ಅಣ್ಣನ ಕೊಲೆಗೆ ಪ್ರತಿಕಾರ; ಕೋರ್ಟ್ ಕಲಾಪ ಮುಗಿಸಿಕೊಂಡು ಬರುತ್ತಿದ್ದ ಮಹಿಳೆಯ ಕೊಲೆ
ಗದಗ, ಅ.04: ನಗರದ ಮುಳಗುಂದ ನಾಕಾ ಬಳಿಯ ಎಸ್.ಬಿ ಬೇಕರಿ ಎದುರು ಹಾಡಹಗಲೇ ಮಹಿಳೆಯ ಕೊಲೆ ನಡೆದಿದ್ದು ಗದಗ ಬೆಟಗೇರಿ ಜನರು ಬೆಚ್ಚಿಬಿದ್ದಿದ್ದಾರೆ.
ನಗರದ ಗಂಗಿಮಡಿ ಬಡಾವಣೆ ನಿವಾಸಿಯಾಗಿದ್ದ ಶೋಭಾ ಲಮಾಣಿ ಅಲಿಯಾಸ್ ಮಿನಾಜ್ ಬೇಪಾರಿ ಕೊಲೆಯಾದ ಮಹಿಳೆ. ಹಳೆಯ ದ್ವೇಷದ ಹಿನ್ನೆಲೆ ಚೇತನ್ ಕುಮಾರ್ ಹಾಗೂ ರೋಹನ್ ಕುಮಾರ್ ಹತ್ಯೆ ಮಾಡಿದ್ದಾರೆ ಅಂತಾ ಎಸ್.ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.
ನ್ಯಾಯಾಲಯದ ಕಲಾಪ ಮುಗಿಸಿಕೊಂಡು ಆಟೋ ಏರಿ ಮಧ್ಯಾಹ್ನ ನಗರದ ಎಸ್.ಬಿ ಬೇಕರಿ ಬಳಿ ಬಂದಾಕೆಯ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಮೃತ ಶೋಭಾ ಮಗುವಿಗಾಗಿ ಬೇಕರಿ ತಿನಿಸು ಖರೀದಿಸಲು ಬೇಕರಿಗೆ ಬಂದಿದ್ದರು. ಅಲ್ಲೇ ಕಾಯ್ದು ಕೂತಿದ್ದ ಇಬ್ಬರು ಆರೋಪಿಗಳು ಚಾಕುವಿನಿಂದ ಕತ್ತು ಸೀಳಿಸಿದ್ದಾರೆ.

ಆಕೆ ಪ್ರತಿರೋಧವೊಡ್ಡಿದಾಗ ಕೈಗೆ ಚೂರಿ ಏಟು ಬಿದ್ದ ಗಾಯಗಳಾಗಿವೆ. ಸದ್ಯ ಘಟನೆ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಹಣ್ಣನ ಹತ್ಯೆಗೆ ಪ್ರತಿಕಾರವಾಗಿ ನಡೆದ ಹತ್ಯೆ..!
ಗದಗ ನಗರದ ಗಂಗಿಮಡಿಯಲ್ಲಿ 2020 ರಲ್ಲಿ ರಮೇಶ್ ಕುಮಾರ್ ಎಂಬಾತನ ಕೊಲೆ ನಡೆದಿದ್ದು. ಕೊಲೆ ಕೇಸ್ ವಿಚಾರವಾಗಿ ಶೋಭಾ ಅಲಿಯಾಸ್ ಮಿನಾಜ್ ಹಾಗೂ ಗಂಡ ವಾಸೀಂ ಬೇಪಾರಿ ಈ ಕೊಲೆಯಲ್ಲಿ ಭಾಗಿಯಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಇಬ್ಬರು ಹೊರ ಬಂದಿದ್ದರು. ಜಾಮೀನು ಪಡೆದ ನಂತರ ಇಬ್ಬರು ಹುಬ್ಬಳ್ಳಿಯಲ್ಲಿ ವಾಸವಿದ್ದರು.

ಕೋರ್ಟ್ ಕಲಾಪ ಇದ್ದಾಗ ಗದಗ ನಗರಕ್ಕೆ ಬರುತ್ತಿದ್ದರು. ಪ್ರಕರಣದ ವಿಚಾರಣೆಗೆ ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಶೋಭಾ ಬಂದಿದ್ದರು ಎನ್ನಲಾಗಿದೆ. ಇದೇ ವೇಳೆಗೆ ಕಾಯುತ್ತಿದ್ದ ಆರೋಪಿಗಳಾದ ಚೇತನ್ ಕುಮಾರ್, ರೋಹನ್ ಕುಮಾರ್ ಹತ್ಯೆ ಮಾಡಿದ್ದಾರೆ.
2020 ರಮೇಶ್ ಕೊಲೆ ಹಿನ್ನೆಲೆ ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನ ಪೊಲೀಸರು ಕಲೆಹಾಕುತ್ತಿದ್ದಾರೆ.












Click it and Unblock the Notifications