ಜಿ.ಪಂ, ತಾ.ಪಂ ಚುನಾವಣೆ ಮುಂದೂಡಲು ಸರ್ಕಾರದ ಹುನ್ನಾರ: ಎಚ್.ಕೆ ಪಾಟೀಲ್ ಕಿಡಿ
ಗದಗ, ಫೆಬ್ರವರಿ 10: ರಾಜ್ಯ ಸರ್ಕಾರವು ತಾಲ್ಲೂಕು ಪಂಚಾಯತಿಯನ್ನು ರದ್ದು ಪಡಸಲು ಮುಂದಾಗಿದ್ದು, ಸಂವಿಧಾನದಲ್ಲಿ ತಿದ್ದುಪಡಿಯಾಗಿದ್ದನ್ನು ರಾಜ್ಯ ಸರಕಾರ ರದ್ದು ಪಡಿಸುವುದಕ್ಕೆ ಬರುವದಿಲ್ಲ. ಆದರೆ ಯಾವ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ ಪಾಟೀಲ್ ಪ್ರಶ್ನಿಸಿದರು.
ರಾಜ್ಯ ಸರಕಾರ ತಾಲ್ಲೂಕು ಪಂಚಾಯತ ವ್ಯವಸ್ಥೆ ರದ್ದು ಪಡಿಸುವ ವಿಚಾರ ಹಿನ್ನೆಲೆ ಗದಗನಲ್ಲಿ ಮಾತನಾಡಿದ ಗದಗ ಶಾಸಕ ಎಚ್.ಕೆ ಪಾಟೀಲ್ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರು.
ಗದಗ; ಪತ್ನಿ ಕೊಂದ ಆರೋಪಿ 17 ವರ್ಷಗಳ ಬಳಿಕ ಬಂಧನ!
ಸಂವಿಧಾನ ತಿದ್ದುಪಡಿ 73ರಲ್ಲಿ ಈ ಬಗ್ಗೆ ಬದಲಾವಣೆಯಾಗಿದೆ. ರಚನಾತ್ಮಕ ಹಾಗೂ ರಾಷ್ಟ್ರ ಕಟ್ಟುವ ಕೆಲಸದಲ್ಲಿ ತಾಲ್ಲೂಕು ಪಂಚಾಯತ ಪರಿಣಾಮಕಾರಿ ಆಗಿವೆ. ಇದರಲ್ಲಿ ಅಧಿಕಾರಿಶಾಹಿ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತದೆ ಎಂದು ಕಿಡಿಕಾರಿದರು.
ರಾಜ್ಯ ಸರಕಾರ ತಾಲ್ಲೂಕು ಪಂಚಾಯತಿ ವ್ಯವಸ್ಥೆ ಗಟ್ಟಿಗೊಳಿಸಬೇಕಾಗಿತ್ತು. ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ತಾಲೂಕು ಪಂಚಾಯತಿ ಪಾತ್ರ ಮಹತ್ವವಾಗಿದೆ. ಅಧಿಕಾರಿಗಳ ಸಭೆಯಲ್ಲಿ ಕೂತು ರದ್ದು ಮಾಡಬೇಕು ಎಂದು ಹೇಳಿದರೆ ಅದು ಸಮರ್ಪಕ ನಿಲುವಲ್ಲ. ಮೇ ತಿಂಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ ಚುನಾವಣೆ ನಡೆಯಲಿವೆ. ಚುನಾವಣೆ ಮುಂದೂಡಲಿಕ್ಕೆ ಸರಕಾರ ಈ ಹುನ್ನಾರ ನಡೆಸುತ್ತಿದೆ ಎಂದು ದೂರಿದರು.
ಬದಲಾವಣೆ ಹೆಸರಿನಲ್ಲಿ ಚುನಾವಣೆ ಮುಂದೂಡುವ ಪ್ರಯತ್ನ ಸಲ್ಲದು. ಇದರಿಂದ ಪಂಚಾಯತ್ ಹಾಗೂ ಗ್ರಾಮ ಸ್ವರಾಜ್ ವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಸರಕಾರ ಮಾಡುವ ಪ್ರಯತ್ನದಿಂದ ಕೋರ್ಟ್ ನಲ್ಲಿ ಮತ್ತೊಮ್ಮೆ ಮಂಗಳಾರತಿ ಆಗುತ್ತದೆ.
ಈಗಾಗಲೇ ಗ್ರಾಮ ಪಂಚಾಯತಿ ಚುನಾವಣಾ ವೇಳೆ ಸರಕಾರಕ್ಕೆ ಕೋರ್ಟ್ ನಿಂದ ಮಂಗಳಾರತಿಯಾಗಿದೆ. ಅದೇ ರೀತಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ ಚುನಾವಣೆ ವಿಚಾರದಲ್ಲಿ ಆಗುತ್ತದೆ. ಸರಕಾರ ಇಂತಹ ಕೆಟ್ಟ ಸಾಹಸಕ್ಕೆ ಮುಂದಾಗಬಾರದು ಎಂದು ಎಚ್.ಕೆ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.



Click it and Unblock the Notifications







