IAS: ಐಎಎಸ್ ವರ್ಗಾವಣೆ, 6 ತಿಂಗಳಿಗೆ ಗದಗ ಡಿಸಿ ವರ್ಗಾವಣೆ
ಗದಗ, ಜನವರಿ 07: ಕರ್ನಾಟಕ ಸರ್ಕಾರ ಆಡಳಿತ ಯಂತ್ರದಲ್ಲಿ ಕೆಲವು ಬದಲಾವಣೆ ಮಾಡಿದೆ. ಕೆಲ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ. ಗದಗ ಜಿಲ್ಲಾಧಿಕಾರಿಗಳನ್ನು ತಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ ಮಾಡಿದ್ದು, ಹೊಸ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮಂಗಳವಾರ ಈ ಕುರಿತು ಕರ್ನಾಟಕ ಸರ್ಕಾರ ಆದೇಶವನ್ನು ಹೊರಡಿಸಿದೆ. ಗದಗ ಜಿಲ್ಲಾಧಿಕಾರಿಯಾಗಿದ್ದ ಗೋವಿಂದ ರೆಡ್ಡಿ ಅವರನ್ನು ವರ್ಗಾವಣೆಗೊಳಿಸಲಾಗಿದೆ. ನೂತನ ಜಿಲ್ಲಾಧಿಕಾರಿಯಾಗಿ ಸಿ. ಎನ್. ಶ್ರೀಧರ ನೇಮಕ ಮಾಡಲಾಗಿದೆ.

ಸಿ. ಎಸ್. ಶ್ರೀಧರ (ಕೆಎನ್: 2012) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಾಮಾಜಿಕ ಲೆಕ್ಕಪರಿಶೋಧನೆ ವಿಭಾಗದ ನಿರ್ದೇಶಕರಾಗಿದ್ದರು. ಗದಗ ಜಿಲ್ಲಾಧಿಕಾರಿಯಾಗಿದ್ದ ಗೋವಿಂದ ರೆಡ್ಡಿ ಅವರನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಆದರೆ ಸ್ಥಳವನ್ನು ನಿಯುಕ್ತಿಗೊಳಿಸಿಲ್ಲ.
6 ತಿಂಗಳಿನಲ್ಲೇ ವರ್ಗಾವಣೆ: ಗೋವಿಂದ ರೆಡ್ಡಿ ಅವರು 2024ರ ಜುಲೈ 6ರಂದು ಗದಗ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಸಾಮಾನ್ಯವಾಗಿ ಎರಡು ವರ್ಷಗಳ ಕಾಲ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವುದಿಲ್ಲ. ಆದರೆ ಅಚ್ಚರಿ ಎಂಬಂತೆ ಆರು ತಿಂಗಳಿಗೆ ಗೋವಿಂದ ರೆಡ್ಡಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಗೋವಿಂದ ರೆಡ್ಡಿ ಅವರಿಗೂ ಮೊದಲು ವೈಶಾಲಿ ಎಂ. ಎಲ್. ಅವರು ಗದಗ ಜಿಲ್ಲಾಧಿಕಾರಿಯಾಗಿದ್ದರು. ಬೀದರ್ ಜಿಲ್ಲಾಧಿಕಾರಿಯಾಗಿದ್ದ ಗೋವಿಂದ ರೆಡ್ಡಿ ಅವರನ್ನು ಜುಲೈನಲ್ಲಿ ಗದಗ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.
ಇತ್ತೀಚಿನ ಐಎಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ
* ಡಿಸೆಂಬರ್ 25ರಂದು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ (ಕೆಎನ್: 2012) ವರ್ಗಾವಣೆ. ಕರ್ನಾಟಕ ಗೃಹ ಮಂಡಳಿ (ಕೆಹೆಚ್ಬಿ) ಆಯುಕ್ತರಾಗಿ ನೇಮಕ. ಕೋಲಾರ ಜಿಲ್ಲಾಧಿಕಾರಿಯಾಗಿ ಡಾ. ರವಿ ಎಂ. ಆರ್. (ಕೆಎನ್: 2012) ಅವರನ್ನು ತಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ನೇಮಕ.
* ಜನವರಿ 3, 2025ರಂದು ಡಾ. ರವಿಶಂಕರ್ ಜೆ. (ಕೆಎನ್: 2001) ಅಬಕಾರಿ ಇಲಾಖೆಯ ಆಯುಕ್ತರು, ಬೆಂಗಳೂರು. ತತ್ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ ಬೆಂಗಳೂರು ಹುದ್ದೆಗೆ ವರ್ಗಾವಣೆ.
* ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ ಹುದ್ದೆಯಲ್ಲಿದ್ದ ವಿ. ಅನ್ಬುಕುಮಾರ್ (ಕೆಎನ್: 2004) ವರ್ಗಾವಣೆ. ತತ್ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಹುದ್ದೆಗೆ ನೇಮಕ.
* ವೆಂಕಟೇಶ್ ಕುಮಾರ್ ಆರ್. (ಕೆಎನ್: 2010) ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ (ವೆಚ್ಚ) ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಚುನಾವಣೆಗಳು) ಬೆಂಗಳೂರು ವರ್ಗಾವಣೆ. ಮುಂದಿನ ಆದೇಶದ ತನಕ ಆಯುಕ್ತರು ಅಬಕಾರಿ ಇಲಾಖೆ ಹುದ್ದೆಗೆ ನೇಮಕಗೊಳಿಸಿ ಆದೇಶ.
* ಅಕ್ರಂ ಪಾಷಾ ಆಯುಕ್ತರು ಕರ್ನಾಟಕ ಹೌಸಿಂಗ್ ಬೋರ್ಡ್ ವರ್ಗಾವಣೆ. ಮುಂದಿನ ಆದೇಶದ ತನಕ ಆಯುಕ್ತರು ಹಿಂದುಳಿದ ವರ್ಗಗಳ ಇಲಾಖೆ ಹುದ್ದೆಗೆ ನೇಮಕ. ಈ ಹುದ್ದೆಯಲ್ಲಿದ್ದ ಕೆ. ಶ್ರೀನಿವಾಸ ಐಎಎಸ್ ಬಿಡುಗಡೆಗೊಳಿಸಿ ಆದೇಶ.












Click it and Unblock the Notifications