ಮೋದಿ ಮಹಾರಾಷ್ಟ್ರ ಸರ್ಕಾರ ಉರುಳಿಸಿ ಬಿಡಲಿ; ಗೌರವ್ ಗೊಗೊಯ್
ಗುವಾಹಾಟಿ, ಜೂ. 23: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಹಾಗೂ ಪ್ರಧಾನ ಮಂತ್ರಿ ಮೋದಿ ಬಗ್ಗೆ ಅಸ್ಸಾಂ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಕಿಡಿಕಾರಿದ್ದಾರೆ.
ದೇಶಾದ್ಯಂತ ಈಗ ಮಹಾರಾಷ್ಟ್ರ ರಾಜ್ಯದ ಬಗ್ಗೆ ರಾಜಕೀಯ ಕಣ್ಣುಗಳು ಕೇಂದ್ರಿತವಾಗಿವೆ. ಇದು ಸಾಮಾನ್ಯವಾಗಿ ಶ್ರೀಸಮಾನ್ಯರ ಕುತೂಹಲಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮಹಾರಾಷ್ಟ್ರದ ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಗುತ್ತಿದೆ. ಇದು ಇನ್ನೊಂದೆಡೆ ಇತರ ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಸ್ಸಾಂನ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, "ಪಿಎಂ ಮೋದಿ ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪೀಡಿತ ಅಸ್ಸಾಂಗೆ ಭೇಟಿ ನೀಡಬೇಕು" ಎಂದು ಹೇಳಿದ್ದಾರೆ.
"ಬಿಜೆಪಿ ಅಧಿಕಾರಕ್ಕಾಗಿ ಕುರುಡಾಗಿದೆ. ದೇಶದಲ್ಲಿ ಬಿಕ್ಕಟ್ಟು ಏನಾದರೂ ಇದ್ದರೆ ಅದು ಅಸ್ಸಾಂ ಪ್ರವಾಹ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಆದರೆ, ಅವರು ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವಲ್ಲಿ ನಿರತರಾಗಿದ್ದಾರೆ ಹಾಗೂ ಗುಜರಾತ್ ಚುನಾವಣೆಯಲ್ಲಿ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಬಿಜೆಪಿಗೆ ಅಧಿಕಾರವೇ ಸರ್ವಸ್ವ" ಎಂದು ಟೀಕಿಸಿದರು.
ಅಸ್ಸಾಂನ 34 ಜಿಲ್ಲೆಗಳಲ್ಲಿ 41 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ಮತ್ತು ಭೂಕುಸಿತದ ಪರಿಸ್ಥಿತಿಗಳ ಪ್ರಭಾವದಿಂದ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಬುಧವಾರ ಅಸ್ಸಾಂನ ನಾಗಾಂವ್ ಜಿಲ್ಲೆಯ ಫುಲಗುರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಥಾಪಿಸಲಾದ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಪ್ರದೇಶದ ಪ್ರವಾಹ ಪೀಡಿತ ಜನರನ್ನು ಭೇಟಿ ಮಾಡಿದ್ದರು.

ಪ್ರಮುಖ ರಸ್ತೆಗಳು ಜಲಾವೃತ
ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದ್ದು, ಕುಶಿಯಾರಾ, ಲೊಂಗೈ ಮತ್ತು ಸಿಂಗ್ಲಾ ನದಿಗಳ ನೀರು ಜಿಲ್ಲೆಯ ಹೆಚ್ಚಿನ ಪ್ರದೇಶಗಳನ್ನು ಮುಳುಗಡೆಯಾಗಿ ಜಿಲ್ಲೆಯ 1.34 ಲಕ್ಷಕ್ಕೂ ಹೆಚ್ಚು ಜನರ ಬದುಕಿಗೆ ಕಂಟಕವಾಗಿದೆ. ರಾಜ್ಯದಲ್ಲಿ ಹಲವು ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಅಸ್ಸಾಂನಲ್ಲಿ ಈ ವರ್ಷ ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತದಲ್ಲಿ 82 ಜನರು ಸಾವನ್ನಪ್ಪಿದ್ದಾರೆ.

