ಗದಗ: ಒಂಬತ್ತು ತಿಂಗಳ ಮಗುವಿಗೆ ಎಲೆ ಅಡಿಕೆ ತಿನಿಸಿದ ಅಜ್ಜಿ: ಹಸುಗೂಸು ಸಾವು
ಗದಗ, ನವೆಂಬರ್ 25: ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಒಂಬತ್ತು ತಿಂಗಳ ಮಗುವಿಗೆ ಎಲೆ ಅಡಿಕೆ ತಿನಿಸಿದ ಅಜ್ಜಿಯೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ನವೆಂಬರ್ 22 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದ ನಾಗರತ್ನ ಅವರ ಚೊಚ್ಚಲ ಮಗು ಸಾವನ್ನಪ್ಪಿದೆ. ನಾಗರತ್ನ ಹೆರಿಗೆಯಾದ 5 ತಿಂಗಳ ಬಳಿಕ ತಾಯಿ ಮನೆಯಿಂದ ಗಂಡನ ಮನೆಗೆ ಬಂದಿದ್ದರು. ಹಸುಗೂಸು ಮನೆಗೆ ಬಂದ ಸಂದರ್ಭದಲ್ಲಿ ಅತ್ತೆ ಸರೋಜ ಇಷ್ಟು ಬೇಗ ಮಗು ಬೇಕಿತ್ತಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇದಾದ ಕೆಲವೇ ತಿಂಗಳಲ್ಲಿ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಅತ್ತೆ ಸರೋಜ ಕೋಪದಲ್ಲಿ ಮಗುವಿಗೆ ಅಡಕೆ ಹೋಳು, ಎಲೆ ತಿನ್ನಿಸಿ ಕೊಲೆ ಮಾಡಿದ್ದಾರೆ ಎಂದು ನಾಗರತ್ನ ಅತ್ತೆ ಸರೋಜಾ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನವೆಂಬರ್ 22 ರಂದು ಘಟನೆ ನಡೆದಿದ್ದು ಆ ದಿನವೇ ಮಗುವಿನ ಅಂತಿಮ ವಿಧಿವಿಧಾನ ಪೂರೈಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.
ಸದ್ಯ ಮಗುವಿನ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ದೂರು ದಾಖಲಾಗಿರುವ ಕಾರಣ ಗಜೇಂದ್ರಗಡ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೀಗಾಗಿ ನಿನ್ನೆ (ನವೆಂಬರ್ 24)ರಂದು ಮಗುವಿನ ಶವ ಹೊರತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಗದಗ ಎಸಿ ವೆಂಕಟೇಶ ನಾಯಕ್, ಸಿಪಿಐ ಎಸ್ಎಸ್ ಬೀಳಗಿ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಣ್ಣ ಮುಂದೆಯೇ ಸೊಸೆ ಸಾವು ಕಂಡು ಕುಸಿದು ಬಿದ್ದು ಅತ್ತೆಯೂ ಸಾವು
ಮಂಡ್ಯ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೊಸೆ ಕಣ್ಣ ಮುಂದೆಯೇ ಸಾವನ್ನಪ್ಪಿದ ದೃಶ್ಯ ನೋಡಿದ ಅತ್ತೆಯೂ ಸಹ ಕುಸಿದು ಬಿದ್ದು ಬೆಂಗಳೂರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.
ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಕಾಡಅಂಕನಹಳ್ಳಿ ಗ್ರಾಮದ ನಂಜುಂಡೇಗೌಡರ ಪತ್ನಿ ಹುಚ್ಚಮ್ಮ(80) ಮತ್ತು ಕಲ್ಯಾಣಗೌಡರ ಪತ್ನಿ ಸುಶೀಲಮ್ಮ(46) ಮೃತ ದುರ್ದೈವಿಗಳು. ಮೃತ ಸುಶೀಲಮ್ಮ ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾಘಟಕದಲ್ಲಿ ಎರಡುದಿನಗಳ ಕಾಲ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಆರ್ಥಿಕ ಸಮಸ್ಯೆ ಹಿನ್ನಲೆಯಲ್ಲಿ ಸುಶೀಲಮ್ಮ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ರೋಗಿಯ ಪೋಷಕರು ಮನವಿ ಮಾಡಿಕೊಂಡಿದ್ದರು.
ವಾಣಿವಿಲಾಸ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸ್ಸು ಮಾಡಿದ್ದರು. ಸುಶೀಲಮ್ಮ ಅವರನ್ನು ವಾಣಿವಿಲಾಸ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸುಶೀಲಮ್ಮ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಕಣ್ಣೆದುರೇ ತನ್ನ ಸೊಸೆ ಸಾವನ್ನಪ್ಪಿದ್ದ ದೃಶ್ಯ ನೋಡಿದ ಅತ್ತೆ ಹುಚ್ಚಮ್ಮ ಇದ್ದಕ್ಕಿದ್ದಂತೆ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ.












Click it and Unblock the Notifications