ಪ್ರದ್ಯುಮ್ನ ಹತ್ಯೆ : ಮತ್ತೆ ಕಗ್ಗಂಟಾಗಿರುವ ಪ್ರಕರಣ
ಗುರ್ ಗಾಂವ್, ನವೆಂಬರ್ 15 : "ಕೊಲೆ ಮಾಡಿದ್ದೇನೆಂದು ಒಪ್ಪಿಕೊಳ್ಳದಿದ್ದರೆ ನನ್ನ ಮಗ ಸೇರಿದಂತೆ ನಮ್ಮ ಇಡೀ ಕುಟುಂಬವನ್ನು ಶೂಟ್ ಮಾಡಿ ಕೊಂದು ಹಾಕುವ ಬೆದರಿಕೆ ಸಿಬಿಐ ಅಧಿಕಾರಿಗಳು ಹಾಕಿದ್ದಾರೆ. ಮಗನಿಗೆ ಹೊಡೆದು ಬಡಿದು ಚಿತ್ರಹಿಂಸೆ ಕೊಟ್ಟಿದ್ದಾರೆ. ಬೆದರಿಕೆ ಒಡ್ಡಿದ್ದರಿಂದಲೇ ನನ್ನ ಮಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ!"
ಹೀಗೆಂದು, ಎರಡನೇ ತರಗತಿಯಲ್ಲಿ ಓದುತ್ತಿದ್ದ ಪ್ರದ್ಯುಮ್ನ ಠಾಕೂರ್ ನನ್ನ ಕತ್ತು ಸೀಳಿ ಹತ್ಯೆಗೈದಿರುವ ಆರೋಪ ಎದುರಿಸುತ್ತಿರುವ ರಯನ್ ಇಂಟರ್ನ್ಯಾಷನ್ ಶಾಲೆಯ, ಹದಿನಾರು ವರ್ಷದ ಹನ್ನೊಂದನೇ ತರಗತಿಯ ವಿದ್ಯಾರ್ಥಿಯ ತಂದೆ ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದಾರೆ.
ಪ್ರದ್ಯುಮ್ನ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿವರಗಳು
ನಾನೇ ಪ್ರದ್ಯುಮ್ನನ ಹತ್ಯೆ ಮಾಡಿದ್ದು ಎಂದು ಹನ್ನೊಂದನೇ ತರಗತಿಯ ವಿದ್ಯಾರ್ಥಿ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಒಪ್ಪಿಕೊಂಡ ಎರಡೇ ದಿನದಲ್ಲಿ, ತಾನು ಕೊಲೆ ಮಾಡಿಲ್ಲ, ತನ್ನನ್ನು ಬಲವಂತವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಕೊಲೆ ಆರೋಪಿ ಮಕ್ಕಳ ರಕ್ಷಣಾಧಿಕಾರಿಯ ಮುಂದೆ ಮಾತು ಬದಲಿಸಿದ್ದಾನೆ.
ಪ್ರದ್ಯುಮ್ನ ಹತ್ಯೆ ಪ್ರಕರಣಕ್ಕೆ ಮತ್ತೆ ಹೊಸ ತಿರುವು!
ಇದಕ್ಕೂ ಮೊದಲು, ತಾನು ಪ್ರದ್ಯುಮ್ನನನ್ನು ಕೊಲ್ಲಲು ಏನೇನು ಸಿದ್ಧತೆ ಮಾಡಿಕೊಂಡಿದ್ದೆ, ಯಾವ್ಯಾಯ ಅಂತರ್ಜಾಲ ತಾಣ ಜಾಲಾಡಿದೆ, ಹೇಗೆ ಪ್ರದ್ಯುಮ್ನನನ್ನು ಶೌಚಾಲಯಕ್ಕೆ ಬರಲು ಪುಸಲಾಯಿಸಿದೆ, ಯಾವ ರೀತಿ ಆತನನ್ನು ಕೊಂದೆ ಮತ್ತು ಹೇಗೆ ತೋಟದ ಮಾಲಿಗೆ ಪ್ರದ್ಯುಮ್ನನ ಸಾವಿನ ವಿಷಯ ತಿಳಿಸಿದೆ ಎಂದು ಆರೋಪಿ ಎಳೆಎಳೆಯಾಗಿ ವಿವರಿಸಿದ್ದ.
