ಗದಗದಲ್ಲಿ ಧಾರಕಾರ ಮಳೆ ಅವಾಂತರ; ನೂರಕ್ಕೂ ಹೆಚ್ಚು ಮನೆಗಳು ಜಲಾವೃತ
ಗದಗ, ಜುಲೈ 28: ಜಿಲ್ಲೆಯ ಕೆಲವು ಭಾಗಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಬೆಟಗೇರಿಯಲ್ಲಿ ರಾಜಕಾಲುವೆ ತುಂಬಿ ಹರಿದು ಪ್ರವಾಹ ಉಂಟಾಗಿ ಹಲವಾರು ಮನೆಗಳಿಗೆ ನೀರು ತುಂಬಿ ಅವಾಂತರ ಸೃಷ್ಠಿಸಿದೆ. ಮನೆಗಳಲ್ಲದೆ, ಪೆಟ್ರೋಲ್ ಬಂಕ್ಗೂ ನೀರು ತುಂಬಿಕೊಂಡಿದ್ದು, ಲಕ್ಷಾಂತರ ರೂ ನಷ್ಟವಾಗಿದೆ.
ಬುಧವಾರ ರಾತ್ರಿ ಜನರು ನಿದ್ರಿಸುತ್ತಿರುವಾಗ ದಿಢೀರ್ ಸುರಿದ ಮಳೆಯಿಂದ ಸುಮಾರು 100 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ಮನೆಯೊಳಗೆ ನುಗ್ಗಿದ ಪರಿಣಾಮ ಎಲ್ಲಾ ವಸ್ತುಗಳು ನೀರಲ್ಲಿ ನಿಂತಿವೆ. ಆಹಾರ ಪದಾರ್ಥಗಳು, ಪೀಠೋಪಕರಣಗಳು, ಬಟ್ಟೆಗಳು ಸಹ ನೀರಲ್ಲಿ ತೋಯ್ದು ಜನರ ಬದುಕು ಬೀದಿಗೆ ಬೀಳುವಂತಾಗಿದೆ. ಮಕ್ಕಳು ಮಹಿಳೆಯರು, ವೃದ್ಧರು ಊಟ ನಿದ್ದೆ ಇಲ್ದೇ ಪರದಾಡಿದ್ದಾರೆ.
ನಗರದ ಪರ್ವತಗೌಡ ಪೆಟ್ರೋಲ್ ಬಂಕ್ನಲ್ಲಿ ಸಹಾ ನೀರು ಹೊಕ್ಕು ಲಕ್ಷಾಂತರ ರೂ. ಮೌಲ್ಯದ ಪೆಟ್ರೋಲ್ , ಡೀಸೆಲ್ ನಷ್ಟವಾಗಿದೆ . ಪೆಟ್ರೋಲ್ -ಡೀಸೆಲ್ ಟ್ಯಾಂಕ್ಗೆ ಮಳೆ ನೀರು ಹೊಕ್ಕಿದೆ. ಪರಿಣಾಮ ನೀರಿನ ಜೊತೆಗೆ ಪೆಟ್ರೋಲ್ ಮಿಶ್ರಣವಾಗಿ ವಾಹನಗಳಿಗೆ ಹಾಕದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿನ ಸಿಬ್ಬಂದಿಗಳು ಟ್ಯಾಂಕ್ನಲ್ಲಿನ ನೀರನ್ನ ಹೊರಹಾಕಿದ್ದಾರೆ.

ಅವೈಜ್ಞಾನಿಕ ರಾಜಕಾಲುವೆ ಕಾರಣ
ಇಷ್ಟೆಲ್ಲಾ ದುಸ್ಥಿತಿಗೆ ರಾಜಕಾಲುವೆಯಲ್ಲಿನ ಹೂಳೆತ್ತದಿರುವುದು ಒಂದು ಕಾರಣ ಮತ್ತು ರಾಜಕಾಲುವೆಯನ್ನ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರಿಂದ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೇ ನೀರೆಲ್ಲ ಬಡವಾಣೆಗಳಲ್ಲಿ ಹೊಕ್ಕುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಮನೆಗಳಿಗೆ ನೀರು ಹೊಕ್ಕಿರುವುದರಿಂದ ಶೀಘ್ರವಾಗಿ ಗಂಜಿ ಕೇಂದ್ರ ತೆರೆದು ನೆರವಾಗಬೇಕೆಂದು ಸ್ಥಳೀಯರಯ ಒತ್ತಾಯಿಸಿದ್ದಾರೆ.

