ಅಸ್ವಸ್ಥಗೊಂಡ ಕಾರ್ಯಕರ್ತನನ್ನು ನೋಡಿ ಭಾಷಣ ನಿಲ್ಲಿಸಿದ ಪ್ರಧಾನಿ
ಗುವಾಹಟಿ, ಏಪ್ರಿಲ್ 3: ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಕಾರ್ಯಕರ್ತರೊಬ್ಬರು ಅಸ್ವಸ್ಥರಾದ ಕಾರಣ ಭಾಷಣವನ್ನು ಕೆಲವು ಸಮಯದವರೆಗೆ ಮೊಟಕುಗೊಳಿಸಿದರು. ಸಮಾವೇಶದ ನಡುವೆ ಬಿಜೆಪಿ ಕಾರ್ಯಕರ್ತರೊಬ್ಬರು ನಿರ್ಜಲೀಕರಣದಿಂದ ಅಸ್ವಸ್ಥರಾದರು. ಇದನ್ನು ಗಮನಿಸಿದ ಮೋದಿ, ಭಾಷಣವನ್ನು ಮಧ್ಯದಲ್ಲಿಯೇ ನಿಲ್ಲಿಸಿದರು. ಆ ಕಾರ್ಯಕರ್ತರ ಆರೋಗ್ಯ ವಿಚಾರಿಸುವಂತೆ ತಮ್ಮ ಜತೆ ಇದ್ದ ವೈದ್ಯಕೀಯ ತಂಡಕ್ಕೆ ಮೋದಿ ಸೂಚಿಸಿದರು.
'ಪಿಎಂಒ ವೈದ್ಯಕೀಯ ತಂಡ, ನಿರ್ಜಲೀಕರಣದಿಂದ ಸಮಸ್ಯೆ ಎದುರಿಸುತ್ತಿರುವ ಆ ಕಾರ್ಯಕರ್ತನನ್ನು ನೋಡಿ. ಕೂಡಲೇ ಆತನಿಗೆ ಸಹಾಯ ಮಾಡಿ' ಎಂದು ತಮ್ಮ ಜತೆ ಬಂದಿದ್ದ ವೈದ್ಯರ ತಂಡಕ್ಕೆ ಸೂಚನೆ ನೀಡಿದರು.
ಜಾತ್ಯತೀತತೆ ಹಾಗೂ ಕೋಮುವಾದದ ಆಟ ದೇಶಕ್ಕೆ ಹಾನಿ ಮಾಡಿದೆ: ಮೋದಿ
ಶಿಷ್ಟಾಚಾರದಂತೆ ನಾಲ್ವರು ವೈದ್ಯಕೀಯ ಪರಿಣತರ ತಂಡ ಪ್ರಧಾನಿಯ ಜತೆಗೆ ಪ್ರಯಾಣಿಸುತ್ತದೆ. ಈ ತಂಡದಲ್ಲಿ ಫಿಸಿಷಿಯನ್, ಪ್ಯಾರಾಮೆಡಿಕ್, ಸರ್ಜನ್ ಹಾಗೂ ತುರ್ತು ಆರೈಕೆ ತಜ್ಞರು ಇರುತ್ತಾರೆ.
ಬಂದೂಕು ಕೆಳಗಿಟ್ಟು ಬನ್ನಿ:
ಮೂರನೇ ಹಾಗೂ ಕೊನೆಯ ಸುತ್ತಿನ ಚುನಾವಣೆಯ ಪ್ರಚಾರ ನಡೆಸುತ್ತಿರುವ ಪ್ರಧಾನಿ, ಹಿಂಸೆಯ ಹಾದಿ ಹಿಡಿದಿರುವ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಮುಖ್ಯವಾಹಿನಿಗೆ ಬರುವಂತೆ ಮನವಿ ಮಾಡಿದರು. ಶಾಂತಿಯುತ ಮತ್ತು ಆತ್ಮನಿರ್ಭರ ಅಸ್ಸಾಂ ನಿರ್ಮಾಣಕ್ಕಾಗಿ ಈ ಕೆಲಸ ಮಾಡುವಂತೆ ಅವರು ತುಮಲ್ಪುರದಲ್ಲಿ ನಡೆದ ಸಭೆಯಲ್ಲಿ ಕೋರಿದರು.
ಮೆಟ್ರೊ ಮ್ಯಾನ್ ಕೇರಳದ ರಾಜಕೀಯ ಬದಲಾಯಿಸುತ್ತಾರೆ; ಮೋದಿ
'ನಿಮ್ಮ ಮಕ್ಕಳು ಬಂದೂಕುಗಳನ್ನು ಸಾಗಿಸುವ ಸಂದರ್ಭ ಬರುವುದಿಲ್ಲ, ಅವರು ಕಾಡುಗಳಲ್ಲಿ ಅಲೆದು ತಮ್ಮ ಜೀವನ ಕಳೆಯಬೇಕಿಲ್ಲ, ಯಾರದ್ದೋ ಗುಂಡಿಗೆ ಅವರು ಬಲಿಯಾಗಬೇಕಿಲ್ಲ ಎಂದು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಭರವಸೆ ನೀಡುತ್ತೇನೆ. ಇದು ಎನ್ಡಿಎ ಸರ್ಕಾರದ ಬದ್ಧತೆ' ಎಂದರು.