ಗದಗದಲ್ಲಿ ಶ್ರೀರಾಮುಲು ರಹಸ್ಯ ಸಭೆ, ಮನೆಗೆ ಭೇಟಿ ನೀಡಿದ ನಾಯಕ ಯಾರು?
ಗದಗ, ಫೆಬ್ರವರಿ 03: ಕರ್ನಾಟಕದ ಬಿಜೆಪಿ ನಾಯಕರು ತಂಡ ತಂಡವಾಗಿ ಬೇರೆ ಬೇರೆ ಕಡೆಯಲ್ಲಿದ್ದಾರೆ. ರಾಜ್ಯಾಧ್ಯಕ್ಷ ಬಿ. ವೈ. ವಿಯಜೇಂದ್ರ ಶಿವಮೊಗ್ಗದಲ್ಲಿದ್ದಾರೆ. ರಮೇಶ್ ಜಾರಕಿಹೊಳಿ ನೇತೃತ್ವದ ತಂಡವೊಂದು ದೆಹಲಿಯಲ್ಲಿದೆ. ಇತ್ತ ಮಾಜಿ ಸಚಿವ ಬಿ. ಶ್ರೀರಾಮುಲು ಗದಗ ನಿವಾಸದಲ್ಲಿ ರಹಸ್ಯ ಸಭೆಯನ್ನು ನಡೆಸುವ ಮೂಲಕ ಸೋಮವಾರ ಕುತೂಹಲ ಹುಟ್ಟುಹಾಕಿದ್ದಾರೆ.
ಕೆಲವು ದಿನಗಳಿಂದ ಮಾಜಿ ಸಚಿವ ಬಿ. ಶ್ರೀರಾಮುಲು ರಾಜ್ಯ, ಕೇಂದ್ರ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದರೂ ದೆಹಲಿಗೆ ಅವರು ಹೋಗಿಲ್ಲ.

ಇಂತಹ ಸಮಯದಲ್ಲಿ ಬಿ. ಶ್ರೀರಾಮುಲು ಗದಗ ನಿವಾಸದಲ್ಲಿ ಸೋಮವಾರ ರಹಸ್ಯ ಸಭೆಯೊಂದು ನಡೆದಿದೆ. ಬಿಜೆಪಿ ನಾಯಕ, ಮಾಜಿ ಶಾಸಕ ಪಿ. ರಾಜೀವ್ ಶ್ರೀರಾಮುಲು ನಿವಾಸಕ್ಕೆ ಭೇಟಿ ನೀಡಿದ್ದರು. ಹೈಕಮಾಂಡ್ ಕರೆದರೂ ಹೋಗದ ಬಿ. ಶ್ರೀರಾಮುಲು ಮುಂದೇನು ಮಾಡಲಿದ್ದಾರೆ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಬಿ. ಶ್ರೀರಾಮುಲು ಹೇಳಿಕೆ: ಸೋಮವಾರ ಗದಗದಲ್ಲಿ ಮಾತನಾಡಿ ಬಿ. ಶ್ರೀರಾಮುಲು, "ಹಾಲು ಕೊಡುವ ಮತ್ತು ಹಾಲು ಕೊಡದ ಎಮ್ಮೆಯನ್ನು ಒಂದೇ ಸಾಲಿನಲ್ಲಿ ಕಟ್ಟಿ ಹಾಕುವುದು ಸರಿಯಲ್ಲ, ಅದನ್ನು ಯಾರೂ ಒಪ್ಪುವುದೂ ಇಲ್ಲ" ಎಂದು ಹೇಳಿದರು.
"ಪಕ್ಷದಲ್ಲಿ ಯಾರಾದರೂ ತಪ್ಪು ಮಾಡಿದರೆ ಅವರನ್ನು ಹೈಕಮಾಂಡ್ ಕಾರ್ಯಕರ್ತ ಎಂದು ಪರಿಗಣಿಸಬೇಕು. ಕೆಲಸ ಮಾಡವವರು, ಮಾಡದವರನ್ನು ಒಂದೇ ಸಾಲಿನಲ್ಲಿ ಕಟ್ಟಿ ಹಾಕುವ ಕೆಲಸವಾಗುತ್ತದೆ. ಹೈಕಮಾಂಡ್ ಮುಂದೆ ಯಾರೂ ಸಹ ದೊಡ್ಡವರಲ್ಲ" ಎಂದು ತಿಳಿಸಿದರು.
"ಯಾವುದೇ ವಿಚಾರಗಳು ಪರಿಹಾರವಾಗಬೇಕಾದರೆ ಹೈಕಮಾಂಡ್ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಮುಂದೆ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರೆ ಖಡಕ್ ಸೂಚನೆ, ನಿರ್ಧಾರವನ್ನು ರಾಷ್ಟ್ರೀಯ ನಾಯಕರು ಕೈಗೊಳ್ಳಬೇಕು" ಎಂದು ಬಿ. ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಗೆ ಏಕೆ ಹೋಗಿಲ್ಲ ಎಂದು ವಿವರಣೆ ನೀಡಿದ ಬಿ. ಶ್ರೀರಾಮುಲು, "ನಾನು ಮೊದಲಿನಿಂದಲೂ ಹೈಕಮಾಂಡ್ ನಾಯಕರ ಸಂಪರ್ಕದಲ್ಲಿದ್ದೇನೆ. ಆಗಾಗ ಅವರನ್ನು ಭೇಟಿ ಮಾಡಿ ಎಲ್ಲಾ ವಿಚಾರಗಳ ಕುರಿತು ಚರ್ಚಿಸುತ್ತೇನೆ. ಸದ್ಯ ವೈಯಕ್ತಿಕ ಕೆಲಸ ಇರುವ ಕಾರಣ ಹೋಗಲು ಸಾಧ್ಯವಾಗಲಿಲ್ಲ" ಎಂದು ಸ್ಪಷ್ಟಪಡಿಸಿದರು.
"ಪಕ್ಷದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಪ್ರತಿಯೊಬ್ಬರು ತಮ್ಮ ಮನಸ್ಸಿನಲ್ಲಿರುವ ಭಾವನೆ ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. ಸಂಸದ ಡಾ. ಕೆ. ಸುಧಾಕರ್, ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮಲ್ಲಿರುವ ನೋವು ಅನಿಸಿಕೆ ಕೇಳಿಕೊಳ್ಳಲಿ. ಹೈಕಮಾಂಡ್ ಬಳಿಕ ತನ್ನ ತೀರ್ಮಾನ ಕೈಗೊಳ್ಳಲಿ" ಎಂದು ಬಿ. ಶ್ರೀರಾಮುಲು ಸಲಹೆ ನೀಡಿದರು.
"ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಅಂತಹ ಸಂದರ್ಭ ಬಂದರೆ ಪತ್ರಿಕಾಗೋಷ್ಠಿ ನಡೆಸುತ್ತೇನೆ. ಎಲ್ಲವನ್ನೂ ಹೇಳಿಯೇ ಮಾಡುತ್ತೇನೆ. ಪಕ್ಷ ಬಿಡುವ ಸಂದರ್ಭ ಬಂದರೆ ನನ್ನನ್ನು ಯಾರು ತಡೆಯುತ್ತಾರೆ. ಇದು ಸರಿ ಹೋಗುತ್ತದೆ ಎಂದರೆ ಸರಿ ಹೋಗುತ್ತದೆ, ಸರಿ ಹೋಗುವುದಿಲ್ಲ ಎಂದರೆ ಸರಿ ಹೋಗುವುದಿಲ್ಲ ಎಂದು ನೇರವಾಗಿ ನಾನು ಹೇಳುತ್ತೇನೆ" ಎಂದು ಬಿ. ಶ್ರೀರಾಮುಲು ಹೇಳಿದರು.












Click it and Unblock the Notifications