ದರ್ಂಗ್ನಲ್ಲಿ 4.69 ಲಕ್ಷ ಮಂದಿಗೆ ಸಂಕಷ್ಟ
ಅಸ್ಸಾಂನ ಬಾರ್ಪೇಟಾ ಜಿಲ್ಲೆಯೊಂದರಲ್ಲೇ 12.30 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ನಂತರದಲ್ಲಿ ದರ್ಂಗ್ನಲ್ಲಿ 4.69 ಲಕ್ಷ, ನಾಗಾಂವ್ನಲ್ಲಿ 4.40 ಲಕ್ಷ, ಬಜಾಲಿಯಲ್ಲಿ 3.38 ಲಕ್ಷ, ಧುಬ್ರಿಯಲ್ಲಿ 2.91 ಲಕ್ಷ, ಕಾಮ್ರೂಪ್ನಲ್ಲಿ 2.82 ಲಕ್ಷ, ಗೋಲ್ಪಾರಾದಲ್ಲಿ 2.80 ಲಕ್ಷ, 2.07 ಲಕ್ಷ ಜನರು ಕ್ಯಾಚಾರ್, ನಲ್ಬರಿಯಲ್ಲಿ 1.84 ಲಕ್ಷ, ದಕ್ಷಿಣ ಸಲ್ಮಾರಾದಲ್ಲಿ 1.51 ಲಕ್ಷ, ಬೊಂಗೈಗಾಂವ್ನಲ್ಲಿ 1.46 ಲಕ್ಷ ಮತ್ತು ಕರೀಮ್ಗಂಜ್ ಜಿಲ್ಲೆಯಲ್ಲಿ 1.34 ಲಕ್ಷ ಜನರು ಪ್ರವಾಹದಿಂದ ತತ್ತರಿಸಿದ್ದಾರೆ.

810 ಪರಿಹಾರ ಶಿಬಿರಗಳಲ್ಲಿ 2,31,819 ಜನರಿಗೆ ಆಶ್ರಯ
ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ಸಹ ಪ್ರಕೃತಿ ವಿಕೋಪದಿಂದ ಏಳು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿ ಮಾಡಿದೆ. 2,31,819 ಜನರು ರಾಜ್ಯದ 810 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ವಿಪತ್ತಿನಿಂದಾಗಿ ಒಟ್ಟು 1,13,485.37 ಹೆಕ್ಟೇರ್ ಭೂಮಿ ಹಾನಿಗೊಳಗಾಗಿದೆ. ಎಎಸ್ಡಿಎಂಎ ತನ್ನ ವರದಿಯಲ್ಲಿ ಕನಿಷ್ಠ 11,292 ಜನರನ್ನು ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ. ಸುಮಾರು 2.32 ಲಕ್ಷ ಜನರು ಪ್ರಸ್ತುತ ನಿರಾಶ್ರಿತ ಶಿಬಿರಗಳಲ್ಲಿದ್ದಾರೆ.

ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆ
ಈ ಮಧ್ಯೆ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಗುವಾಹಟಿಯಲ್ಲಿ ಗುರುವಾರ ಬೆಳಗ್ಗೆ ಶಿವಸೇನಾ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಗುಂಪಿಗೆ ಶಿವಸೇನೆಯ ಇನ್ನೂ ಮೂವರು ಶಾಸಕರು ಸೇರ್ಪಡೆಗೊಂಡಿದ್ದು, ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕಳೆದ ರಾತ್ರಿ ಗುವಾಹಟಿಯಲ್ಲಿ ಇನ್ನೂ ನಾಲ್ವರು ಶಾಸಕರು ಶಿಂಧೆ ಅವರನ್ನು ಸೇರಿಕೊಂಡರು. ಇದರೊಂದಿಗೆ ಕಳೆದ 24 ಗಂಟೆಗಳಲ್ಲಿ ಬಂಡಾಯ ಗುಂಪಿಗೆ ಸೇರಿರುವ ಶಾಸಕರ ಸಂಖ್ಯೆ ಏಳಕ್ಕೇರಿದೆ.












Click it and Unblock the Notifications