ದಿನದಿಂದ ದಿನಕ್ಕೆ ಹೊಸ ತಿರುವು
ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆಯುತ್ತ, ಕ್ಲಿಷ್ಟಕರವಾಗುತ್ತಾ ಸಾಗುತ್ತಿದೆ. ಮೊದಲಿಗೆ, ಅನುಮಾನದ ಮೇಲೆ ಮತ್ತು ಸಿಸಿಟಿವಿಯ ಆಧಾರದ ಮೇಲೆ ಬಸ್ಸಿನ ಕಂಡಕ್ಟರ್ ಅಶೋಕ್ ಕುಮಾರ್ ನನ್ನು ಪೊಲೀಸರು ಬಂಧಿಸಿ, ಆತನಿಂದಲೂ ತಾನೇ ಕೊಂದಿರುವುದಾಗಿ ಹೇಳಿಕೆ ಪಡೆದಿದ್ದರು. ಇದೀಗ ಪ್ರದ್ಯುಮ್ನನನ್ನು ಅಶೋಕ್ ಕೊಂದಿರಲಿಕ್ಕಿಲ್ಲ ಎಂಬ ಅಂಶ ಹೊರಬಂದಿದೆ.
ಸಿಬಿಐ ತನಿಖೆಗೆ ಪಟ್ಟುಹಿಡಿದಿದ್ದ ಪ್ರದ್ಯುಮ್ನನ ತಂದೆ
ಇದರಲ್ಲೇನೋ ಭಾನಗಡಿಯಿದೆ ಎಂದು ಪ್ರದ್ಯುಮ್ನನ ತಂದೆ ಸಿಬಿಐ ತನಿಖೆ ಆಗಲೇಬೇಕೆಂದು ಪಟ್ಟು ಹಿಡಿದು ಧರಣಿ ನಡೆಸಿದ್ದರು. ನಂತರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಲಾಗಿತ್ತು. ಸಿಸಿಟಿವಿ ಫುಟೇಜ್ ನ ಕೂಲಂಕಷ ಪರಿಶೀಲನೆಯ ನಂತರ, ಮತ್ತಿತರರ ವಿಚಾರಣೆಯ ನಂತರ ಹನ್ನೊಂದನೇ ತರಗತಿಯ ವಿದ್ಯಾರ್ಥಿಯೇ ಕೊಂದಿರಬಹುದು ಎಂದು ಆತನನ್ನು ಬಂಧಿಸಲಾಗಿದೆ.
ಕಡೆಯ ಘಳಿಗೆಯಲ್ಲಿ ಚಾಕುವಿನಿಂದ ಕತ್ತು ಸೀಳಿದ್ದ
ಸಾಕಷ್ಟು ವಿಚಾರಣೆಯ ನಂತರ, ಪರೀಕ್ಷೆಯನ್ನು ಮತ್ತು ಪೋಷಕರ-ಶಿಕ್ಷಕರ ಭೇಟಿಯನ್ನು ಮುಂದೂಡಿಸುವ ಉದ್ದೇಶದಿಂದ ತಾನೇ ಪ್ರದ್ಯುಮ್ನನನ್ನು ಹತ್ಯೆಗೈದಿದ್ದಾಗಿ ಹನ್ನೊಂದನೇ ತರಗತಿಯ ವಿದ್ಯಾರ್ಥಿ ತನಿಖಾಧಿಕಾರಿಗಳು ಮತ್ತು ತನ್ನ ತಂದೆಯ ಎದುರಿಗೆ ಒಪ್ಪಿಕೊಂಡಿದ್ದ. ಭೀಕರ ಹತ್ಯೆ ಹೇಗೆ ನಡೆಸಿದ್ದು ಎಂಬುದನ್ನೂ ಎಳೆಎಳೆಯಾಗಿ ವಿವರಿಸಿದ್ದ. ವಿಷ ಹಾಕಿ ಕೊಲ್ಲಬೇಕೆಂದುಕೊಂಡವನು ಕಡೆಯ ಘಳಿಗೆಯಲ್ಲಿ ಚಾಕುವಿನಿಂದ ಕತ್ತು ಸೀಳಿದ್ದ.
