ಅಸ್ಸಾಂ ಚಹಾ ಕಾರ್ಮಿಕರ ವೇತನ 365 ರೂ.ಗೆ ಹೆಚ್ಚಿಸುವ ಆಶ್ವಾಸನೆ
ಗುವಾಹಟಿ, ಫೆಬ್ರವರಿ.14: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಚಹಾ ತೋಟದ ಕಾರ್ಮಿಕರ ಕೂಲಿಯನ್ನು 167 ರೂಪಾಯಿಯಿಂದ 365 ರೂಪಾಯಿಗೆ ಹೆಚ್ಚಿಸುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಶ್ವಾಸನೆ ನೀಡಿದ್ದಾರೆ.
ಅಸ್ಸಾಂನ ಸಿವಸಾಗರ್ ನಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಕೇವಲ 167 ರೂಪಾಯಿ ಕೂಲಿ ಪಡೆದು ನೀವು ಏನನ್ನು ಖರೀದಿಸುವುದಕ್ಕೆ ಸಾಧ್ಯ. ಚಹಾ ತೋಟದ ಕಾರ್ಮಿಕರ ಕೂಲಿಯನ್ನು 365 ರೂಪಾಯಿಗೆ ಹೆಚ್ಚಿಸುವುದಕ್ಕೆ ನಾನು ಬಯಸುತ್ತೇನೆ. ಚಹಾ ತೋಟಗಳ ಕಾರ್ಮಿಕರ ಕೂಲಿ ಹೆಚ್ಚಳ ಮಾಡಬೇಕು ಎನ್ನುವುದು ದೀರ್ಘಕಾಲದ ಕೂಗಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕಾಂಗ್ರೆಸ್ ಮತ್ತು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ನಡುವಿನ ಪ್ರಾದೇಶಿಕ ಹೊಂದಾಣಿಕೆ ಮತ್ತು ಪ್ರಾದೇಶಿಕ ಪಕ್ಷಗಳಾದ ಅಸೋಮ್ ಜತಿಯ ಪರಿಷತ್ ಮತ್ತು ರೈಜೋರ್ ದಳ ಪಕ್ಷಗಳಿಂದ ಈ ಬಾರಿ ವಿಧಾನಸಭಾ ಚುನಾವಣೆ ಕಠಿಣ ಪೈಪೋಟಿ ನಡೆಯಲಿದೆ.

ಚಹಾ ತೋಟದ ಕಾರ್ಮಿಕರ ಮೇಲೆ ಭವಿಷ್ಯ:
ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಲ್ಲಿ ಚಹಾ ತೋಟದ ಕಾರ್ಮಿಕರೇ ಮೂರನೇ ಒಂದು ಭಾಗದಷ್ಟಿದ್ದಾರೆ. ಕೂಲಿಕಾರ್ಮಿಕರ ಮತಗಳ ಮೇಲೆ ಯಾವ ಪಕ್ಷಕ್ಕೆ ಅಧಿಕಾರ ಸಿಗುತ್ತದೆ ಎಂದು ನಿರ್ಧಾರವಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಕೂಲಿ ಕಾರ್ಮಿಕ ಸಮುದಾಯದ ಮನವೊಲಿಸಲು ಬಿಜೆಪಿಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿತ್ತು.
ಪೌರತ್ವ ತಿದ್ದುಪಡಿ ಕಾಯ್ದೆಗೆ ಅವಕಾಶ ನೀಡಲ್ಲ ಎಂದ ರಾಹುಲ್:
ಅಸ್ಸಾಂನಲ್ಲಿ ವಲಸಿಗರ ಹಾವಳಿ ಹೆಚ್ಚಾಗಿದೆ ಎನ್ನುವ ಬಗ್ಗೆ ಆರೋಪಗಳಿವೆ. ಅದೇನೇ ಇರಲಿ ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ನಾಗರಿಕ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.












Click it and Unblock the Notifications