ಅಸ್ಸಾಂ ಗೋಮಾಂಸ ಸೇವನೆ ನಿಷೇಧ ಮಸೂದೆ ಅಂಗೀಕಾರ: 'ಕಾನೂನು ಕೋಮು ಸಂಘರ್ಷ ತಡೆಯುತ್ತದೆ' ಎಂದ ಸಿಎಂ
ಗುವಾಹಟಿ, ಆ. 14: ಅಸ್ಸಾಂ ವಿಧಾನಸಭೆಯು ಜಾನುವಾರುಗಳ ವಧೆ, ಬಳಕೆ ಮತ್ತು ಸಾಗಾಣಿಕೆಯನ್ನು ನಿಯಂತ್ರಿಸುವ ಗೋ ಹತ್ಯೆ ನಿಷೇಧ ಮಸೂದೆಯನ್ನು ಅಂಗೀಕರಿಸಿದೆ. ಈ ಬೆನ್ನಲ್ಲೇ "ಅಸ್ಸಾಂ ರಾಜ್ಯದಲ್ಲಿ ದನಗಳನ್ನು ರಕ್ಷಿಸುವ ಗೋಮಾಂಸ ಸೇವನೆ ನಿಷೇಧ ಕಾನೂನು ಕೂಡ ಗೋಮಾಂಸ ಸೇವನೆಯ ಮೇಲೆ ಕೇಂದ್ರೀಕೃತ ಘರ್ಷಣೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ," ಎಂದು ಅಸ್ಸಾಂ ಸರ್ಕಾರ ಹೇಳಿದೆ.
"ನಾವು ಈ ಗೋ ಹತ್ಯಾ ನಿಷೇಧ ಮಸೂದೆಯನ್ನು ವಿಧಾನಸಭೆ ಅಧಿವೇಶನದ ಮೊದಲ ದಿನ ಮಂಡಿಸಿದ್ದೇವೆ ಮತ್ತು ಮಧ್ಯಂತರ ಅವಧಿ ಸುಮಾರು 30 ದಿನಗಳು ಇದೆ. ನಾವು ಎಲ್ಲಾ ತಿದ್ದುಪಡಿಗಳನ್ನು ಪರಿಗಣಿಸಲು ಸಿದ್ಧರಿದ್ದೇವೆ. ವಾಸ್ತವವಾಗಿ ಒಂದು-ಎರಡು ತಿದ್ದುಪಡಿಗಳಿವೆ, ಆದಾಗ್ಯೂ, ಪ್ರತಿಪಕ್ಷಗಳು ಸರಿಯಾದ ಸಂಗತಿಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ," ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದರು.
"ನಮ್ಮ ಜಾನುವಾರು ರಕ್ಷಣೆ ಮಾಡುವ ಈ ಮಸೂದೆ ಅಂದಿನ ಕಾಂಗ್ರೆಸ್ ಸರ್ಕಾರದ 1950 ರ ಮಸೂದೆಯ ಸುಧಾರಣೆಯೇ ಹೊರತು ಬೇರೇನಲ್ಲ," ಎಂದು ಕೂಡಾ ಮುಖ್ಯಮಂತ್ರಿ ಬಿಸ್ವಾ ಸ್ಪಷ್ಟಪಡಿಸಿದ್ದಾರೆ. "ಮಸೂದೆಯು ಆರ್ಟಿಕಲ್ 48 ಮತ್ತು ಮಹಾತ್ಮ ಗಾಂಧಿಯವರ ಆಲೋಚನೆಗಳಿಂದ ಪ್ರೇರಿತವಾಗಿದೆ," ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ.

ಅಸ್ಸಾಂ ವಿಧಾನಸಭೆಯು ಜಾನುವಾರುಗಳ ವಧೆ, ಬಳಕೆ ಮತ್ತು ಸಾಗಾಣಿಕೆಯನ್ನು ನಿಯಂತ್ರಿಸುವ ಗೋ ಹತ್ಯೆ ನಿಷೇಧ ಮಸೂದೆಯನ್ನು ಅಂಗೀಕರಿಸಿತು. ಶಾಸನವನ್ನು ಆಯ್ಕೆ ಸಮಿತಿಗೆ ರವಾನಿಸಲು ಅಸ್ಸಾಂ ಸರ್ಕಾರ ನಿರಾಕರಿಸಿದ್ದನ್ನು ವಿರೋಧಿಸಿ ವಿರೋಧ ಪಕ್ಷಗಳು ವಿಧಾನಸಭೆಯಿಂದ ಹೊರ ನಡೆದಿದ್ದು, ಸ್ಪೀಕರ್ ಬಿಸ್ವಜಿತ್ ಡೈಮರಿ ಅಸ್ಸಾಂ ಜಾನುವಾರು ಸಂರಕ್ಷಣಾ ಮಸೂದೆ, 2021 ಅನ್ನು ಅಂಗೀಕರಿಸಲಾಗಿದೆ ಎಂದು ಘೋಷಿಸಿದರು.