ಪೊಲೀಸರ ಜೊತೆ ಶಾಲಾಧಿಕಾರಿ ಶಾಮೀಲು?
ಈ ಪ್ರಕರಣವನ್ನು ಹಳ್ಳ ಹಿಡಿಸಲು ರಾಜ್ಯದ ಪೊಲೀಸರು ಯತ್ನಿಸಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಪೊಲೀಸರ ವಿಚಾರಣೆಯನ್ನೂ ಮಾಡುತ್ತಿದ್ದಾರೆ. ಇದರ ಹಿಂದೆ ರಯನ್ ಇಂಟರ್ನ್ಯಾಷನ್ ಶಾಲೆಯ ಅಧಿಕಾರಿಗಳೊಂದಿಗೆ ಪೊಲೀಸರು ಶಾಮೀಲಾಗಿ ಹೀಗೆ ಮಾಡಿರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗಿದೆ. ಇಷ್ಟೊಂದು ಸರಳ ಪ್ರಕರಣವನ್ನು ಪೊಲೀಸರು ಏಕೆ ಹಳ್ಳ ಹಿಡಿಸಲು ಯತ್ನಿಸಿದರು ಎಂಬುದು ಇನ್ನೂ ಚಿದಂಬರ ಪ್ರಶ್ನೆಯಾಗಿಯೇ ಉಳಿದಿದೆ.
ಕುಟುಂಬದ ಸರ್ವನಾಶದ ಬೆದರಿಕೆ
ಅಷ್ಟರಲ್ಲಿಯೇ, ಸಿಬಿಐ ಅಧಿಕಾರಿಗಳು ತನಗೆ ಬಲವಂತವಾಗಿ 'ಕೊಲೆ ಮಾಡಿರುವ' ಹೇಳಿಕೆಯನ್ನು ಪಡೆದಿದ್ದಾರೆ ಎಂದು ಆರೋಪಿ ವಿದ್ಯಾರ್ಥಿ ತನಿಖಾಧಿಕಾರಿಗಳು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾನೆ. ಇದಕ್ಕೆ ಆತನ ತಂದೆ ಕೂಡ ದನಿಗೂಡಿಸಿದ್ದು, ಇಡೀ ಕುಟುಂಬವನ್ನೇ ಸರ್ವನಾಶ ಮಾಡಲು ಸಿಬಿಐ ಅಧಿಕಾರಿಗಳು ಪ್ಲಾನ್ ಹಾಕಿಕೊಂಡಿದ್ದಾರೆ ಎಂದು ದೂರಿದ್ದಾರೆ. ಇದೆಲ್ಲ ಬೆಳವಣಿಗಳಿಂದ ಪ್ರಕರಣ ಕಗ್ಗಂಟಾಗಿ ಕುಳಿತಿದೆ.
ಪ್ರಧಾನಿ ಸಹಾಯ ಕೇಳಲು ಕೂಡ ಸಿದ್ಧ
ನಾನು ನನ್ನ ಮಗನನ್ನು ಬಿಡುಗಡೆ ಮಾಡಿಸಲು ಪ್ರಧಾನಿ ಮಂತ್ರಿ ಸೇರಿದಂತೆ ಯಾರ ಸಹಾಯ ಬೇಕಿದ್ದರೂ ಕೇಳಲು ಸಿದ್ಧನಿದ್ದೇನೆ. ಪ್ರದ್ಯುಮ್ನ ಮೊದಲೇ ಪರಿಚಯವಿದ್ದಿದ್ದರಿಂದ ಆತನ ಜೊತೆ ಶೌಚಾಲಯಕ್ಕೆ ಹೋಗಿದ್ದ. ಆತ ರಕ್ತ ಕಾರಿಕೊಳ್ಳುತ್ತಿರುವುದನ್ನು ನೋಡಿ ಓಡಿಹೋಗಿ ತೋಟದ ಮಾಲಿಗೆ ಮತ್ತು ಶಿಕ್ಷಕರಿಗೆ ವಿಷಯ ತಿಳಿಸಿದ್ದಾನೆ. ಆತ ಖಂಡಿತವಾಗಿಯೂ ಕೊಂದಿಲ್ಲ ಎಂಬುದು ಆರೋಪಿಯ ತಂದೆಯ ಅಭಿಪ್ರಾಯ.