ನಿದ್ದೆಯಿಲ್ಲದೆ ರಾತ್ರಿ ಕಳೆದ ಹಾಸ್ಟೆಲ್ ವಿದ್ಯಾರ್ಥಿಗಳು
ಗದಗ ನಗರದ ಹಾತಲಗೇರಿ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನ ಹತ್ತಿರವಿರುವ ಪೋಸ್ಟ್ ಮೆಟ್ರಿಕ್ ಬಾಯ್ಸ್ ಹಾಸ್ಟೆಲ್ ಒಳಗೆ ನುಗ್ಗಿದ ಮಳೆಯ ನೀರಿನಿಂದಾಗಿ ರಾತ್ರಿಯಿಡಿ ವಿದ್ಯಾರ್ಥಿಗಳು ಮಲಗಲು ಸಾಧ್ಯವಾಗದೇ ಪರದಾಟ ನಡೆಸಿದರು. ಎಷ್ಟೋ ಬಾರಿ ಮೇಲಧಿಕಾರಿಗಳಿಗೆ ವಿಧ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನ ತಿಳಿಸಿದರೂ ಸಹಾ, ಇದಕ್ಕೆ ಪರಿಹಾರ ಸಿಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

4 ವರ್ಷಗಳಿಂದ ಸಮಸ್ಯೆ
ರಾತ್ರಿ ಮೂರು ಗಂಟೆ ಸುಮಾರಿಗೆ ಏಕಾಏಕಿ ರಾಜಕಾಲುವೆ ನೀರು ಮನೆಗೆ ನುಗ್ಗಿದೆ. ನೀರನ್ನು ಹೊರ ಹಾಕುವುದಕ್ಕೆ ಜನರು ಹರಸಾಹಸವನ್ನೇ ಪಡುವಂತಾಗಿದೆ. ನಾಲ್ಕು ವರ್ಷಗಳ ಹಿಂದೆಯೂ ಈ ಬಡಾವಣೆಯಲ್ಲಿ ನೀರು ಜಮಾಯಿಸಿ ಬಡಾವಣೆ ಜನರು ಹೈರಾಣಾಗಿದ್ದರು, ಇದೀಗ ಬುಧವಾರ ಸುರಿದ ಮಳೆ ಮತ್ತೆ ಅದೇ ಕರಾಳ ನೆನಪನ್ನು ಮರುಕಳಿಸುವಂತೆ ಮಾಡಿದೆ.

ಸೇತುವೆ ಮೇಲೆ ಹರಿಯುತ್ತಿರುವ ನೀರು
ಕೊಪ್ಪಳ ಜಿಲ್ಲೆಯಾದ್ಯಂತ ಧಾರಕಾರ ಮಳೆಯಾಗಿದ್ದು, ಹಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸಿಂಗನಾಳ-ತೊಂಡಿಹಾಳ ಗ್ರಾಮಗಳಿಗೆ ಸಂಪರ್ಕ ಕಡಿತಕೊಂಡಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಕೆಲವು ಯುವಕರು ಅಪಾಯ ಲೆಕ್ಕಿಸದೇ ಬೈಕ್ ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲೂ ಇದೇ ರೀತಿ ಮಳೆಯಿಂದ ಸಮಸ್ಯೆ ಎದರಾಗುತ್ತಿದ್ದು, ಸೇತುವೆಯನ್ನು ಎತ್ತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಶಿವಮೊಗ್ಗ, ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲೂ ಮಳೆಯಾಗುತ್ತಿದೆ. ಶಿವಮೊಗ್ಗದ ಬಾಪೂಜಿ ನಗರದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ, ಬಡಾವಣೆ ಸಂಪೂರ್ಣ ಜಲಾವೃತಗೊಂಡಿವೆ. ಅವೈಜ್ಞಾನಿಕ ಮತ್ತು ಕಳಪೆ ಸ್ಮಾರ್ಟ್ ಸಿಟಿ ಕಾಮಗಾರಿ ಯಡವಟ್ಟಿಂದ್ದಾಗಿ ಮಳೆ ನೀರು ಹರಿದು ಹೋಗದಿರುವ ಕಾರಣ ರಸ್ತೆಗಳೆಲ್ಲಾ ಜಲಾವೃತಗೊಂಡಿವೆ, ಹಾಸನದಲ್ಲಿಲ್ಲೂ ರಾತ್ರಿ ಮಳೆಯಾಗಿದ್ದು, ಪೇಟೆ ಬೀದಿಯಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ಆಹಾರ ಧಾನ್ಯಗಳು ನೀರು ಪಾಲಾಗಿವೆ.












Click it and Unblock the Notifications