"ಇಂದು ಮಸೂದೆಯನ್ನು ಅಂಗೀಕರಿಸಲಾಗಿರುವುದರಿಂದ, ಯಾವುದೇ ದೇವಸ್ಥಾನ ಅಥವಾ ಮಠದ 5 ಕಿಮೀ ವ್ಯಾಪ್ತಿಯಲ್ಲಿ ಜಾನುವಾರು ವಧೆ, ಗೋಮಾಂಸ ಮಾರಾಟ ಮತ್ತು ಸೇವನೆ ನಡೆಯುವುದಿಲ್ಲ. ಗಣನೀಯ ಹಿಂದೂ, ಜೈನ, ಸಿಖ್ ಅಥವಾ ಗೋಮಾಂಸ ತಿನ್ನದ ಇತರ ಸಮುದಾಯದ ಜನರು ವಾಸಿಸುವ ಸ್ಥಳಗಳಲ್ಲಿ, ಗೋಮಾಂಸ ಸೇವಿಸಲು ಸಾಧ್ಯವಿಲ್ಲ," ಎಂದು ಮುಖ್ಯಮಂತ್ರಿ ತಿಳಿಸಿದರು. ಅಸ್ಸಾಂ ರಾಜ್ಯ ಸರ್ಕಾರವು ಒಂದು ಜಿಲ್ಲೆಯ ನಿಯತಾಂಕಗಳನ್ನು ಮೀರಿ ಜಾನುವಾರುಗಳ ಚಲನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಕೂಡಾ ಮುಖ್ಯಮಂತ್ರಿ ತಿಳಿಸಿದರು.
ಕೃಷಿ ಉದ್ದೇಶಕ್ಕಾಗಿ ಜಾನುವಾರುಗಳ ಅಂತರ ಜಿಲ್ಲಾ ಚಲನೆ ಅಗತ್ಯವಿದ್ದರೆ, ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವರದಿಯು ತಿಳಿಸಿದೆ. "ನಾವು ಮಹಾತ್ಮ ಗಾಂಧಿ ಜೀ ಮತ್ತು ಆಹಾರದ ಹಕ್ಕು ಅಥವಾ ಆಹಾರ ಪದ್ಧತಿಯ ಸ್ವಾತಂತ್ರ್ಯ ನೀಡುವ ಆರ್ಟಿಕಲ್ 48 ಅನ್ನು ಅನುಸರಿಸಬೇಕು. ಆದರೆ ಮೂಲಭೂತ ಹಕ್ಕು ಮತ್ತು ನಿರ್ದೇಶನ ತತ್ವಗಳ ನಡುವಿನ ಸಂಘರ್ಷದ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ನಿರ್ದೇಶನ ತತ್ವಗಳು ಮೇಲುಗೈ ಸಾಧಿಸುತ್ತವೆ," ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿವರಿಸಿದರು.
"ಕಳೆದ ಐದು ವರ್ಷಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಕೋಮು ಘರ್ಷಣೆಗಳು ಮೂಲತಃ ಗೋಮಾಂಸದ ಮೇಲೆ ಕೇಂದ್ರೀಕೃತವಾಗಿವೆ. ಈಗ, ಗೋಮಾಂಸ ತಿನ್ನುವ ವ್ಯಕ್ತಿಗೆ ಗೋಮಾಂಸವಲ್ಲದ ಸಮುದಾಯದ 5 ಕಿಮೀ ಒಳಗೆ ಅದನ್ನು ಸೇವಿಸಲು ಅನುಮತಿ ನೀಡದಿದ್ದರೆ ಯಾವುದೇ ಸಂಘರ್ಷ ಇರುವುದಿಲ್ಲ," ಎಂದು ಮುಖ್ಯಮಂತ್ರಿ ಹೇಳಿದರು.
"ಉತ್ತರ ಪ್ರದೇಶದಲ್ಲಿ, ಗೋಮಾಂಸದ ಮೇಲೆ ಸಂಪೂರ್ಣ ನಿಷೇಧವಿದೆ, ಮತ್ತು ಅಸ್ಸಾಂನಲ್ಲಿ ನಾವು ಗೋಮಾಂಸ ಮಾರಾಟವನ್ನು ನಿಯಂತ್ರಿಸಿದ್ದೇವೆ, ಅಸ್ಸಾಂನಲ್ಲಿ ಶೇಕಡ 36 ರಷ್ಟು ಜನರು ಗೋ ಮಾಂಸವನ್ನು ಸೇವಿಸುತ್ತಾರೆ" ಎಂದು ಶರ್ಮಾ ತಿಳಿಸಿದ್ದಾರೆ. ''ಇತರ ಈಶಾನ್ಯ ರಾಜ್ಯಗಳಿಗೆ ಜಾನುವಾರು ಅಥವಾ ಗೋಮಾಂಸದ ಸಾಗಣೆ ಮುಂದುವರಿಯುತ್ತದೆ, ಆದರೆ ಸಂಬಂಧಿತ ರಾಜ್ಯ ಸರ್ಕಾರದ ಅನುಮತಿ ಇರಬೇಕು,'' ಎಂದು ಕೂಡಾ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications