ಅ.29ರಂದು ತೋಂಟದಾರ್ಯ ಮಠದ ನೂತನ ಸ್ವಾಮೀಜಿಗಳ ಪೀಠಾರೋಹಣ
ಗದಗ, ಅಕ್ಟೋಬರ್ 28 : ತೋಂಟದಾರ್ಯ ಮಠದ 20ನೇ ಪೀಠಾಧಿಪತಿಗಳಾಗಿ ಸಿದ್ದರಾಮ ಸ್ವಾಮೀಜಿ ಆಯ್ಕೆಯಾಗಿದ್ದು ಸೋಮವಾರ ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ. ಮೊದಲು ನವೆಂಬರ್ 12ರಂದು ಪೀಠಾರೋಹಣ ಕಾರ್ಯಕ್ರಮ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಅವರು ತೋಂಟದಾರ್ಯ ಮಠದ ನೂತನ ಪೀಠಾಧಿಪತಿಗಳಾಗಿ ಆಯ್ಕೆಯಾಗಿದ್ದಾರೆ. ಮಠದ ಪೀಠಾಧಿಪತಿಯಾಗಿದ್ದ ಸಿದ್ದಲಿಂಗ ಸ್ವಾಮೀಜಿ ಅವರು ಅಕ್ಟೋಬರ್ 20ರಂದು ಲಿಂಗೈಕ್ಯರಾಗಿದ್ದರು.
ಅಕ್ಟೋಬರ್ 23ರಂದು ಮಠದಲ್ಲಿ ನಡೆದ ಸಭೆಯಲ್ಲಿ ನವೆಂಬರ್ 12ರಂದು ಸಿದ್ದರಾಮ ಸ್ವಾಮೀಜಿ ಪೀಠಾರೋಹಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಈಗ ದಿನಾಂಕವನ್ನು ಬದಲಾವಣೆ ಮಾಡಲಾಗಿದ್ದು, ಅಕ್ಟೋಬರ್ 29ರ ಸೋಮವಾರ ಕಾರ್ಯಕ್ರಮ ನಡೆಯಲಿದೆ.

ಮಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣ ಶೆಟ್ಟಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಭಾನುವಾರ ಸಂಜೆ 4 ಗಂಟೆಗೆ ನೂತನ ಪೀಠಾಧಿಪತಿಗಳ ಪುರ ಪ್ರವೇಶ ನಡೆಯಲಿದೆ. ಸೋಮವಾರ ಬೆಳಗ್ಗೆ 7 ರಿಂದ ಪೀಠಾರೋಹಣದ ವಿಧಿ-ವಿಧಾನಗಳು ಆರಂಭವಾಗಲಿವೆ' ಎಂದು ಹೇಳಿದ್ದಾರೆ.
ನವೆಂಬರ್ 11ರಂದು ಲಿಂಗೈಕ್ಯರಾಗಿರುವ ಸಿದ್ಧಲಿಂಗ ಸ್ವಾಮೀಜಿ ಅವರ ಪುಣ್ಯಸ್ಮರಣೋತ್ಸವ ಪೂರ್ವ ನಿಗದಿಯಂತೆ ನಡೆಯಲಿದೆ. ನವೆಂಬರ್ 12ರಂದು ಸಿದ್ದರಾಮ ಸ್ವಾಮೀಜಿ ಅವರಿಗೆ ಗುರುನಮನ ಸಲ್ಲಿಸಲಾಗುತ್ತದೆ.
ಮಠದ ಪರಂಪರೆ, ಧಾರ್ಮಿಕ ವಿಧಿವಿಧಾನಗಳ ಹಿನ್ನಲೆಯಲ್ಲಿ ಪೀಠಾರೋಹಣದ ದಿನಾಂಕ ಬದಲಿಸಲಾಗಿದೆ. ಪೀಠಾರೋಹಣದ ನಂತರ ಸಿದ್ದರಾಮ ಸ್ವಾಮೀಜಿ ಅವರು ಮೂಲ ಮಠವಾದ ಎಡೆಯೂರು ಸಿದ್ದಲಿಂಗೇಶ್ವರಕ್ಕೆ ಭೇಟಿ ನೀಡಲಿದ್ದಾರೆ.












Click it and Unblock the Notifications