ಕೊರೊನಾ ಇಲ್ಲವೆಂದು ವೈದ್ಯರು ಹೇಳಿದರೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಗದಗ, ಏಪ್ರಿಲ್ 1: ಹೀಗಂತು ಯಾವುದೇ ಖಾಯಿಲೆ ಬಂದರೂ, ಕೊರೊನಾ ಬಂದಿದೆಯೇ ಎನ್ನುವ ಅನುಮಾನ ಬರುತ್ತದೆ. ಸಣ್ಣ ಜ್ವರ ಬಂದರೂ, ಕೊರೊನಾ ಇರಬಹುದು ಎಂದು ಭಯ ಶುರು ಆಗುತ್ತಿದೆ. ಇದೇ ರೀತಿಯ ಭಯದಿಂದ ಗದಗದ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೆ ಕಳೆದುಕೊಂಡಿದ್ದಾನೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದ ನಿವಾಸಿ ಗುರು ಸಂಗಪ್ಪ ಜಂಗಣ್ಣವರ (40) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ಈ ಘಟನೆ ನಡೆದಿದೆ. ಕೊರೊನಾ ಭಯದಿಂದ ಊರಿನ ಹೊರಗಿನ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾಗಡಿಯಲ್ಲೂ ಮದ್ಯ ಸಿಗದ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆ
ಗುರು ಸಂಗಪ್ಪ ಕೂಲಿ ಕೆಲಸ ಮಾಡಿಕೊಂಡು ಇದ್ದರು. ಕೆಲ ದಿನಗಳ ಹಿಂದೆ ಮಂಗಳೂರಿಗೆ ಕೆಲಸಕ್ಕಾಗಿ ಹೋಗಿದ್ದರು. ಅಲ್ಲಿಂದ ವಾಪಸ್ ತಮ್ಮ ಊರಿಗೆ ಬಂದ ಬಳಿಕ ಜ್ವರ, ಶೀತ, ಕೆಮ್ಮು ಬಂತು. ಈ ರೋಗಗಳು ಕೊರೊನಾ ಲಕ್ಷಣಗಳು ಆಗಿದ್ದ ಕಾರಣ ನನಗೆ ಕೊರೊನಾ ಬಂದಿದೆ ಎಂದು ಗುರು ಸಂಗಪ್ಪ ಭಯಗೊಂಡರು.
ಪತ್ನಿಯ ಮಾತಿನಂತೆ, ಶಾಂತಗೇರಿ ಸರ್ಕಾರಿ ಆಸ್ಪತ್ರೆಗೆ ಹೋದರು. ಪರೀಕ್ಷೆ ನಡೆಸಿದ ವೈದ್ಯರು ಕೊರೊನಾ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ವೈದ್ಯರು ಕೊರೊನಾ ಇಲ್ಲ ಎಂದರೂ, ನಂಬದ ಗುರು ಸಂಗಪ್ಪ ಕೊರೊನಾ ಭೀತಿಯಿಂದ ಪ್ರಾಣವನ್ನು ಕಳೆದುಕೊಂಡಿದ್ದಾನೆ.
ಕೊರೊನಾಕ್ಕಿಂತ ಕುಡಿಯೋದಕ್ಕೆ ಹೋಗ್ತಿದೆ ಪ್ರಾಣ: ಉಡುಪಿ ಯಾಕೆ ಫಸ್ಟ್?
ಈಗಾಗಲೇ ಗಜೇಂದ್ರ ಗಡ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ಮೃತನ ಪತ್ನಿಯಿಂದ ವಿವರ ಪಡೆದುಕೊಂಡಿದ್ದಾರೆ. ಕೊರೊನಾ ಭೀತಿಯಿಂದ ಪ್ರಾಣಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.