಿ. ಕೂಡಲೇ ಆತನಿಗೆ ಸಹಾಯ ಮಾಡಿ' ಎಂದು ತಮ್ಮ ಜತೆ ಬಂದಿದ್ದ ವೈದ್ಯರ ತಂಡಕ್ಕೆ ಸೂಚನೆ ನೀಡಿದರು.
ಶಿಷ್ಟಾಚಾರದಂತೆ ನಾಲ್ವರು ವೈದ್ಯಕೀಯ ಪರಿಣತರ ತಂಡ ಪ್ರಧಾನಿಯ ಜತೆಗೆ ಪ್ರಯಾಣಿಸುತ್ತದೆ. ಈ ತಂಡದಲ್ಲಿ ಫಿಸಿಷಿಯನ್, ಪ್ಯಾರಾಮೆಡಿಕ್, ಸರ್ಜನ್ ಹಾಗೂ ತುರ್ತು ಆರೈಕೆ ತಜ್ಞರು ಇರುತ್ತಾರೆ.

ಬಂದೂಕು ಕೆಳಗಿಟ್ಟು ಬನ್ನಿ:
ಮೂರನೇ ಹಾಗೂ ಕೊನೆಯ ಸುತ್ತಿನ ಚುನಾವಣೆಯ ಪ್ರಚಾರ ನಡೆಸುತ್ತಿರುವ ಪ್ರಧಾನಿ, ಹಿಂಸೆಯ ಹಾದಿ ಹಿಡಿದಿರುವ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಮುಖ್ಯವಾಹಿನಿಗೆ ಬರುವಂತೆ ಮನವಿ ಮಾಡಿದರು. ಶಾಂತಿಯುತ ಮತ್ತು ಆತ್ಮನಿರ್ಭರ ಅಸ್ಸಾಂ ನಿರ್ಮಾಣಕ್ಕಾಗಿ ಈ ಕೆಲಸ ಮಾಡುವಂತೆ ಅವರು ತುಮಲ್ಪುರದಲ್ಲಿ ನಡೆದ ಸಭೆಯಲ್ಲಿ ಕೋರಿದರು.
'ನಿಮ್ಮ ಮಕ್ಕಳು ಬಂದೂಕುಗಳನ್ನು ಸಾಗಿಸುವ ಸಂದರ್ಭ ಬರುವುದಿಲ್ಲ, ಅವರು ಕಾಡುಗಳಲ್ಲಿ ಅಲೆದು ತಮ್ಮ ಜೀವನ ಕಳೆಯಬೇಕಿಲ್ಲ, ಯಾರದ್ದೋ ಗುಂಡಿಗೆ ಅವರು ಬಲಿಯಾಗಬೇಕಿಲ್ಲ ಎಂದು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಭರವಸೆ ನೀಡುತ್ತೇನೆ. ಇದು ಎನ್ಡಿಎ ಸರ್ಕಾರದ ಬದ್ಧತೆ' ಎಂದರು.












Click it and Unblock the Notifications